Kannada Translation - Hamza Buturಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ನಿರಂತರ ಜೀವಿಸುವವನು ಮತ್ತು ಎಲ್ಲವನ್ನೂ ಸಂರಕ್ಷಿಸಿ ನಿಯಂತ್ರಿಸುವವನಾಗಿದ್ದಾನೆ.
Kannada Translation - Hamza Buturಅವನು ನಿಮಗೆ ಈ ಗ್ರಂಥವನ್ನು ಸತ್ಯದೊಂದಿಗೆ ಅವತೀರ್ಣಗೊಳಿಸಿದ್ದಾನೆ. ಇದು ಹಿಂದಿನ ಗ್ರಂಥಗಳನ್ನು ದೃಢೀಕರಿಸುತ್ತದೆ. ಅವನು ತೌರಾತ್ ಮತ್ತು ಇಂಜೀಲನ್ನು ಕೂಡ ಅವತೀರ್ಣಗೊಳಿಸಿದ್ದನು.
Kannada Translation - Hamza Buturಇದಕ್ಕಿಂತ ಮೊದಲು ಜನರಿಗೆ ಸನ್ಮಾರ್ಗದರ್ಶಿಯಾಗಿ. ಅವನು (ಸತ್ಯಾಸತ್ಯವನ್ನು ಬೇರ್ಪಡಿಸಿ ತೋರಿಸುವ) ಕುರ್ಆನನ್ನು ಕೂಡ ಅವತೀರ್ಣಗೊಳಿಸಿದ್ದಾನೆ. ನಿಶ್ಚಯವಾಗಿಯೂ ಅಲ್ಲಾಹನ ವಚನಗಳನ್ನು ನಿಷೇಧಿಸುವವರು ಯಾರೋ—ಅವರಿಗೆ ಕಠಿಣ ಶಿಕ್ಷೆಯಿದೆ. ಅಲ್ಲಾಹು ಪ್ರಬಲನು ಮತ್ತು ಪ್ರತೀಕಾರ ಪಡೆಯುವವನಾಗಿದ್ದಾನೆ.
Kannada Translation - Hamza Buturತಾಯಿಯ ಗರ್ಭದಲ್ಲಿ ಅವನು ಇಚ್ಛಿಸುವ ರೀತಿಯಲ್ಲಿ ನಿಮಗೆ ರೂಪ ಕೊಡುವವನು ಅವನೇ. ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ಅವನು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturನಿಮಗೆ ಗ್ರಂಥವನ್ನು ಅವತೀರ್ಣಗೊಳಿಸಿದ್ದು ಅವನೇ. ಅದರಲ್ಲಿ ಸ್ಪಷ್ಟ ವಚನಗಳಿವೆ.[1] ಅವು ಗ್ರಂಥದ ಮೂಲಗಳಾಗಿವೆ. (ಅದರಲ್ಲಿ) ಹೋಲಿಕೆಯಿರುವ ಕೆಲವು ವಚನಗಳೂ ಇವೆ. ಹೃದಯದಲ್ಲಿ ವಕ್ರತೆಯಿರುವವರು, ಗೊಂದಲವನ್ನು ಸೃಷ್ಟಿಸಲು ಮತ್ತು ತಪ್ಪಾಗಿ ವ್ಯಾಖ್ಯಾನಿಸಲು ಹೋಲಿಕೆಯಿರುವ ವಚನಗಳ ಹಿಂದೆ ಬೀಳುತ್ತಾರೆ. ಆದರೆ, ಅಲ್ಲಾಹನ ಹೊರತು ಯಾರೂ ಅದರ ವ್ಯಾಖ್ಯಾನವನ್ನು ತಿಳಿದಿಲ್ಲ. ಜ್ಞಾನದಲ್ಲಿ ಸದೃಢರಾಗಿರುವವರು ಹೇಳುತ್ತಾರೆ: “ನಾವು ಅದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಎಲ್ಲವೂ ನಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದಾಗಿದೆ.” ಬುದ್ಧಿವಂತರ ಹೊರತು ಇನ್ನಾರೂ ಉಪದೇಶವನ್ನು ಪಡೆಯುವುದಿಲ್ಲ.
Kannada Translation - Hamza Butur“ಓ ನಮ್ಮ ಪರಿಪಾಲಕನೇ! ನಮ್ಮನ್ನು ಸನ್ಮಾರ್ಗಕ್ಕೆ ಸೇರಿಸಿದ ಬಳಿಕ ನಮ್ಮ ಹೃದಯಗಳನ್ನು ವಕ್ರಗೊಳಿಸಬೇಡ. ನಮಗೆ ನಿನ್ನ ಕಡೆಯಿಂದ ದಯೆಯನ್ನು ಸುರಿಸು. ನಿಶ್ಚಯವಾಗಿಯೂ ನೀನು ಅತಿದೊಡ್ಡ ಉದಾರಿಯಾಗಿರುವೆ.
Kannada Translation - Hamza Buturಓ ನಮ್ಮ ಪರಿಪಾಲಕನೇ! ನಿಶ್ಚಯವಾಗಿಯೂ ಒಂದು ದಿನ ನೀನು ಎಲ್ಲಾ ಜನರನ್ನೂ ಒಟ್ಟುಗೂಡಿಸುವೆ. ಆ ದಿನ ಬರುವುದರಲ್ಲಿ ಸಂಶಯವೇ ಇಲ್ಲ. ನಿಶ್ಚಯವಾಗಿಯೂ ಅಲ್ಲಾಹು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.”
Kannada Translation - Hamza Buturಫರೋಹನ ಜನರ ಮತ್ತು ಅವರಿಗಿಂತ ಹಿಂದಿನವರ ಸ್ಥಿತಿಯಂತೆ. ಅವರು ನಮ್ಮ ವಚನಗಳನ್ನು ನಿಷೇಧಿಸಿದರು. ಆಗ ಅಲ್ಲಾಹು ಅವರ ಪಾಪಗಳ ನಿಮಿತ್ತ ಅವರನ್ನು ಶಿಕ್ಷಿಸಿದನು. ಅಲ್ಲಾಹು ಅತಿಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
Kannada Translation - Hamza Buturಸತ್ಯನಿಷೇಧಿಗಳೊಡನೆ ಹೇಳಿರಿ: “ಸದ್ಯದಲ್ಲೇ ನಿಮ್ಮನ್ನು ಸೋಲಿಸಲಾಗುವುದು ಮತ್ತು ನರಕದ ಕಡೆಗೆ ಒಟ್ಟುಗೂಡಿಸಲಾಗುವುದು. ಆ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ.”[1]
Kannada Translation - Hamza Butur(ಬದ್ರ್ನಲ್ಲಿ) ಮುಖಾಮುಖಿಯಾದ ಆ ಎರಡು ಬಣಗಳಲ್ಲಿ ನಿಶ್ಚಯವಾಗಿಯೂ ನಿಮಗೆ ದೃಷ್ಟಾಂತವಿದೆ. ಒಂದು ಬಣವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಿತ್ತು. ಇನ್ನೊಂದು ಬಣವು ಸತ್ಯನಿಷೇಧಿಗಳದ್ದಾಗಿತ್ತು. ಅವರು ತಮ್ಮ ದೃಷ್ಟಿಯಲ್ಲಿ ಸತ್ಯವಿಶ್ವಾಸಿಗಳನ್ನು ತಮಗಿಂತ ಇಮ್ಮಡಿ ಸಂಖ್ಯೆಯಲ್ಲಿ ಕಾಣುತ್ತಿದ್ದರು. ಅಲ್ಲಾಹು ತನ್ನ ಸಹಾಯದಿಂದ ತಾನು ಇಚ್ಛಿಸುವವರನ್ನು ಬೆಂಬಲಿಸುತ್ತಾನೆ. ನಿಶ್ಚಯವಾಗಿಯೂ ಅದರಲ್ಲಿ ದೃಷ್ಟಿಯುಳ್ಳವರಿಗೆ ನೀತಿಪಾಠವಿದೆ.
Kannada Translation - Hamza Buturಮಹಿಳೆಯರು, ಗಂಡುಮಕ್ಕಳು, ಬಂಗಾರ ಮತ್ತು ಬೆಳ್ಳಿಯನ್ನು ಸಂಗ್ರಹಿಸಿಡಲಾದ ಖಜಾನೆಗಳು, ಉತ್ಕೃಷ್ಟ ತಳಿಯ ಕುದುರೆಗಳು, ಜಾನುವಾರುಗಳು, ಕೃಷಿಗಳು ಮುಂತಾದ ಜನರು ಮೋಹಿಸುವ ವಸ್ತುಗಳಲ್ಲಿರುವ ಪ್ರೀತಿಯನ್ನು ಅವರಿಗೆ ಅಲಂಕರಿಸಿಕೊಡಲಾಗಿದೆ. ಅವು ಇಹಲೋಕ ಜೀವನದ ಆನಂದಗಳಾಗಿವೆ. ಮರಳಿ ತಲುಪಬೇಕಾದ ಅತ್ಯುತ್ತಮ ಸ್ಥಳವು ಅಲ್ಲಾಹನ ಬಳಿಯಿದೆ.
Kannada Translation - Hamza Buturಹೇಳಿರಿ: “ಅದಕ್ಕಿಂತಲೂ ಉತ್ತಮವಾದ ವಸ್ತುವನ್ನು ನಾನು ನಿಮಗೆ ತಿಳಿಸಿಕೊಡಲೇ? ದೇವಭಯವುಳ್ಳವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅವರಿಗೆ ಪರಿಶುದ್ಧ ಸಂಗಾತಿಗಳಿದ್ದಾರೆ ಮತ್ತು ಅಲ್ಲಾಹನ ಕಡೆಯ ಸಂಪ್ರೀತಿಯೂ ಇದೆ. ಅಲ್ಲಾಹು ತನ್ನ ದಾಸರನ್ನು ನೋಡುತ್ತಿದ್ದಾನೆ.”
Kannada Translation - Hamza Buturಅವರು (ದೇವಭಯವುಳ್ಳವರು) ಯಾರೆಂದರೆ: “ಓ ನಮ್ಮ ಪರಿಪಾಲಕನೇ! ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು” ಎಂದು ಹೇಳುವವರು.
Kannada Translation - Hamza Buturಅವರು ತಾಳ್ಮೆಯುಳ್ಳವರು, ಸತ್ಯವಂತರು, ವಿಧೇಯರು, ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವವರು ಮತ್ತು ರಾತ್ರಿಯ ಅಂತ್ಯ ಯಾಮಗಳಲ್ಲಿ ಕ್ಷಮೆಯಾಚಿಸುವವರು.
Kannada Translation - Hamza Buturತನ್ನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ ಎಂದು ಅಲ್ಲಾಹು ಸಾಕ್ಷಿವಹಿಸಿದ್ದಾನೆ, ಅವನ ದೇವದೂತರುಗಳು ಮತ್ತು ವಿದ್ವಾಂಸರು (ಕೂಡ ಸಾಕ್ಷಿವಹಿಸಿದ್ದಾರೆ). ಅವನು ಸ್ಥಿರವಾಗಿ ನ್ಯಾಯವನ್ನು ಪಾಲಿಸುವವನು. ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಬೇರೆ ದೇವರಿಲ್ಲ.
Kannada Translation - Hamza Buturನಿಶ್ಚಯವಾಗಿಯೂ ಅಲ್ಲಾಹನ ಬಳಿ (ಸ್ವೀಕಾರವಾಗುವ) ಧರ್ಮವು ಇಸ್ಲಾಮ್ ಮಾತ್ರ. ಗ್ರಂಥ ನೀಡಲಾದವರು ಅವರಿಗೆ ಜ್ಞಾನವು ಬಂದ ಬಳಿಕವೇ ಹೊರತು ಭಿನ್ನರಾಗಲಿಲ್ಲ. ಅದು ಅವರು ಪರಸ್ಪರ ಹೊಂದಿದ್ದ ವಿದ್ವೇಷ ಮತ್ತು ಅಸೂಯೆಯ ಕಾರಣದಿಂದಾಗಿತ್ತು. ಯಾರು ಅಲ್ಲಾಹನ ದೃಷ್ಟಾಂತಗಳನ್ನು ನಿಷೇಧಿಸುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ಅವರನ್ನು ಅತಿ ಶೀಘ್ರವಾಗಿ ವಿಚಾರಣೆ ಮಾಡುವನು.
Kannada Translation - Hamza Buturಅದರ ನಂತರವೂ ಅವರು ನಿಮ್ಮೊಡನೆ ತರ್ಕ ಮಾಡಿದರೆ ನೀವು ಹೇಳಿರಿ: “ನಾನು ಮತ್ತು ನನ್ನ ಅನುಯಾಯಿಗಳು ನಮ್ಮ ಮುಖಗಳನ್ನು ಸಂಪೂರ್ಣವಾಗಿ ಅಲ್ಲಾಹನಿಗೆ ಶರಣಾಗಿಸಿದ್ದೇವೆ.” ಗ್ರಂಥ ನೀಡಲಾದವರೊಂದಿಗೆ ಮತ್ತು ಅನಕ್ಷರಸ್ಥರೊಂದಿಗೆ (ಅರಬ್ ಬಹುದೇವಾರಾಧಕರೊಂದಿಗೆ) ಕೇಳಿರಿ: “ನೀವು ಶರಣಾಗಿದ್ದೀರಾ?” ಅವರು ಶರಣಾದರೆ ಅವರು ಸನ್ಮಾರ್ಗವನ್ನು ಪಡೆಯುತ್ತಾರೆ. ಆದರೆ ಅವರು ಮುಖ ತಿರುಗಿಸಿ ನಡೆದರೆ ನಿಮ್ಮ ಕರ್ತವ್ಯವು ಅವರಿಗೆ ಸಂದೇಶವನ್ನು ತಲುಪಿಸಿಕೊಡುವುದು ಮಾತ್ರ. ಅಲ್ಲಾಹು ತನ್ನ ದಾಸರನ್ನು ನೋಡುತ್ತಿದ್ದಾನೆ.
Kannada Translation - Hamza Buturಅಲ್ಲಾಹನ ವಚನಗಳನ್ನು ನಿಷೇಧಿಸುವವರು, ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುವವರು ಮತ್ತು ನ್ಯಾಯ ಪಾಲಿಸಲು ಆದೇಶಿಸುವ ಜನರನ್ನು ಹತ್ಯೆ ಮಾಡುವವರು ಯಾರೋ—ಅವರಿಗೆ ಯಾತನಾಮಯ ಶಿಕ್ಷೆಯ ಬಗ್ಗೆ ಸುವಾರ್ತೆಯನ್ನು ತಿಳಿಸಿರಿ.
Kannada Translation - Hamza Buturಗ್ರಂಥದಿಂದ ಒಂದು ಪಾಲು ನೀಡಲಾದವರನ್ನು (ಯಹೂದಿಗಳನ್ನು) ನೀವು ನೋಡಿಲ್ಲವೇ? ಅವರ (ಯಹೂದಿಗಳ) ನಡುವೆ ತೀರ್ಪು ನೀಡಲು ಅವರನ್ನು ಅಲ್ಲಾಹನ ಗ್ರಂಥಕ್ಕೆ ಕರೆಯಲಾಗುತ್ತದೆ. ಅದರ ನಂತರವೂ ಅವರಲ್ಲೊಂದು ಗುಂಪು ಮುಖ ತಿರುಗಿಸಿ ವಿಮುಖರಾಗುತ್ತಾರೆ.
Kannada Translation - Hamza Buturಅದೇಕೆಂದರೆ ಅವರು ಹೇಳುತ್ತಾರೆ: “ಬೆರಳೆಣಿಕೆಯ ಕೆಲವು ದಿನಗಳ ಹೊರತು ನರಕಾಗ್ನಿಯು ನಮ್ಮನ್ನು ಸುಡುವುದಿಲ್ಲ.” ಅವರು ಏನು ಕಲ್ಪಿಸಿ ಹೇಳುತ್ತಿದ್ದಾರೋ ಅದು ಅವರನ್ನು ಅವರ ಧರ್ಮದ ವಿಷಯದಲ್ಲಿ ಮರುಳುಗೊಳಿಸಿದೆ.
Kannada Translation - Hamza Buturಯಾವುದೇ ಸಂಶಯವಿಲ್ಲದ ಒಂದು ದಿನ (ಪುನರುತ್ಥಾನ ದಿನ) ನಾವು ಅವರನ್ನು ಒಟ್ಟುಗೂಡಿಸಿದರೆ (ಅವರ ಸ್ಥಿತಿ) ಹೇಗಿರಬಹುದು? ಅಂದು ಪ್ರತಿಯೊಬ್ಬ ವ್ಯಕ್ತಿಗೂ ಅವನು ಮಾಡಿದ ಕರ್ಮಗಳ ಪ್ರತಿಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.
Kannada Translation - Hamza Buturಹೇಳಿರಿ: “ಓ ಸಾರ್ವಭೌಮತ್ವದ ಒಡೆಯನಾದ ಅಲ್ಲಾಹನೇ! ನೀನು ಇಚ್ಛಿಸುವವರಿಗೆ ನೀನು ಆಧಿಪತ್ಯವನ್ನು ನೀಡುವೆ ಮತ್ತು ನೀನು ಇಚ್ಛಿಸುವವರಿಂದ ಆಧಿಪತ್ಯವನ್ನು ಕಸಿಯುವೆ. ನೀನು ಇಚ್ಛಿಸುವವರಿಗೆ ಪ್ರತಿಷ್ಠೆಯನ್ನು ನೀಡುವೆ ಮತ್ತು ನೀನು ಇಚ್ಛಿಸುವವರನ್ನು ಅವಮಾನಕ್ಕೆ ಗುರಿಯಾಗಿಸುವೆ. ಒಳಿತುಗಳೆಲ್ಲವೂ ನಿನ್ನ ಕೈಯಲ್ಲಿದೆ. ನಿಶ್ಚಯವಾಗಿಯೂ ನೀನು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿರುವೆ.
Kannada Translation - Hamza Buturನೀನು ರಾತ್ರಿಯನ್ನು ಹಗಲಿನಲ್ಲಿ ತೂರಿಸುವೆ ಮತ್ತು ಹಗಲನ್ನು ರಾತ್ರಿಯಲ್ಲಿ ತೂರಿಸುವೆ. ನಿರ್ಜೀವಿಯಿಂದ ಜೀವಿಯನ್ನು ಹೊರತರುವೆ ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವೆ. ನೀನು ಇಚ್ಛಿಸುವವರಿಗೆ ನೀನು ಲೆಕ್ಕವಿಲ್ಲದೆ ನೀಡುವೆ.”
Kannada Translation - Hamza Buturಸತ್ಯವಿಶ್ವಾಸಿಗಳು ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಬಾರದು.[1] ಯಾರು ಹಾಗೆ ಮಾಡುತ್ತಾನೋ ಅವನಿಗೆ ಅಲ್ಲಾಹನಿಂದ ಯಾವುದೇ ರಕ್ಷಣೆಯಿಲ್ಲ. ಆದರೆ ಅವರ ಕೆಡುಕಿನಿಂದ ಪಾರಾಗುವ ಉದ್ದೇಶವಿದ್ದರೆ ಹೊರತು.[2] ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. (ಎಲ್ಲರೂ) ಅಲ್ಲಾಹನ ಬಳಿಗೇ ಮರಳಬೇಕಾಗಿದೆ.
Kannada Translation - Hamza Buturಹೇಳಿರಿ: “ನೀವು ನಿಮ್ಮ ಎದೆಗಳಲ್ಲಿರುವುದನ್ನು ಮುಚ್ಚಿಟ್ಟರೂ ಅಥವಾ ಬಹಿರಂಗಪಡಿಸಿದರೂ ಅಲ್ಲಾಹು ಅದನ್ನು ತಿಳಿಯುತ್ತಾನೆ. ಅವನು ಭೂಮ್ಯಾಕಾಶಗಳಲ್ಲಿರುವ ಎಲ್ಲವನ್ನೂ ತಿಳಿಯುತ್ತಾನೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.”
Kannada Translation - Hamza Buturಪ್ರತಿಯೊಬ್ಬನೂ ತಾನು ಮಾಡಿದ ಒಳಿತನ್ನು ಮತ್ತು ತಾನು ಮಾಡಿದ ಕೆಡುಕನ್ನು ತನ್ನ ಮುಂದೆ ಪ್ರದರ್ಶಿಸಿಟ್ಟಿರುವುದನ್ನು ನೋಡುವ ದಿನ. ತನ್ನ ಮತ್ತು ಅದರ (ಕೆಡುಕಿನ) ನಡುವೆ ವಿದೂರ ಅಂತರವಿರುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅವನು ಹಾರೈಸುವನು. ಅಲ್ಲಾಹು ತನ್ನ ಬಗ್ಗೆ ನಿಮ್ಮನ್ನು ಎಚ್ಚರಿಸುತ್ತಿದ್ದಾನೆ. ಅಲ್ಲಾಹನಿಗೆ ದಾಸರ ಮೇಲೆ ಅಪಾರ ಸಹಾನುಭೂತಿಯಿದೆ.
Kannada Translation - Hamza Buturಹೇಳಿರಿ: “ನೀವು ಅಲ್ಲಾಹನನ್ನು ಪ್ರೀತಿಸುವುದಾದರೆ ನನ್ನನ್ನು ಅನುಸರಿಸಿರಿ. ಅಲ್ಲಾಹು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.”
Kannada Translation - Hamza Buturಇಮ್ರಾನರ ಪತ್ನಿ ಹೇಳಿದ ಸಂದರ್ಭ: “ಓ ನನ್ನ ಪರಿಪಾಲಕನೇ! ನನ್ನ ಗರ್ಭದಲ್ಲಿರುವುದನ್ನು ನಾನು ನಿನ್ನ ಹೆಸರಲ್ಲಿ ಸ್ವತಂತ್ರಗೊಳಿಸುವೆನೆಂದು[1] ಹರಕೆ ಹೊತ್ತಿದ್ದೇನೆ. ನೀನು ಅದನ್ನು ನನ್ನಿಂದ ಸ್ವೀಕರಿಸು. ನಿಶ್ಚಯವಾಗಿಯೂ ನೀನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿರುವೆ.”
Kannada Translation - Hamza Buturನಂತರ ಆಕೆ ಮಗುವಿಗೆ ಜನ್ಮ ನೀಡಿದಾಗ ಹೇಳಿದಳು: “ಓ ನನ್ನ ಪರಿಪಾಲಕನೇ! ನಾನು ಹೆಣ್ಣು ಮಗುವಿಗೆ ಜನ್ಮ ನೀಡಿದ್ದೇನೆ!” ಅವಳು ಯಾರಿಗೆ ಜನ್ಮ ನೀಡಿದ್ದಾಳೆಂದು ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ಗಂಡು ಹೆಣ್ಣಿನಂತಲ್ಲ! “ನಾನು ಅವಳಿಗೆ ಮರ್ಯಮ್ ಎಂದು ಹೆಸರಿಟ್ಟಿದ್ದೇನೆ; ಅವಳನ್ನು ಮತ್ತು ಅವಳ ಸಂತಾನವನ್ನು ಬಹಿಷ್ಕೃತ ಶೈತಾನನಿಂದ ಕಾಪಾಡಲು ನಿನ್ನ ರಕ್ಷಣೆಗೆ ಒಪ್ಪಿಸುತ್ತೇನೆ.”
Kannada Translation - Hamza Buturಅವಳ ಪರಿಪಾಲಕ (ಅಲ್ಲಾಹು) ಅವಳನ್ನು ಉತ್ತಮ ರೀತಿಯಲ್ಲಿ ಸ್ವೀಕರಿಸಿ ಉತ್ತಮ ರೀತಿಯಲ್ಲಿ ಬೆಳೆಸಿದನು. ಅವಳ ಪಾಲನೆ-ಪೋಷಣೆ ಮಾಡುವ ಹೊಣೆಯನ್ನು ಝಕರಿಯ್ಯಾರಿಗೆ ಒಪ್ಪಿಸಿದನು. ಝಕರಿಯ್ಯಾ ಅವಳ ಕೋಣೆಗೆ ತೆರಳಿದಾಗಲೆಲ್ಲ ಅವಳ ಬಳಿ ಏನಾದರೊಂದು ಆಹಾರವನ್ನು ಕಾಣುತ್ತಿದ್ದರು. ಅವರು ಕೇಳಿದರು: “ಓ ಮರ್ಯಮ್! ಇದು ನಿನಗೆಲ್ಲಿಂದ ದೊರೆಯುತ್ತದೆ?” ಅವಳು ಉತ್ತರಿಸಿದಳು: “ಅದು ಅಲ್ಲಾಹನ ಬಳಿಯಿಂದ. ನಿಶ್ಚಯವಾಗಿಯೂ ಅಲ್ಲಾಹು ಅವನು ಇಚ್ಛಿಸುವವರಿಗೆ ಲೆಕ್ಕವಿಲ್ಲದೆ ದಯಪಾಲಿಸುತ್ತಾನೆ.”
Kannada Translation - Hamza Buturಅಲ್ಲಿ ಝಕರಿಯ್ಯಾ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಕರೆದು ಪ್ರಾರ್ಥಿಸಿದರು: “ಓ ನನ್ನ ಪರಿಪಾಲಕನೇ! ನಿನ್ನ ಕಡೆಯಿಂದ ನನಗೊಂದು ಪರಿಶುದ್ಧ ಸಂತಾನವನ್ನು ಕರುಣಿಸು. ನಿಶ್ಚಯವಾಗಿಯೂ ನೀನು ಪ್ರಾರ್ಥನೆಗೆ ಕಿವಿಗೊಡುವವನಾಗಿರುವೆ.”
Kannada Translation - Hamza Buturಅವರು ಕೋಣೆಯಲ್ಲಿ ನಿಂತು ನಮಾಝ್ ಮಾಡುತ್ತಿದ್ದಾಗ, ದೇವದೂತರುಗಳು ಅವರನ್ನು ಕರೆದು ಹೇಳಿದರು: “ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ಯಹ್ಯಾ (ಎಂಬ ಮಗುವಿ)ನ ಸುವಾರ್ತೆಯನ್ನು ತಿಳಿಸುತ್ತಿದ್ದಾನೆ. ಅವರು (ಯಹ್ಯಾ) ಅಲ್ಲಾಹನ ಕಡೆಯ ವಚನವನ್ನು ದೃಢೀಕರಿಸುವವರು, ಸರದಾರರು, ಆತ್ಮಸಂಯಮವುಳ್ಳವರು ಮತ್ತು ನೀತಿವಂತರಲ್ಲಿ ಸೇರಿದ ಪ್ರವಾದಿಯಾಗಿರುವರು.”
Kannada Translation - Hamza Buturಝಕರಿಯ್ಯಾ ಕೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಮಗು ಹುಟ್ಟುವುದು ಹೇಗೆ? ನಾನು ಮುದುಕನಾಗಿದ್ದೇನೆ ಮತ್ತು ನನ್ನ ಹೆಂಡತಿ ಬಂಜೆಯಾಗಿದ್ದಾಳೆ.” ಅಲ್ಲಾಹು ಹೇಳಿದನು: “ಹಾಗೆಯೇ ಆಗಿದೆ. ಅಲ್ಲಾಹು ಅವನು ಇಚ್ಛಿಸುವುದನ್ನು ಮಾಡುತ್ತಾನೆ.”
Kannada Translation - Hamza Buturಝಕರಿಯ್ಯಾ ಹೇಳಿದರು: “ಓ ನನ್ನ ಪರಿಪಾಲಕನೇ! ನನಗೊಂದು ದೃಷ್ಟಾಂತವನ್ನು ಮಾಡಿ ತೋರಿಸು.” ಅಲ್ಲಾಹು ಹೇಳಿದನು: “ನಿಮಗಿರುವ ದೃಷ್ಟಾಂತವೇನೆಂದರೆ, ನೀವು ಮೂರು ದಿನಗಳ ಕಾಲ ಜನರೊಡನೆ ಸನ್ನೆಯ ಮೂಲಕವಲ್ಲದೆ ಮಾತನಾಡುವುದಿಲ್ಲ. ನೀವು ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಅತ್ಯಧಿಕವಾಗಿ ಸ್ಮರಿಸಿರಿ ಮತ್ತು ಸಂಜೆ ಹಾಗೂ ಮುಂಜಾನೆಗಳಲ್ಲಿ ಅವನ ಪರಿಶುದ್ಧಿಯನ್ನು ಕೊಂಡಾಡಿರಿ.”
Kannada Translation - Hamza Buturದೇವದೂತರುಗಳು ಹೇಳಿದ ಸಂದರ್ಭ: “ಓ ಮರ್ಯಮ್! ನಿಶ್ಚಯವಾಗಿಯೂ ಅಲ್ಲಾಹು ನಿಮ್ಮನ್ನು ವಿಶೇಷವಾಗಿ ಆರಿಸಿದ್ದಾನೆ. ನಿಮಗೆ ಪರಿಶುದ್ಧಿಯನ್ನು ದಯಪಾಲಿಸಿದ್ದಾನೆ ಮತ್ತು ಸರ್ವಲೋಕಗಳ ಮಹಿಳೆಯರಲ್ಲಿ ನಿಮ್ಮನ್ನು ವಿಶೇಷವಾಗಿ ಆರಿಸಿದ್ದಾನೆ.
Kannada Translation - Hamza Buturಇವೆಲ್ಲವೂ ಅದೃಶ್ಯ ಸಮಾಚಾರಗಳಾಗಿದ್ದು ನಾವು ನಿಮಗೆ ಇದನ್ನು ದೇವವಾಣಿಯ ಮೂಲಕ ತಿಳಿಸುತ್ತಿದ್ದೇವೆ. ಮರ್ಯಮರ ಪಾಲನೆ-ಪೋಷಣೆಯನ್ನು ಯಾರು ವಹಿಸಿಕೊಳ್ಳಬೇಕೆಂದು ನಿರ್ಧರಿಸಲು ಅವರು ತಮ್ಮ ಲೇಖನಿಗಳನ್ನು ಎಸೆದ ಸಂದರ್ಭದಲ್ಲಿ ನೀವು ಅವರ ಬಳಿಯಿರಲಿಲ್ಲ. ಅವರು ತರ್ಕಿಸುತ್ತಿರುವಾಗಲೂ ನೀವು ಅವರ ಬಳಿಯಿರಲಿಲ್ಲ.
Kannada Translation - Hamza Buturದೇವದೂತರುಗಳು ಹೇಳಿದ ಸಂದರ್ಭ: “ಓ ಮರ್ಯಮ್! ನಿಶ್ಚಯವಾಗಿಯೂ ಅಲ್ಲಾಹು ತನ್ನ ಒಂದು ವಚನದ ಬಗ್ಗೆ ನಿಮಗೆ ಸುವಾರ್ತೆಯನ್ನು ತಿಳಿಸುತ್ತಿದ್ದಾನೆ. ಅವರ ಹೆಸರು ಮರ್ಯಮರ ಮಗ ಮಸೀಹ್ ಈಸಾ. ಅವರು ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಪ್ರತಿಷ್ಠಿತರಾಗಿರುವರು ಮತ್ತು ಅಲ್ಲಾಹನ ಸಾಮೀಪ್ಯ ಗಳಿಸಿದವರಲ್ಲಿ ಸೇರಿದವರಾಗಿರುವರು.
Kannada Translation - Hamza Buturಮರ್ಯಮ್ ಕೇಳಿದರು: “ಓ ನನ್ನ ಪರಿಪಾಲಕನೇ! ನನಗೆ ಮಗುವಾಗುವುದು ಹೇಗೆ? ಯಾವುದೇ ಪುರುಷನು ನನ್ನನ್ನು ಸ್ಪರ್ಶಿಸಿಲ್ಲವಲ್ಲ.” ಅಲ್ಲಾಹು ಹೇಳಿದನು: “ಹಾಗೆಯೇ ಆಗಿದೆ. ಅಲ್ಲಾಹು ಅವನು ಇಚ್ಛಿಸುವುದನ್ನು ಸೃಷ್ಟಿಸುತ್ತಾನೆ. ಅವನು ಒಂದು ವಿಷಯವನ್ನು ತೀರ್ಮಾನಿಸಿದರೆ ಅದರೊಡನೆ ಉಂಟಾಗು ಎನ್ನುತ್ತಾನೆ. ಆಗ ಅದು ಉಂಟಾಗುತ್ತದೆ!
Kannada Translation - Hamza Buturಅವರನ್ನು ಇಸ್ರಾಯೇಲ್ ಮಕ್ಕಳ ಬಳಿಗೆ ಸಂದೇಶವಾಹಕರಾಗಿ ಕಳುಹಿಸುವನು. (ಅವರು ಹೇಳುವರು:) “ನಾನು ನಿಮ್ಮ ಪರಿಪಾಲಕನ (ಅಲ್ಲಾಹನ) ವಚನದೊಂದಿಗೆ ನಿಮ್ಮ ಬಳಿಗೆ ಬಂದಿದ್ದೇನೆ. ನಾನು ನಿಮಗೆ ಜೇಡಿಮಣ್ಣಿನಿಂದ ಹಕ್ಕಿಯ ಆಕೃತಿಯನ್ನು ರಚಿಸುತ್ತೇನೆ. ನಂತರ ನಾನು ಅದರಲ್ಲಿ ಊದುತ್ತೇನೆ. ಆಗ ಅದು ಅಲ್ಲಾಹನ ಅಪ್ಪಣೆಯಿಂದ ಹಕ್ಕಿಯಾಗಿ ಮಾರ್ಪಡುತ್ತದೆ. ನಾನು ಅಲ್ಲಾಹನ ಅಪ್ಪಣೆಯಿಂದ ಹುಟ್ಟು ಕುರುಡನನ್ನು ಮತ್ತು ಕುಷ್ಠರೋಗಿಯನ್ನು ಗುಣಪಡಿಸುತ್ತೇನೆ ಹಾಗೂ ಸತ್ತವರಿಗೆ ಜೀವ ನೀಡುತ್ತೇನೆ. ನೀವು ತಿನ್ನುವುದನ್ನು ಮತ್ತು ನೀವು ನಿಮ್ಮ ಮನೆಗಳಲ್ಲಿ ಸಂಗ್ರಹಿಸಿಡುವುದನ್ನು ನಾನು ನಿಮಗೆ ತಿಳಿಸುತ್ತೇನೆ. ನೀವು ಸತ್ಯವಿಶ್ವಾಸಿಗಳಾಗಿದ್ದರೆ ನಿಶ್ಚಯವಾಗಿಯೂ ಇದರಲ್ಲಿ ನಿಮಗೆ ದೃಷ್ಟಾಂತವಿದೆ.
Kannada Translation - Hamza Buturನಾನು ನನ್ನ ಮುಂದಿರುವ ತೌರಾತನ್ನು ದೃಢೀಕರಿಸುತ್ತೇನೆ. ನಿಮಗೆ ನಿಷೇಧಿಸಲಾಗಿರುವ ಕೆಲವು ವಸ್ತುಗಳನ್ನು ನಾನು ನಿಮಗೆ ಧರ್ಮಸಮ್ಮತಗೊಳಿಸುತ್ತೇನೆ. ನಾನು ನಿಮಗೆ ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ದೃಷ್ಟಾಂತವನ್ನು ತಂದಿರುದ್ದೇನೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ ಮತ್ತು ನನ್ನನ್ನು ಅನುಸರಿಸಿರಿ.
Kannada Translation - Hamza Buturನಂತರ ಈಸಾರಿಗೆ ಅವರ ಸತ್ಯನಿಷೇಧದ ಅರಿವಾದಾಗ ಅವರು ಹೇಳಿದರು: “ಅಲ್ಲಾಹನ ಮಾರ್ಗದಲ್ಲಿ ನನಗೆ ಯಾರು ಸಹಾಯ ಮಾಡುತ್ತೀರಿ?” ಹವಾರಿಗಳು[1] ಹೇಳಿದರು: “ನಾವು ಅಲ್ಲಾಹನ ಮಾರ್ಗದಲ್ಲಿ ಸಹಾಯ ಮಾಡುತ್ತೇವೆ. ನಾವು ಅಲ್ಲಾಹನಲ್ಲಿ ವಿಶ್ವಾಸವಿಟ್ಟಿದ್ದೇವೆ. ನಾವು (ಅಲ್ಲಾಹನಿಗೆ) ಶರಣಾಗಿದ್ದೇವೆ ಎಂಬುದಕ್ಕೆ ನೀವು ಸಾಕ್ಷಿಯಾಗಿರಿ.”
Kannada Translation - Hamza Butur“ಓ ನಮ್ಮ ಪರಿಪಾಲಕನೇ! ನೀನು ಅವತೀರ್ಣಗೊಳಿಸಿದ ಸಂದೇಶದಲ್ಲಿ ನಾವು ವಿಶ್ವಾಸವಿಟ್ಟಿದ್ದೇವೆ. ನಾವು ನಿನ್ನ ಸಂದೇಶವಾಹಕರನ್ನು ಅನುಸರಿಸಿದ್ದೇವೆ. ಆದ್ದರಿಂದ ನಮ್ಮನ್ನು ಸಾಕ್ಷಿಗಳಲ್ಲಿ ದಾಖಲಿಸು.”
Kannada Translation - Hamza Buturಅವರು (ಸತ್ಯನಿಷೇಧಿಗಳು) ತಂತ್ರಗಾರಿಕೆ ಮಾಡಿದರು. ಅಲ್ಲಾಹು ಕೂಡ ತಂತ್ರಗಾರಿಕೆ ಮಾಡಿದನು. ಅಲ್ಲಾಹು ತಂತ್ರಗಾರಿಕೆ ಮಾಡುವುದರಲ್ಲಿ ಅತ್ಯುತ್ತಮನಾಗಿದ್ದಾನೆ.
Kannada Translation - Hamza Buturಅಲ್ಲಾಹು ಹೇಳಿದ ಸಂದರ್ಭ: “ಓ ಈಸಾ! ನಿಶ್ಚಯವಾಗಿಯೂ ನಾನು ನಿಮ್ಮನ್ನು ಪೂರ್ಣವಾಗಿ ವಹಿಸಿಕೊಳ್ಳುವೆನು, ನಿಮ್ಮನ್ನು ನನ್ನ ಬಳಿಗೆ ಎತ್ತಿಕೊಳ್ಳುವೆನು ಮತ್ತು ಸತ್ಯನಿಷೇಧಿಗಳಿಂದ ನಿಮ್ಮನ್ನು ಪರಿಶುದ್ಧಗೊಳಿಸುವೆನು. ನಿಮ್ಮ ಅನುಯಾಯಿಗಳನ್ನು ಪುನರುತ್ಥಾನ ದಿನದವರೆಗೂ ಸತ್ಯನಿಷೇಧಿಗಳ ಮೇಲೆ ಪ್ರಬಲರನ್ನಾಗಿ ಮಾಡುವೆನು. ನಂತರ ನೀವು ನನ್ನ ಬಳಿಗೆ ಮರಳುವಿರಿ. ಆಗ ನೀವು ಭಿನ್ನಾಭಿಪ್ರಾಯ ತಳೆದ ವಿಷಯಗಳಲ್ಲಿ ನಾನು ನಿಮ್ಮ ನಡುವೆ ತೀರ್ಪು ನೀಡುವೆನು.
Kannada Translation - Hamza Buturಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರಿಗೆ ಅಲ್ಲಾಹು ಅವರ ಪ್ರತಿಫಲವನ್ನು ಪೂರ್ಣವಾಗಿ ನೀಡುವನು. ಅಲ್ಲಾಹು ಅಕ್ರಮವೆಸಗುವವರನ್ನು ಇಷ್ಟಪಡುವುದಿಲ್ಲ.
Kannada Translation - Hamza Buturಅಲ್ಲಾಹನ ದೃಷ್ಟಿಯಲ್ಲಿ ಈಸಾರ ಉದಾಹರಣೆಯು ಆದಮರಂತೆ. ಅವನು ಆದಮರನ್ನು ಮಣ್ಣಿನಿಂದ ಸೃಷ್ಟಿಸಿದನು. ನಂತರ ಅವರೊಡನೆ ಉಂಟಾಗು ಎಂದನು. ಆಗ ಅವರು ಉಂಟಾದರು.
Kannada Translation - Hamza Buturನಿಮ್ಮ ಬಳಿಗೆ ಜ್ಞಾನವು ಬಂದ ಬಳಿಕವೂ ಅವರ (ಈಸಾರ) ವಿಷಯದಲ್ಲಿ ಯಾರಾದರೂ ನಿಮ್ಮೊಂದಿಗೆ ತರ್ಕಿಸಿದರೆ ನೀವು ಹೇಳಿರಿ: “ಬನ್ನಿ! ನಾವು ನಮ್ಮ ಮಕ್ಕಳನ್ನು ಮತ್ತು ನಿಮ್ಮ ಮಕ್ಕಳನ್ನು, ನಮ್ಮ ಮಹಿಳೆಯರನ್ನು ಮತ್ತು ನಿಮ್ಮ ಮಹಿಳೆಯರನ್ನು, ನಮ್ಮನ್ನು ಮತ್ತು ನಿಮ್ಮನ್ನು (ಎಲ್ಲರನ್ನೂ) ಕರೆದು ಒಟ್ಟುಗೂಡೋಣ. ನಂತರ ಮನಸಾರೆ ಪ್ರಾರ್ಥಿಸಿ ಸುಳ್ಳು ಹೇಳುವವರ ಮೇಲೆ ಅಲ್ಲಾಹನ ಶಾಪವವಿರಲೆಂದು ಬೇಡಿಕೊಳ್ಳೋಣ.”[1]
Kannada Translation - Hamza Buturನಿಶ್ಚಯವಾಗಿಯೂ ಇದು ಸತ್ಯ ನಿರೂಪಣೆಯಾಗಿದೆ. ಅಲ್ಲಾಹನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಹೇಳಿರಿ: “ಓ ಗ್ರಂಥದವರೇ! ನಮ್ಮ ಮತ್ತು ನಿಮ್ಮ ನಡುವೆ ಸಮಾನವಾಗಿರುವ ವಚನದ ಕಡೆಗೆ ಬನ್ನಿರಿ. ಅಂದರೆ ನಾವು ಅಲ್ಲಾಹನ ಹೊರತು (ಇನ್ನಾರನ್ನೂ) ಆರಾಧಿಸದಿರೋಣ, ಅವನೊಂದಿಗೆ ಯಾರನ್ನೂ ಸಹಭಾಗಿಯನ್ನಾಗಿ ಮಾಡದಿರೋಣ ಮತ್ತು ನಮ್ಮಲ್ಲಿ ಒಬ್ಬರು ಇನ್ನೊಬ್ಬರನ್ನು ಅಲ್ಲಾಹನ ಹೊರತಾಗಿರುವ ಪರಿಪಾಲಕರನ್ನಾಗಿ ಮಾಡದಿರೋಣ.” ಅದರ ಬಳಿಕವೂ ಅವರು ವಿಮುಖರಾದರೆ (ಅವರೊಡನೆ) ಹೇಳಿರಿ: “ನಾವು ಮುಸ್ಲಿಮರಾಗಿದ್ದೇವೆ ಎಂಬುದಕ್ಕೆ ನೀವು ಸಾಕ್ಷಿಗಳಾಗಿರಿ.”
Kannada Translation - Hamza Buturಓ ಗ್ರಂಥದವರೇ! ನೀವು ಇಬ್ರಾಹೀಮರ ವಿಷಯದಲ್ಲಿ ಏಕೆ ತರ್ಕಿಸುತ್ತೀರಿ?[1] ತೌರಾತ್ ಮತ್ತು ಇಂಜೀಲ್ ಅವತೀರ್ಣವಾದದ್ದು ಅವರ ನಂತರವಲ್ಲವೇ! ನೀವು ಆಲೋಚಿಸುವುದಿಲ್ಲವೇ?
Kannada Translation - Hamza Buturನಿಮಗೆ ಜ್ಞಾನವಿರುವ ವಿಷಯದಲ್ಲಿ ನೀವು ತರ್ಕಿಸಿದ್ದೀರಿ. ಆದರೆ ಈಗ ನಿಮಗೆ ಜ್ಞಾನವಿಲ್ಲದ ವಿಷಯದಲ್ಲಿ ನೀವೇಕೆ ತರ್ಕಿಸುತ್ತೀರಿ? ಅಲ್ಲಾಹು ತಿಳಿದಿದ್ದಾನೆ. ಆದರೆ ನೀವು ತಿಳಿದಿಲ್ಲ.
Kannada Translation - Hamza Buturಇಬ್ರಾಹೀಮರು ಯಹೂದಿ ಅಥವಾ ಕ್ರಿಶ್ಚಿಯನ್ ಆಗಿರಲಿಲ್ಲ; ಆದರೆ ಅವರು ಏಕನಿಷ್ಠರು ಮತ್ತು ಮುಸ್ಲಿಮರಾಗಿದ್ದರು.[1] ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.
Kannada Translation - Hamza Buturನಿಶ್ಚಯವಾಗಿಯೂ ಜನರಲ್ಲಿ ಇಬ್ರಾಹೀಮರಿಗೆ ಹೆಚ್ಚು ಆಪ್ತರು ಯಾರೆಂದರೆ ಅವರನ್ನು ಅನುಸರಿಸಿದವರು; ಮತ್ತು ಈ ಪ್ರವಾದಿ ಹಾಗೂ (ಈ ಪ್ರವಾದಿಯಲ್ಲಿ) ವಿಶ್ವಾಸವಿಟ್ಟವರು. ಅಲ್ಲಾಹು ಸತ್ಯವಿಶ್ವಾಸಿಗಳ ರಕ್ಷಕನಾಗಿದ್ದಾನೆ.
Kannada Translation - Hamza Buturಗ್ರಂಥದವರ ಒಂದು ಪಂಗಡವು ನಿಮ್ಮನ್ನು ದಾರಿತಪ್ಪಿಸಲು ಬಯಸುತ್ತಿದೆ. ಆದರೆ (ವಾಸ್ತವವಾಗಿ) ಅವರು ಅವರನ್ನೇ ದಾರಿತಪ್ಪಿಸುತ್ತಿದ್ದಾರೆ. ಅವರು ಅದನ್ನು ತಿಳಿಯುವುದಿಲ್ಲ.
Kannada Translation - Hamza Buturಗ್ರಂಥದವರ ಒಂದು ಪಂಗಡವು (ಪರಸ್ಪರ) ಹೇಳುತ್ತಾರೆ: “ಹಗಲಿನ ಆರಂಭದಲ್ಲಿ (ಬೆಳಗ್ಗೆ) ಸತ್ಯವಿಶ್ವಾಸಿಗಳಿಗೆ ಅವತೀರ್ಣವಾದ ಸಂದೇಶದಲ್ಲಿ ವಿಶ್ವಾಸವಿಡಿ ಮತ್ತು ಹಗಲಿನ ಕೊನೆಯಲ್ಲಿ (ಸಂಜೆಯಾಗುವಾಗ) ನಿಷೇಧಿಸಿ ಬಿಡಿ. ಆಗ ಅವರು ಮರಳಿಬರಲೂಬಹುದು.”[1]
Kannada Translation - Hamza Butur(ಅವರು ಪರಸ್ಪರ ಹೇಳುತ್ತಾರೆ:) “ನಿಮ್ಮ ಧರ್ಮದ ಅನುಯಾಯಿಗಳನ್ನು ಬಿಟ್ಟು ಬೇರೆ ಯಾರನ್ನೂ ನೀವು ನಂಬಬೇಡಿ.” ಹೇಳಿರಿ: “ನಿಶ್ಚಯವಾಗಿಯೂ ಅಲ್ಲಾಹನ ಮಾರ್ಗದರ್ಶನವೇ ನಿಜವಾದ ಮಾರ್ಗದರ್ಶನ.” (ಅವರು ಪರಸ್ಪರ ಹೇಳುತ್ತಾರೆ): “ನಿಮಗೆ ನೀಡಲಾದಂತಹ (ಗ್ರಂಥವನ್ನು) ಬೇರೆ ಯಾರಿಗಾದರೂ ನೀಡಲಾಗಬಹುದು; ಅಥವಾ ಅವರು ನಿಮ್ಮ ಪರಿಪಾಲಕನ (ಅಲ್ಲಾಹನ) ಬಳಿ ನಿಮ್ಮೊಡನೆ ತರ್ಕಿಸುವರು ಎಂದು (ನೀವು ನಂಬಲೇಬೇಡಿ).” ಹೇಳಿರಿ: “ನಿಶ್ಚಯವಾಗಿಯೂ ಔದಾರ್ಯವಿರುವುದು ಅಲ್ಲಾಹನ ಕೈಯಲ್ಲಿ. ಅವನು ಇಚ್ಛಿಸುವವರಿಗೆ ಅವನು ಅದನ್ನು ದಯಪಾಲಿಸುತ್ತಾನೆ. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.”
Kannada Translation - Hamza Buturಗ್ರಂಥದವರಲ್ಲಿ ಕೆಲವರಿದ್ದಾರೆ. ನೀವು ಅವರ ಮೇಲೆ ನಂಬಿಕೆಯಿಟ್ಟು ಬಂಗಾರದ ರಾಶಿಯನ್ನು ತೆಗೆದಿಡಲು ಕೊಟ್ಟರೂ (ನೀವು ಕೇಳುವಾಗ) ಅವರು ಅದನ್ನು ನಿಮಗೆ ಹಿಂದಿರುಗಿಸುತ್ತಾರೆ. ಆದರೆ ಅವರಲ್ಲಿ ಬೇರೆ ಕೆಲವರಿದ್ದಾರೆ. ನೀವು ಅವರ ಮೇಲೆ ನಂಬಿಕೆಯಿಟ್ಟು ಒಂದು ಬಂಗಾರದ ನಾಣ್ಯವನ್ನು ತೆಗೆದಿಡಲು ಕೊಟ್ಟರೆ, ಪದೇ ಪದೇ ಕೇಳದೆ ಅವರು ಅದನ್ನು ನಿಮಗೆ ಹಿಂದಿರುಗಿಸುವುದಿಲ್ಲ. ಅದೇಕೆಂದರೆ ಅವರು ಹೇಳುತ್ತಾರೆ: “ಆ ಅನಕ್ಷರಸ್ಥರಿಗೆ (ಯಹೂದಿಗಳಲ್ಲದವರಿಗೆ) ಸಂಬಂಧಿಸಿದ ಯಾವುದೇ ವಿಷಯದಲ್ಲೂ ನಮಗೆ ಶಿಕ್ಷೆಯಿಲ್ಲ.” ಅವರು ತಿಳಿದೂ ಸಹ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಾರೆ.
Kannada Translation - Hamza Buturಹೌದು (ಅವರಿಗೆ ಶಿಕ್ಷೆಯಿದೆ). ಯಾರು ತನ್ನ ಕರಾರನ್ನು ನೆರವೇರಿಸುತ್ತಾರೋ ಮತ್ತು ಅಲ್ಲಾಹನನ್ನು ಭಯಪಡುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ದೇವಭಯವುಳ್ಳವರನ್ನು ಪ್ರೀತಿಸುತ್ತಾನೆ.
Kannada Translation - Hamza Buturನಿಶ್ಚಯವಾಗಿಯೂ ಅಲ್ಲಾಹನ ಕರಾರನ್ನು ಮತ್ತು ತಮ್ಮ ಆಣೆಗಳನ್ನು ಕೀಳು ದರಕ್ಕೆ ಮಾರಾಟ ಮಾಡುವವರು ಯಾರೋ—ಅವರಿಗೆ ಪರಲೋಕದಲ್ಲಿ ಯಾವುದೇ ಪಾಲಿಲ್ಲ. ಪುನರುತ್ಥಾನ ದಿನದಂದು ಅಲ್ಲಾಹು ಅವರೊಡನೆ ಮಾತನಾಡುವುದಿಲ್ಲ, ಅವರ ಕಡೆಗೆ ದೃಷ್ಟಿ ಬೀರುವುದಿಲ್ಲ ಮತ್ತು ಅವರನ್ನು ಶುದ್ಧೀಕರಿಸುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
Kannada Translation - Hamza Buturನಿಶ್ಚಯವಾಗಿಯೂ ಅವರಲ್ಲೊಂದು ಪಂಗಡವು ಗ್ರಂಥವನ್ನು ಪಠಿಸುವಾಗ ತಮ್ಮ ನಾಲಗೆಯನ್ನು ತಿರುಚುತ್ತಾರೆ. ಅದು ಗ್ರಂಥದ ಭಾಗವೆಂದು ನೀವು ಭಾವಿಸುವುದಕ್ಕಾಗಿ. ಆದರೆ ಅದು ಗ್ರಂಥದ ಭಾಗವಲ್ಲ. ಅವರು ಹೇಳುತ್ತಾರೆ: “ಅದು ಅಲ್ಲಾಹನ ಕಡೆಯಿಂದ ಬಂದಿದೆ.” ಆದರೆ ಅದು ಅಲ್ಲಾಹನ ಕಡೆಯಿಂದ ಬಂದಿಲ್ಲ. ಅವರು ತಿಳಿದೂ ಸಹ ಅಲ್ಲಾಹನ ಹೆಸರಲ್ಲಿ ಸುಳ್ಳು ಹೇಳುತ್ತಾರೆ.[1]
Kannada Translation - Hamza Buturಅಲ್ಲಾಹು ಒಬ್ಬ ಮನುಷ್ಯನಿಗೆ (ಪ್ರವಾದಿಗೆ) ಗ್ರಂಥ, ವಿವೇಕ ಮತ್ತು ಪ್ರವಾದಿತ್ವವನ್ನು ನೀಡಿ, ನಂತರ ಅವರು ಜನರೊಡನೆ, “ನೀವು ಅಲ್ಲಾಹನನ್ನು ಬಿಟ್ಟು ನನ್ನ ದಾಸರಾಗಿರಿ” ಎಂದು ಹೇಳುವುದು ಉಂಟಾಗಲಾರದು. ಬದಲಿಗೆ, (ಅವರು ಹೇಳುವುದೇನೆಂದರೆ): “ನೀವು ಗ್ರಂಥವನ್ನು ಕಲಿಸುತ್ತಿರುವುದರಿಂದ ಮತ್ತು ನೀವು ಸ್ವತಃ ಅದನ್ನು ಕಲಿಯುತ್ತಿರುವುದರಿಂದ ನೀವು ಅಲ್ಲಾಹನ ದಾಸರಾಗಿರಿ.”
Kannada Translation - Hamza Buturನೀವು ದೇವದೂತರುಗಳನ್ನು ಮತ್ತು ಪ್ರವಾದಿಗಳನ್ನು ದೇವರುಗಳನ್ನಾಗಿ ಮಾಡಿಕೊಳ್ಳಿರಿ ಎಂದು ಅವರು (ಪ್ರವಾದಿ) ನಿಮಗೆ ಆದೇಶಿಸುವುದಿಲ್ಲ. ನೀವು ಮುಸ್ಲಿಮರಾದ ಬಳಿಕ ಅವರು ನಿಮಗೆ ಸತ್ಯನಿಷೇಧಿಗಳಾಗಲು ಆದೇಶಿಸುವರೇ?
Kannada Translation - Hamza Buturಅಲ್ಲಾಹು ಪ್ರವಾದಿಗಳಿಂದ ಕರಾರನ್ನು ಪಡೆದ ಸಂದರ್ಭ: “ನಾನು ನಿಮಗೆ ಗ್ರಂಥ ಮತ್ತು ವಿವೇಕವನ್ನು ನೀಡಿ, ನಂತರ ನಿಮ್ಮ ಬಳಿಯಿರುವುದನ್ನು ದೃಢೀಕರಿಸುವ ಒಬ್ಬ ಸಂದೇಶವಾಹಕರು ನಿಮ್ಮ ಬಳಿಗೆ ಬಂದರೆ, ನೀವು ಅವರಲ್ಲಿ ವಿಶ್ವಾಸವಿಡಲೇಬೇಕು ಮತ್ತು ಅವರಿಗೆ ಸಹಾಯ ಮಾಡಲೇಬೇಕು.” ಅಲ್ಲಾಹು ಕೇಳಿದನು: “ಇದನ್ನು ಒಪ್ಪಿಕೊಂಡು ಈ ವಿಷಯದಲ್ಲಿ ನನ್ನ ಹೊಣೆಗಾರಿಕೆಯನ್ನು ನಿಭಾಯಿಸುವಿರಾ?” ಅವರು ಉತ್ತರಿಸಿದರು: “ನಾವು ಒಪ್ಪಿಕೊಂಡಿದ್ದೇವೆ.” ಅಲ್ಲಾಹು ಹೇಳಿದನು: “ಹಾಗಾದರೆ ನೀವು ಅದಕ್ಕೆ ಸಾಕ್ಷಿಗಳಾಗಿರಿ. ನಾನೂ ನಿಮ್ಮೊಂದಿಗೆ ಸಾಕ್ಷಿಯಾಗಿರುವೆನು.”[1]
Kannada Translation - Hamza Buturಅವರು ಅಲ್ಲಾಹನದ್ದಲ್ಲದ ಬೇರೆ ಧರ್ಮವನ್ನು ಹುಡುಕುತ್ತಿದ್ದಾರೆಯೇ? (ವಾಸ್ತವವಾಗಿ) ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಸ್ವಯಂಪ್ರೇರಿತವಾಗಿ ಅಥವಾ ಬಲವಂತವಾಗಿ ಅವನಿಗೆ ಶರಣಾಗಿದ್ದಾರೆ. ಅವರೆಲ್ಲರೂ ಅವನ ಬಳಿಗೇ ಮರಳಿಹೋಗುವರು.
Kannada Translation - Hamza Buturಹೇಳಿರಿ: “ನಾವು ಅಲ್ಲಾಹನಲ್ಲಿ, ನಮಗೆ ಅವತೀರ್ಣವಾಗಿರುವುದರಲ್ಲಿ, ಇಬ್ರಾಹೀಮರಿಗೆ, ಇಸ್ಮಾಈಲರಿಗೆ, ಇಸ್ಹಾಕರಿಗೆ, ಯಾಕೂಬರಿಗೆ ಮತ್ತು ಯಾಕೂಬರ ಸಂತಾನಕ್ಕೆ ಅವತೀರ್ಣವಾಗಿರುವುದರಲ್ಲಿ, ಮೂಸಾ ಮತ್ತು ಈಸಾರಿಗೆ ನೀಡಲಾಗಿರುವುದರಲ್ಲಿ, ಎಲ್ಲಾ ಪ್ರವಾದಿಗಳಿಗೂ ಅವರ ಪರಿಪಾಲಕನ ಕಡೆಯಿಂದ ನೀಡಲಾಗಿರುವುದರಲ್ಲಿ ವಿಶ್ವಾಸವಿಟ್ಟಿದ್ದೇವೆ. ಅವರಲ್ಲಿ ಯಾರ ನಡುವೆಯೂ ನಾವು ಬೇಧ ಮಾಡುವುದಿಲ್ಲ. ನಾವು ಅಲ್ಲಾಹನಿಗೆ ಸಂಪೂರ್ಣ ಶರಣಾಗಿದ್ದೇವೆ.”
Kannada Translation - Hamza Buturಯಾರು ಇಸ್ಲಾಂ ಅಲ್ಲದ ಬೇರೊಂದು ಧರ್ಮವನ್ನು ಹುಡುಕುತ್ತಾನೋ—ಅವನಿಂದ ಅದನ್ನು ಎಂದಿಗೂ ಸ್ವೀಕರಿಸಲಾಗುವುದಿಲ್ಲ. ಪರಲೋಕದಲ್ಲಿ ಅವನು ನಷ್ಟ ಹೊಂದಿದವರಲ್ಲಿ ಸೇರುವನು.
Kannada Translation - Hamza Buturಸತ್ಯವಿಶ್ವಾಸವನ್ನು ಸ್ವೀಕರಿಸಿ, ಸಂದೇಶವಾಹಕರನ್ನು ಸತ್ಯವೆಂದು ಸಾಕ್ಷ್ಯವಹಿಸಿ, ನಂತರ ತಮ್ಮ ಬಳಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ಬಂದ ಬಳಿಕವೂ ಸತ್ಯನಿಷೇಧಿಗಳಾದ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಾದರೂ ಹೇಗೆ? ಅಕ್ರಮವೆಸಗುವ ಜನರಿಗೆ ಅಲ್ಲಾಹು ಸನ್ಮಾರ್ಗವನ್ನು ತೋರಿಸುವುದಿಲ್ಲ.
Kannada Translation - Hamza Buturಆದರೆ ಯಾರು ಅದರ ಬಳಿಕ ಪಶ್ಚಾತ್ತಾಪಪಟ್ಟು, ಸ್ವಯಂ ತಿದ್ದಿಕೊಳ್ಳುತ್ತಾರೋ—ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Kannada Translation - Hamza Buturನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳಾದ ಬಳಿಕ ಸತ್ಯನಿಷೇಧಿಗಳಾದವರು ಮತ್ತು ತಮ್ಮ ಸತ್ಯನಿಷೇಧವನ್ನು ಹೆಚ್ಚಿಸುತ್ತಲೇ ಇರುವವರು ಯಾರೋ—ಅವರ ಪಶ್ಚಾತ್ತಾಪವು ಎಂದಿಗೂ ಸ್ವೀಕಾರವಾಗುವುದಿಲ್ಲ. ಅವರೇ ದಾರಿತಪ್ಪಿದವರು.
Kannada Translation - Hamza Buturಸತ್ಯನಿಷೇಧಿಗಳು ಮತ್ತು ಸತ್ಯನಿಷೇಧಿಗಳಾಗಿಯೇ ಸಾಯುವವರು ಯಾರೋ—ಅವರಲ್ಲೊಬ್ಬನು ಭೂಮಿ ತುಂಬಾ ಬಂಗಾರವನ್ನು ಪರಿಹಾರವಾಗಿ ನೀಡಿದರೂ ಸಹ ಅವನಿಂದ ಅದನ್ನು ಎಂದಿಗೂ ಸ್ವೀಕರಿಸಲಾಗುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ. ಅವರಿಗೆ ಯಾವುದೇ ಸಹಾಯಕರಿಲ್ಲ.
Kannada Translation - Hamza Buturನೀವು ಇಷ್ಟಪಡುವ ವಸ್ತುಗಳಿಂದ ಅಲ್ಲಾಹನ ಮಾರ್ಗದಲ್ಲಿ ಖರ್ಚು ಮಾಡುವ ತನಕ ನೀವೆಂದೂ ಒಳಿತನ್ನು ಗಳಿಸುವುದಿಲ್ಲ. ನೀವು ಯಾವುದೇ ವಸ್ತುವನ್ನು ಖರ್ಚು (ದಾನ) ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ.
Kannada Translation - Hamza Buturಇಸ್ರಾಯೇಲ್ ಮಕ್ಕಳಿಗೆ ಎಲ್ಲಾ ಆಹಾರಗಳೂ ಧರ್ಮಸಮ್ಮತವಾಗಿದ್ದವು—ತೌರಾತ್ ಅವತೀರ್ಣವಾಗುವ ಮುನ್ನ ಇಸ್ರಾಈಲರು (ಯಾಕೂಬರು) ಸ್ವಯಂ ನಿಷೇಧಿಸಿದವುಗಳ ಹೊರತು. ಹೇಳಿರಿ: “ನೀವು ತೌರಾತನ್ನು ತಂದು ಅದನ್ನು ಪಠಿಸಿರಿ; ನೀವು ಸತ್ಯವಂತರಾಗಿದ್ದರೆ.”
Kannada Translation - Hamza Buturಹೇಳಿರಿ: “ಅಲ್ಲಾಹು ಸತ್ಯವನ್ನೇ ಹೇಳಿದ್ದಾನೆ. ಆದ್ದರಿಂದ, ನೀವು ಏಕನಿಷ್ಠರಾದ ಇಬ್ರಾಹೀಮರ ಮಾರ್ಗವನ್ನು ಹಿಂಬಾಲಿಸಿರಿ. ಅವರು ಬಹುದೇವಾರಾಧಕರಲ್ಲಿ ಸೇರಿದವರಾಗಿರಲಿಲ್ಲ.”
Kannada Translation - Hamza Buturನಿಶ್ಚಯವಾಗಿಯೂ ಮಕ್ಕಾದಲ್ಲಿರುವ ಭವನವು ಮನುಷ್ಯರಿಗಾಗಿ ಸ್ಥಾಪಿಸಲಾದ ಮೊಟ್ಟಮೊದಲ ಆರಾಧನಾಲಯವಾಗಿದೆ. ಅದು ಸಮೃದ್ಧವೂ ಸರ್ವಲೋಕದವರಿಗೆ ಮಾರ್ಗದರ್ಶಿಯೂ ಆಗಿದೆ.
Kannada Translation - Hamza Buturಅದರಲ್ಲಿ ಸ್ಪಷ್ಟವಾದ ದೃಷ್ಟಾಂತಗಳಿವೆ. (ಅದರಲ್ಲಿ) ಇಬ್ರಾಹೀಮರು ನಿಂತ ಸ್ಥಳವಿದೆ. ಅದನ್ನು ಪ್ರವೇಶಿಸಿದವನು ನಿರ್ಭಯನಾಗುತ್ತಾನೆ. ಆ ಭವನಕ್ಕೆ ತಲುಪಲು ಸಾಧ್ಯವಿರುವ ಜನರು ಅಲ್ಲಿಗೆ ತೆರಳಿ ಹಜ್ಜ್ ನಿರ್ವಹಿಸುವುದನ್ನು ಅಲ್ಲಾಹು ಕಡ್ಡಾಯಗೊಳಿಸಿದ್ದಾನೆ. ಆದರೆ ಯಾರಾದರೂ ಅದನ್ನು ನಿಷೇಧಿಸಿದರೆ—ನಿಶ್ಚಯವಾಗಿಯೂ ಅಲ್ಲಾಹು ಸರ್ವಲೋಕದವರಿಂದ ಸಂಪೂರ್ಣ ನಿರಪೇಕ್ಷನಾಗಿದ್ದಾನೆ.
Kannada Translation - Hamza Buturಹೇಳಿರಿ: “ಓ ಗ್ರಂಥದವರೇ! ಸತ್ಯವಿಶ್ವಾಸ ಸ್ವೀಕರಿಸಿದವರನ್ನು ನೀವು ಅಲ್ಲಾಹನ ಮಾರ್ಗದಿಂದ ಏಕೆ ತಡೆಯುತ್ತೀರಿ ಮತ್ತು ಅದರಲ್ಲಿ ವಕ್ರತೆಯನ್ನು ಏಕೆ ಹುಡುಕುತ್ತೀರಿ? (ಅದು ನೇರವಾಗಿದೆ ಎಂಬುದಕ್ಕೆ) ನೀವೇ ಸಾಕ್ಷಿಗಳಾಗಿದ್ದೀರಿ. ನೀವು ಮಾಡುತ್ತಿರುವುದರ ಕುರಿತು ಅಲ್ಲಾಹು ತಿಳಿಯದವನಲ್ಲ.”
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಗ್ರಂಥ ನೀಡಲಾದವರಲ್ಲಿ ಸೇರಿದ ಪಂಗಡವನ್ನು ಅನುಸರಿಸಿದರೆ, ನೀವು ಸತ್ಯವಿಶ್ವಾಸಿಗಳಾದ ಬಳಿಕವೂ ಅವರು ನಿಮ್ಮನ್ನು ಸತ್ಯನಿಷೇಧಿಗಳನ್ನಾಗಿ ಮಾಡುವರು.
Kannada Translation - Hamza Buturನೀವು ಹೇಗೆ ಸತ್ಯನಿಷೇಧಿಗಳಾಗುವಿರಿ? ನಿಮಗೆ ಅಲ್ಲಾಹನ ವಚನಗಳನ್ನು ಓದಿಕೊಡಲಾಗುತ್ತಿದೆ ಮತ್ತು ನಿಮ್ಮ ನಡುವೆ ಅವನ ಸಂದೇಶವಾಹಕರಿದ್ದಾರೆ. ಯಾರು ಅಲ್ಲಾಹನನ್ನು (ಇಸ್ಲಾಂ ಧರ್ಮವನ್ನು) ಬಿಗಿಯಾಗಿ ಹಿಡಿಯುತ್ತಾನೋ ಅವನನ್ನು ನೇರಮಾರ್ಗಕ್ಕೆ ಮುನ್ನಡೆಸಲಾಗಿದೆ.
Kannada Translation - Hamza Buturನೀವೆಲ್ಲರೂ ಒಟ್ಟಾಗಿ ಅಲ್ಲಾಹನ ಹಗ್ಗವನ್ನು ಬಿಗಿಯಾಗಿ ಹಿಡಿಯಿರಿ. ವಿಭಿನ್ನ ಪಂಗಡಗಳಾಗಿ ಬೇರ್ಪಡಬೇಡಿ. ನೀವು ವೈರಿಗಳಾಗಿದ್ದಾಗ ಅಲ್ಲಾಹು ನಿಮಗೆ ದಯಪಾಲಿಸಿದ ಅನುಗ್ರಹವನ್ನು ಸ್ಮರಿಸಿರಿ. ಅವನು ನಿಮ್ಮ ಹೃದಯಗಳನ್ನು ಬೆಸೆದು, ಅವನ ಅನುಗ್ರಹದ ನಿಮಿತ್ತ ನೀವು ಪರಸ್ಪರ ಸಹೋದರರಾದಿರಿ. ನೀವು ಅಗ್ನಿಕುಂಡದ ಅಂಚಿನಲ್ಲಿದ್ದಿರಿ. ಆಗ ಅವನು ನಿಮ್ಮನ್ನು ಅದರಿಂದ ರಕ್ಷಿಸಿದನು. ಈ ರೀತಿ ಅಲ್ಲಾಹು ಅವನ ದೃಷ್ಟಾಂತಗಳನ್ನು ನಿಮಗೆ ವಿವರಿಸಿಕೊಡುತ್ತಾನೆ. ನೀವು ಸನ್ಮಾರ್ಗ ಪಡೆಯುವುದಕ್ಕಾಗಿ.
Kannada Translation - Hamza Buturಕೆಲವು ಮುಖಗಳು ಬೆಳ್ಳಗಾಗುವ ಮತ್ತು ಕೆಲವು ಮುಖಗಳು ಕರ್ರಗಾಗುವ ದಿನ! ಮುಖಗಳು ಕರ್ರಗಾದವರೊಡನೆ ಕೇಳಲಾಗುವುದು: “ನೀವು ಸತ್ಯವಿಶ್ವಾಸಿಗಳಾದ ಬಳಿಕ ಸತ್ಯನಿಷೇಧಿಗಳಾಗಿ ಬಿಟ್ಟಿರಾ? ನೀವು ಸತ್ಯನಿಷೇಧಿಗಳಾದ ಕಾರಣ ಶಿಕ್ಷೆಯ ರುಚಿಯನ್ನು ಸವಿಯಿರಿ.”
Kannada Translation - Hamza Buturಇವು ಅಲ್ಲಾಹನ ವಚನಗಳಾಗಿವೆ. ನಾವು ಇವುಗಳನ್ನು ನಿಮಗೆ ಸತ್ಯವಾಗಿ ಓದಿಕೊಡುತ್ತಿದ್ದೇವೆ. ಅಲ್ಲಾಹು ಸರ್ವಲೋಕದವರಿಗೆ ಅನ್ಯಾಯ ಮಾಡುವ ಇರಾದೆಯನ್ನು ಹೊಂದಿಲ್ಲ.
Kannada Translation - Hamza Buturನೀವು ಮನುಷ್ಯರಿಗಾಗಿ ಹೊರತರಲಾದ ಉತ್ತಮ ಸಮುದಾಯವಾಗಿದ್ದೀರಿ. ನೀವು ಒಳಿತನ್ನು ಆದೇಶಿಸುತ್ತೀರಿ, ಕೆಡುಕನ್ನು ವಿರೋಧಿಸುತ್ತೀರಿ ಮತ್ತು ಅಲ್ಲಾಹನಲ್ಲಿ ವಿಶ್ವಾಸವಿಡುತ್ತೀರಿ. ಗ್ರಂಥದವರು ಸತ್ಯವಿಶ್ವಾಸಿಗಳಾಗುತ್ತಿದ್ದರೆ ಅದು ಅವರಿಗೆ ಒಳಿತಾಗಿರುತ್ತಿತ್ತು. ಅವರಲ್ಲಿ ಸತ್ಯವಿಶ್ವಾಸಿಗಳಿದ್ದಾರೆ. ಆದರೆ ಅವರಲ್ಲಿ ಹೆಚ್ಚಿನವರು ದುಷ್ಕರ್ಮಿಗಳಾಗಿದ್ದಾರೆ.
Kannada Translation - Hamza Buturಕೆಲವು ಕೀಟಲೆಗಳನ್ನು ಬಿಟ್ಟರೆ ಅವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ಅವರು ನಿಮ್ಮೊಂದಿಗೆ ಯುದ್ಧ ಮಾಡಿದರೆ ಬೆನ್ನು ತಿರುಗಿಸಿ ಓಡುವರು. ನಂತರ ಅವರಿಗೆ ಯಾವುದೇ ಸಹಾಯವು ದೊರೆಯುವುದಿಲ್ಲ.
Kannada Translation - Hamza Buturಅವರು ಎಲ್ಲೇ ಇದ್ದರೂ ಅವರ ಮೇಲೆ ಅವಮಾನವನ್ನು ಹೇರಲಾಗಿದೆ. ಅಲ್ಲಾಹನ ಹಗ್ಗದ (ಕರಾರಿನ) ಅಥವಾ ಜನರ ಹಗ್ಗದ (ಕರಾರಿನ) ಆಶ್ರಯದಲ್ಲಿರುವವರ ಹೊರತು. ಅವರು ಅಲ್ಲಾಹನ ಕೋಪಕ್ಕೆ ಪಾತ್ರರಾಗಿದ್ದಾರೆ. ಅವರ ಮೇಲೆ ದರಿದ್ರತೆಯನ್ನು ಹೇರಲಾಗಿದೆ. ಅದೇಕೆಂದರೆ ಅವರು ಅಲ್ಲಾಹನ ವಚನಗಳನ್ನು ನಿಷೇಧಿಸುತ್ತಿದ್ದರು ಮತ್ತು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲ್ಲುತ್ತಿದ್ದರು. ಅದೇಕೆಂದರೆ ಅವರು ಅವಿಧೇಯತೆ ತೋರುತ್ತಿದ್ದರು ಮತ್ತು ಅತಿರೇಕವೆಸಗುತ್ತಿದ್ದರು.
Kannada Translation - Hamza Buturಅವರೆಲ್ಲರೂ ಒಂದೇ ರೀತಿಯಲ್ಲ. ರಾತ್ರಿ ವೇಳೆಯಲ್ಲಿ ಅಲ್ಲಾಹನ ವಚನಗಳನ್ನು ಪಠಿಸುತ್ತಾ ಮತ್ತು ಸಾಷ್ಟಾಂಗ ಮಾಡುತ್ತಾ (ಸತ್ಯದಲ್ಲಿ) ದೃಢವಾಗಿ ನಿಂತ ಒಂದು ಗುಂಪು ಗ್ರಂಥದವರಲ್ಲಿದೆ.
Kannada Translation - Hamza Buturಅವರು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೆ, ಒಳಿತನ್ನು ಆದೇಶಿಸುತ್ತಾರೆ ಮತ್ತು ಕೆಡುಕನ್ನು ವಿರೋಧಿಸುತ್ತಾರೆ ಹಾಗೂ ಸತ್ಕಾರ್ಯಗಳಲ್ಲಿ ತ್ವರೆ ಮಾಡುತ್ತಾ ಮುನ್ನುಗ್ಗುತ್ತಾರೆ. ಅವರೇ ನೀತಿವಂತರಲ್ಲಿ ಸೇರಿದವರು.
Kannada Translation - Hamza Buturನಿಶ್ಚಯವಾಗಿಯೂ ಸತ್ಯನಿಷೇಧಿಗಳು ಯಾರೋ—ಅವರಿಗೆ ಅವರ ಆಸ್ತಿಗಳು ಮತ್ತು ಮಕ್ಕಳು ಅಲ್ಲಾಹನ ಬಳಿ ಯಾವುದೇ ಉಪಕಾರ ಮಾಡುವುದಿಲ್ಲ. ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Kannada Translation - Hamza Buturಈ ಇಹಲೋಕ ಜೀವನದಲ್ಲಿ ಅವರು ಖರ್ಚು ಮಾಡುವುದನ್ನು ಸ್ಯಯಂ ಅಕ್ರಮವೆಸಗಿದ ಜನರ ಹೊಲದಲ್ಲಿ ಬಲವಾಗಿ ಬೀಸಿ, ನಂತರ ಅದನ್ನು ಸರ್ವನಾಶ ಮಾಡಿದ ಒಂದು ಶೀತಲ ಮಾರುತಕ್ಕೆ ಹೋಲಿಸಬಹುದು. ಅಲ್ಲಾಹು ಅವರಿಗೆ ಅನ್ಯಾಯ ಮಾಡಿಲ್ಲ. ಆದರೆ ಅವರು ಸ್ವಯಂ ಅನ್ಯಾಯವೆಸಗುತ್ತಿದ್ದಾರೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ನಿಮ್ಮವರನ್ನೇ ಹೊರತು ಬೇರೆ ಯಾರನ್ನೂ ಆಪ್ತಮಿತ್ರರನ್ನಾಗಿ ಸ್ವೀಕರಿಸಬೇಡಿ. ನಿಮಗೆ ತೊಂದರೆ ಕೊಡಲು ಅವರು ಸ್ವಲ್ಪವೂ ಹಿಂಜರಿಯುವುದಿಲ್ಲ. ನೀವು ತೊಂದರೆಗೊಳಗಾಗಬೇಕೆಂದೇ ಅವರು ಆಶಿಸುತ್ತಾರೆ. ಅವರ ಬಾಯಿಯಿಂದ ದ್ವೇಷವು ಈಗಾಗಲೇ ಪ್ರಕಟವಾಗಿದೆ. ಅವರ ಹೃದಯಗಳಲ್ಲಿ ಅದಕ್ಕಿಂತಲೂ ದೊಡ್ಡ ದ್ವೇಷವು ಅಡಗಿಕೊಂಡಿದೆ. ನಾವು ನಿಮಗೆ ವಚನಗಳನ್ನು ಸ್ಪಷ್ಟವಾಗಿ ವಿವರಿಸಿಕೊಟ್ಟಿದ್ದೇವೆ. ನೀವು ಬುದ್ಧಿವಂತರಾಗಿದ್ದರೆ (ಇದರ ಬಗ್ಗೆ ಗಮನ ಹರಿಸಿ).
Kannada Translation - Hamza Buturನೀವು ಅವರನ್ನು ಪ್ರೀತಿಸುತ್ತೀರಿ. ಆದರೆ ಅವರು ನಿಮ್ಮನ್ನು ಪ್ರೀತಿಸುವುದಿಲ್ಲ. ನೀವು ಎಲ್ಲಾ ಗ್ರಂಥಗಳಲ್ಲೂ ವಿಶ್ವಾಸವಿಡುತ್ತೀರಿ. ನಿಮ್ಮನ್ನು ಭೇಟಿಯಾಗುವಾಗ, “ನಾವು ವಿಶ್ವಾಸವಿಟ್ಟಿದ್ದೇವೆ” ಎಂದು ಅವರು ಹೇಳುತ್ತಾರೆ. ಆದರೆ ಅವರು ಏಕಾಂತದಲ್ಲಿರುವಾಗ ನಿಮ್ಮ ಮೇಲಿನ ಕೋಪದಿಂದ ಬೆರಳುಗಳನ್ನು ಕಚ್ಚುತ್ತಾರೆ. ಹೇಳಿರಿ: “ನಿಮ್ಮ ಕೋಪದೊಂದಿಗೇ ನೀವು ಪ್ರಾಣವನ್ನು ತ್ಯಜಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಹೃದಯಗಳಲ್ಲಿರುವುದನ್ನು ತಿಳಿಯುತ್ತಾನೆ.”
Kannada Translation - Hamza Buturನಿಮಗೆ ಒಳಿತಾದರೆ ಅವರಿಗೆ ಸಂಕಟವಾಗುತ್ತದೆ. ನಿಮಗೆ ಕೆಡುಕುಂಟಾದರೆ ಅವರು ಸಂತೋಷಪಡುತ್ತಾರೆ. ನೀವು ತಾಳ್ಮೆ ವಹಿಸಿದರೆ ಮತ್ತು ಅಲ್ಲಾಹನನ್ನು ಭಯಪಟ್ಟು ಜೀವಿಸಿದರೆ, ಅವರ ಕುತಂತ್ರವು ನಿಮಗೆ ಯಾವುದೇ ರೀತಿಯಲ್ಲೂ ತೊಂದರೆ ಮಾಡುವುದಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಅವರು ಮಾಡುತ್ತಿರುವ ಕರ್ಮಗಳನ್ನು ಆವರಿಸಿಕೊಂಡಿದ್ದಾನೆ.
Kannada Translation - Hamza Butur(ಓ ಪ್ರವಾದಿಯವರೇ!) ಸತ್ಯವಿಶ್ವಾಸಿಗಳನ್ನು ಯುದ್ಧದ ಆಯಕಟ್ಟಿನ ಸ್ಥಳಗಳಲ್ಲಿ ನಿಲ್ಲಿಸಲು ನೀವು ನಸುಕಿನಲ್ಲೇ ಮನೆಯಿಂದ ಹೊರಟ ಸಂದರ್ಭ(ವನ್ನು ಸ್ಮರಿಸಿ). ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Kannada Translation - Hamza Buturನಿಮ್ಮಲ್ಲಿನ ಎರಡು ಗುಂಪುಗಳು ಹೇಡಿಗಳಾಗಲು ಮುಂದಾದ ಸಂದರ್ಭ.[1] ಅಲ್ಲಾಹು ಆ ಎರಡು ಪಂಗಡಗಳ ರಕ್ಷಕನಾಗಿದ್ದಾನೆ. ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
Kannada Translation - Hamza Buturಬದ್ರ್ನಲ್ಲಿ ನೀವು ಅತ್ಯಂತ ದುರ್ಬಲರಾಗಿದ್ದಾಗ, ಅಲ್ಲಾಹು ನಿಮಗೆ ಸಹಾಯ ಮಾಡಿದ್ದಾನೆ. ಆದ್ದರಿಂದ ನೀವು ಅಲ್ಲಾಹನನ್ನು ಭಯಪಡಿರಿ. ನೀವು ಕೃತಜ್ಞರಾಗುವುದಕ್ಕಾಗಿ.
Kannada Translation - Hamza Butur“ನಿಮ್ಮ ಪರಿಪಾಲಕನು (ಅಲ್ಲಾಹು) ಮೂರು ಸಾವಿರ ದೇವದೂತರುಗಳನ್ನು ಇಳಿಸಿ ನಿಮಗೆ ಸಹಾಯ ಮಾಡಿದರೆ ಸಾಕಾಗದೇ?” ಎಂದು ನೀವು ಸತ್ಯವಿಶ್ವಾಸಿಗಳೊಡನೆ ಕೇಳಿದ ಸಂದರ್ಭ(ವನ್ನು ಸ್ಮರಿಸಿ).
Kannada Translation - Hamza Buturಹೌದು! ನೀವು ತಾಳ್ಮೆಯಿಂದಿದ್ದರೆ ಮತ್ತು ಅಲ್ಲಾಹನನ್ನು ಭಯಪಟ್ಟರೆ ನಿಮ್ಮ ಬಳಿಗೆ ಶತ್ರುಗಳು ಯಾವ ಕ್ಷಣದಲ್ಲಿ ಬಂದರೂ ನಿಮ್ಮ ಪರಿಪಾಲಕನು (ಅಲ್ಲಾಹು) ವಿಶೇಷ ಗುರುತುಗಳಿರುವ ಐದು ಸಾವಿರ ದೇವದೂತರುಗಳ ಮೂಲಕ ನಿಮಗೆ ಸಹಾಯ ಮಾಡುವನು.
Kannada Translation - Hamza Buturಅಲ್ಲಾಹು ಇದನ್ನು (ಸಹಾಯವನ್ನು) ಮಾಡಿದ್ದು ನಿಮಗೊಂದು ಸುವಾರ್ತೆಯಾಗಿ ಮತ್ತು ನಿಮ್ಮ ಹೃದಯಗಳು ಶಾಂತವಾಗಲಿಕ್ಕಾಗಿ ಮಾತ್ರ. ಸಹಾಯವು ಪ್ರಬಲನು ಮತ್ತು ವಿವೇಕಪೂರ್ಣನಾದ ಅಲ್ಲಾಹನಿಂದಲೇ ಆಗಿದೆ.
Kannada Translation - Hamza Buturಇದು (ಈ ಸಹಾಯವು ಬಂದಿರುವುದು) ಅಲ್ಲಾಹು ಸತ್ಯನಿಷೇಧಿಗಳ ಒಂದು ಭಾಗವನ್ನು ಕತ್ತರಿಸುವುದಕ್ಕಾಗಿ ಅಥವಾ ಅವರನ್ನು ಸಂಪೂರ್ಣ ದಮನ ಮಾಡುವುದಕ್ಕಾಗಿ. ಅವರೆಲ್ಲರೂ ಹತಾಶರಾಗಿ ಮರಳಿ ಹೋಗಲೆಂದು.
Kannada Translation - Hamza Butur(ಓ ಪ್ರವಾದಿಯವರೇ!) ತೀರ್ಮಾನದಲ್ಲಿ ನಿಮಗೆ ಯಾವುದೇ ಅಧಿಕಾರವಿಲ್ಲ. ಅಲ್ಲಾಹು ಅವರ ಪಶ್ಚಾತ್ತಾಪವನ್ನು ಸ್ವೀಕರಿಸಬಹುದು ಅಥವಾ ಅವರನ್ನು ಶಿಕ್ಷಿಸಬಹುದು. ಏಕೆಂದರೆ, ನಿಶ್ಚಯವಾಗಿಯೂ ಅವರು ಅಕ್ರಮಿಗಳಾಗಿದ್ದಾರೆ.[1]
Kannada Translation - Hamza Buturಭೂಮ್ಯಾಕಾಶಗಳಲ್ಲಿರುವ ಎಲ್ಲಾ ವಸ್ತುಗಳೂ ಅಲ್ಲಾಹನಿಗೆ ಸೇರಿದ್ದು. ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ ಮತ್ತು ಅವನು ಇಚ್ಛಿಸುವವರನ್ನು ಶಿಕ್ಷಿಸುತ್ತಾನೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Kannada Translation - Hamza Buturನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯ ಕ್ಷಮೆಗಾಗಿ ಮತ್ತು ಭೂಮ್ಯಾಕಾಶಗಳಷ್ಟು ವಿಶಾಲವಾದ ಸ್ವರ್ಗಕ್ಕಾಗಿ ತ್ವರೆಯಿಂದ ಮುನ್ನುಗ್ಗಿರಿ. ಅದನ್ನು ದೇವಭಯವುಳ್ಳವರಿಗಾಗಿ ಸಿದ್ಧಗೊಳಿಸಲಾಗಿದೆ.
Kannada Translation - Hamza Buturಅವರು (ದೇವಭಯವುಳ್ಳವರು) ಯಾರೆಂದರೆ, ಸುಖದಲ್ಲೂ ಕಷ್ಟದಲ್ಲೂ ದಾನ ಮಾಡುವವರು, ಕೋಪವನ್ನು ನಿಗ್ರಹಿಸುವವರು ಮತ್ತು ಜನರಿಗೆ ಮನ್ನಿಸುವವರು. ಅಲ್ಲಾಹು ಒಳಿತು ಮಾಡುವವರನ್ನು ಪ್ರೀತಿಸುತ್ತಾನೆ.
Kannada Translation - Hamza Buturಅವರು ಏನಾದರೂ ನೀಚಕಾರ್ಯ ಮಾಡಿದರೆ ಅಥವಾ ಸ್ವಯಂ ಅಕ್ರಮವೆಸಗಿದರೆ ಅಲ್ಲಾಹನನ್ನು ಸ್ಮರಿಸಿ ತಮ್ಮ ಪಾಪಗಳಿಗೆ ಕ್ಷಮೆಯಾಚಿಸುತ್ತಾರೆ. ಅಲ್ಲಾಹನ ಹೊರತು ಪಾಪಗಳನ್ನು ಕ್ಷಮಿಸುವವರು ಯಾರು? ಅವರು ತಿಳಿದೂ ಸಹ (ಕೆಟ್ಟ) ಕಾರ್ಯಗಳಲ್ಲಿ ಹಟ ಹಿಡಿದು ಮುಂದುವರಿಯುವುದಿಲ್ಲ.
Kannada Translation - Hamza Buturಅವರಿಗಿರುವ ಪ್ರತಿಫಲವು ಅವರ ಪರಿಪಾಲಕನ ಕಡೆಯ ಕ್ಷಮೆ ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಾಗಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಸತ್ಕರ್ಮವೆಸಗುವವರಿಗೆ ದೊರೆಯುವ ಪ್ರತಿಫಲವು ಬಹಳ ಉತ್ತಮವಾಗಿದೆ!
Kannada Translation - Hamza Buturನಿಮಗಿಂತ ಮುಂಚೆಯೂ ಇಂತಹ ಘಟನೆಗಳು ಗತಿಸಿ ಹೋಗಿವೆ. ಆದ್ದರಿಂದ ನೀವು ಭೂಮಿಯಲ್ಲಿ ಸಂಚರಿಸಿ ಸತ್ಯನಿಷೇಧಿಗಳ ಅಂತ್ಯವು ಹೇಗಿತ್ತೆಂದು ನೋಡಿರಿ.[1]
Kannada Translation - Hamza Buturನಿಮಗೆ ಗಾಯಗಳಾಗಿದ್ದರೆ, ಆ ಜನರಿಗೂ (ಎದುರಾಳಿಗಳಿಗೂ) ಗಾಯಗಳಾಗಿದ್ದವು. ಸತ್ಯವಿಶ್ವಾಸಿಗಳು ಯಾರೆಂದು ಅಲ್ಲಾಹು ತಿಳಿಯುವುದಕ್ಕಾಗಿ ಮತ್ತು ನಿಮ್ಮಲ್ಲಿ ಕೆಲವರನ್ನು ಅವನು ಹುತಾತ್ಮರಾಗಿ ಸ್ವೀಕರಿಸುವುದಕ್ಕಾಗಿ, ನಾವು ಆ ದಿನಗಳನ್ನು (ಸೋಲು-ಗೆಲುವುಗಳನ್ನು) ಜನರ ನಡುವೆ ಬದಲಾಯಿಸುತ್ತೇವೆ. ಅಲ್ಲಾಹು ಅಕ್ರಮಿಗಳನ್ನು ಇಷ್ಟಪಡುವುದಿಲ್ಲ.
Kannada Translation - Hamza Buturನಿಮ್ಮಲ್ಲಿ ಯುದ್ಧ ಮಾಡಿದವರು ಯಾರು ಮತ್ತು ಸ್ಥೈರ್ಯವಂತರು ಯಾರೆಂದು ಅಲ್ಲಾಹು ತಿಳಿಯದೆ (ನಿರಾಯಾಸವಾಗಿ) ಸ್ವರ್ಗಕ್ಕೆ ಹೋಗಬಹುದೆಂದು ನೀವು ಭಾವಿಸಿದ್ದೀರಾ?
Kannada Translation - Hamza Buturನೀವು ಸಾವನ್ನು ನೇರವಾಗಿ ನೋಡುವುದಕ್ಕೆ ಮೊದಲು ಅದನ್ನು (ಹುತಾತ್ಮತೆಯನ್ನು) ಬಯಸುತ್ತಿದ್ದಿರಿ. ಈಗ ನೀವು ಅದನ್ನು ನಿಮ್ಮ ಕಣ್ಣುಗಳ ಮುಂದೆ ಕಣ್ಣಾರೆ ನೋಡಿದ್ದೀರಿ.
Kannada Translation - Hamza Buturಮುಹಮ್ಮದ್ ಒಬ್ಬ ಸಂದೇಶವಾಹಕರು ಮಾತ್ರ. ಅವರಿಗಿಂತ ಮೊದಲು ಅನೇಕ ಸಂದೇಶವಾಹಕರುಗಳು ಬಂದು ಹೋಗಿದ್ದಾರೆ. ಅವರೇನಾದರೂ ಅಸುನೀಗಿದರೆ ಅಥವಾ ಕೊಲೆಯಾದರೆ, ನೀವು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳುವಿರಾ? ಯಾರು ಹಿಂದಕ್ಕೆ ಮರಳುತ್ತಾನೋ ಅವನು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಕೃತಜ್ಞರಾಗಿರುವವರಿಗೆ ಅಲ್ಲಾಹು ಸದ್ಯವೇ ಸೂಕ್ತ ಪ್ರತಿಫಲವನ್ನು ನೀಡುವನು.[1]
Kannada Translation - Hamza Buturಅಲ್ಲಾಹನ ಅಪ್ಪಣೆಯಿಲ್ಲದೆ ಯಾವುದೇ ವ್ಯಕ್ತಿಗೂ ಸಾಯಲು ಸಾಧ್ಯವಿಲ್ಲ. ಅದು ನಿಶ್ಚಯಿಸಲಾದ ಒಂದು ಅವಧಿಯಾಗಿದೆ. ಯಾರು ಇಹಲೋಕದ ಪ್ರತಿಫಲವನ್ನು ಬಯಸುತ್ತಾನೋ ಅವನಿಗೆ ನಾವು ಅದನ್ನು ನೀಡುತ್ತೇವೆ. ಯಾರು ಪರಲೋಕದ ಪ್ರತಿಫಲವನ್ನು ಬಯಸುತ್ತಾನೋ ಅವನಿಗೆ ನಾವು ಅದನ್ನು ನೀಡುತ್ತೇವೆ. ಕೃತಜ್ಞರಾಗಿರುವವರಿಗೆ ಅಲ್ಲಾಹು ಸದ್ಯವೇ ಸೂಕ್ತ ಪ್ರತಿಫಲವನ್ನು ನೀಡುತ್ತಾನೆ.
Kannada Translation - Hamza Buturಎಷ್ಟೋ ಪ್ರವಾದಿಗಳಿಗೆ ಜೊತೆಯಾಗಿ ನಿಂತು ಅಲ್ಲಾಹನ ಎಷ್ಟೋ ದಾಸರು ಯುದ್ಧ ಮಾಡಿದ್ದಾರೆ. ಅಲ್ಲಾಹನ ಮಾರ್ಗದಲ್ಲಿ ಎದುರಿಸಬೇಕಾಗಿ ಬಂದ ತೊಂದರೆಗಳಿಂದ ಅವರು ಧೃತಿಗೆಡಲಿಲ್ಲ, ದುರ್ಬಲರಾಗಲಿಲ್ಲ ಮತ್ತು ಮಣಿಯಲಿಲ್ಲ. ಅಲ್ಲಾಹು ಸ್ಥೈರ್ಯವಂತರನ್ನು ಪ್ರೀತಿಸುತ್ತಾನೆ.
Kannada Translation - Hamza Buturಅವರ ಮಾತುಗಳು ಇದಲ್ಲದೆ ಬೇರೇನೂ ಆಗಿರಲಿಲ್ಲ: “ಓ ನಮ್ಮ ಪರಿಪಾಲಕನೇ! ನಮ್ಮ ಪಾಪಗಳನ್ನು ಮತ್ತು ನಮ್ಮ ಕಾರ್ಯಗಳಲ್ಲಿ ಸಂಭವಿಸಿದ ಅತಿರೇಕಗಳನ್ನು ಕ್ಷಮಿಸು, ನಮ್ಮ ಪಾದಗಳನ್ನು ದೃಢವಾಗಿ ನಿಲ್ಲಿಸು ಮತ್ತು ಸತ್ಯನಿಷೇಧಿಗಳಾದ ಜನರ ವಿರುದ್ಧ ನಮಗೆ ಸಹಾಯ ಮಾಡು.”
Kannada Translation - Hamza Buturಆದ್ದರಿಂದ ಅಲ್ಲಾಹು ಅವರಿಗೆ ಇಹಲೋಕದ ಪ್ರತಿಫಲವನ್ನು ಮತ್ತು ಪರಲೋಕದ ಅತ್ಯುತ್ತಮ ಪ್ರತಿಫಲವನ್ನು ನೀಡಿದನು. ಅಲ್ಲಾಹು ಒಳಿತು ಮಾಡುವವರನ್ನು ಪ್ರೀತಿಸುತ್ತಾನೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಸತ್ಯನಿಷೇಧಿಗಳನ್ನು ಅನುಸರಿಸಿದರೆ, ಅವರು ನಿಮ್ಮನ್ನು ಹಿಂದಕ್ಕೆ (ಸತ್ಯನಿಷೇಧಕ್ಕೆ) ಮರಳಿಸುತ್ತಾರೆ. ನಂತರ ನೀವು ನಷ್ಟಹೊಂದಿದವರಾಗಿ ಬಿಡುವಿರಿ.
Kannada Translation - Hamza Buturಅಲ್ಲಾಹು ಯಾವುದೇ ಸಾಕ್ಷ್ಯಾಧಾರಗಳನ್ನು ಅವತೀರ್ಣಗೊಳಿಸದ ವಸ್ತುಗಳನ್ನು ಅವನಿಗೆ ಸಹಭಾಗಿಗಳನ್ನಾಗಿ ಮಾಡಿದ ಕಾರಣ ನಾವು ಸತ್ಯನಿಷೇಧಿಗಳ ಹೃದಯಗಳಲ್ಲಿ ಭೀತಿಯನ್ನು ಹುಟ್ಟಿಸುವೆವು. ಅವರ ವಾಸಸ್ಥಳವು ನರಕವಾಗಿದೆ. ಅಕ್ರಮಿಗಳ ವಾಸಸ್ಥಳವು ಬಹಳ ನಿಕೃಷ್ಟವಾಗಿದೆ!
Kannada Translation - Hamza Buturಅಲ್ಲಾಹನ ಅಪ್ಪಣೆಯಿಂದ ನೀವು ಅವರನ್ನು ಕೊಲ್ಲುತ್ತಿರುವಾಗ ಅಲ್ಲಾಹು ನಿಮಗೆ ನೀಡಿದ ವಾಗ್ದಾನವನ್ನು ಖಂಡಿತ ನೆರವೇರಿಸಿದ್ದನು. ಎಲ್ಲಿಯವರೆಗೆಂದರೆ, ನೀವು ನಿಮ್ಮ ಕೆಲಸದಲ್ಲಿ ವಿಫಲರಾಗಿ ಪರಸ್ಪರ ತರ್ಕಿಸುವ ಮತ್ತು ನೀವು ಇಷ್ಟಪಡುವುದನ್ನು ಅಲ್ಲಾಹು ನಿಮಗೆ ತೋರಿಸಿದ ಬಳಿಕವೂ ನೀವು ಆಜ್ಞೋಲ್ಲಂಘನೆ ಮಾಡುವ ತನಕ. ನಿಮ್ಮಲ್ಲಿ ಕೆಲವರು ಇಹಲೋಕವನ್ನು ಬಯಸುತ್ತಿದ್ದರು ಮತ್ತು ಇತರ ಕೆಲವರು ಪರಲೋಕವನ್ನು ಬಯಸುತ್ತಿದ್ದರು. ನಂತರ ನಿಮ್ಮನ್ನು ಪರೀಕ್ಷಿಸುವುದಕ್ಕಾಗಿ ಅಲ್ಲಾಹು ನಿಮ್ಮನ್ನು ಅವರಿಂದ (ವೈರಿಗಳಿಂದ) ತಿರುಗಿಸಿದನು. ಅಲ್ಲಾಹು ನಿಮ್ಮನ್ನು ಕ್ಷಮಿಸಿದ್ದಾನೆ. ಅಲ್ಲಾಹು ಸತ್ಯವಿಶ್ವಾಸಿಗಳ ಮೇಲೆ ಮಹಾ ಔದಾರ್ಯವುಳ್ಳವನಾಗಿದ್ದಾನೆ.
Kannada Translation - Hamza Buturನೀವು (ಪರ್ವತವನ್ನು) ಏರುತ್ತಾ ಯಾರನ್ನೂ ತಿರುಗಿ ನೋಡದೆ (ಪಲಾಯನ ಮಾಡುತ್ತಿದ್ದ) ಸಂದರ್ಭ. ಸಂದೇಶವಾಹಕರು ಹಿಂದಿನಿಂದ ನಿಮ್ಮನ್ನು ಕೂಗಿ ಕರೆಯುತ್ತಿದ್ದರು. ಆಗ ಅಲ್ಲಾಹು ನಿಮಗೆ ಬಳಲಿಕೆಯ ಮೇಲೆ ಬಳಲಿಕೆಯನ್ನು ಬಳುವಳಿಯಾಗಿ ನೀಡಿದನು. ನಿಮಗೆ ಕೈತಪ್ಪಿ ಹೋದ ವಿಜಯದ ಬಗ್ಗೆ ಮತ್ತು ನಿಮಗೆ ಸಂಭವಿಸಿದ ಅನಾಹುತದ ಬಗ್ಗೆ ನೀವು ಸಂಕಟಪಡದಿರುವುದಕ್ಕಾಗಿ. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ಸೂಕ್ಷ್ಮವಾಗಿ ತಿಳಿಯುತ್ತಾನೆ.
Kannada Translation - Hamza Buturಅನಂತರ, ಆ ಬಳಲಿಕೆಯ ನಂತರ ಅಲ್ಲಾಹು ನಿಮಗೆ ನಿರ್ಭಯತೆಯ ತೂಕಡಿಕೆಯನ್ನು ನೀಡಿದನು. ಅದು ನಿಮ್ಮಲ್ಲಿ ಒಂದು ಗುಂಪನ್ನು ಆವರಿಸುತ್ತಿತ್ತು. ಇನ್ನೊಂದು ಗುಂಪು ಸ್ವಯಂ ಅವರ ಬಗ್ಗೆಯೇ ಚಿಂತಿತರಾಗಿದ್ದರು. ಅವರು ಅಲ್ಲಾಹನ ಬಗ್ಗೆ ಸತ್ಯಕ್ಕೆ ದೂರವಾದ ಅಜ್ಞಾನಕಾಲದ ಭಾವನೆಗಳನ್ನು ಇಟ್ಟುಕೊಂಡಿದ್ದರು.[1] ಅವರು ಕೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೆ ಯಾವುದೇ ಪಾಲಿಲ್ಲವೇ?” ಹೇಳಿರಿ: “ನಿಶ್ಚಯವಾಗಿಯೂ ಆಜ್ಞೆಯು ಸಂಪೂರ್ಣವಾಗಿ ಅಲ್ಲಾಹನಿಗೆ ಸೇರಿದೆ.” ನಿಮ್ಮ ಮುಂದೆ ಬಹಿರಂಗಪಡಿಸದ ಬೇರೇನೋ ವಿಚಾರಗಳನ್ನು ಅವರು ತಮ್ಮ ಮನದಲ್ಲಿ ಬಚ್ಚಿಡುತ್ತಿದ್ದರು. ಅವರು ಹೇಳುತ್ತಿದ್ದರು: “ಆಜ್ಞೆಯಲ್ಲಿ ನಮಗೇನಾದರೂ ಪಾಲಿರುತ್ತಿದ್ದರೆ ನಾವಿಲ್ಲಿ ಹತ್ಯೆಯಾಗಿ ಬೀಳುತ್ತಿರಲಿಲ್ಲ.” ಹೇಳಿರಿ: “ನೀವು ನಿಮ್ಮ ಮನೆಗಳಲ್ಲಿದ್ದರೂ ಸಹ ಕೊಲೆಯಾಗಬೇಕೆಂಬ ವಿಧಿಯಿರುವವರು ಅವರು ಕೊಲೆಯಾಗಿ ಬೀಳುವ ಸ್ಥಳಗಳಿಗೆ ಸ್ವಯಂ ಹೊರಟು ಬರುತ್ತಿದ್ದರು.” ಇದು ನಿಮ್ಮ ಎದೆಗಳಲ್ಲಿರುವುದನ್ನು ಅಲ್ಲಾಹು ಪರೀಕ್ಷಿಸುವುದಕ್ಕಾಗಿದೆ ಮತ್ತು ನಿಮ್ಮ ಹೃದಯಗಳಲ್ಲಿರುವುದನ್ನು ಶುದ್ಧೀಕರಿಸುವುದಕ್ಕಾಗಿದೆ. ಅಲ್ಲಾಹು ಎದೆಗಳೊಳಗಿರುವುದನ್ನು ತಿಳಿಯುತ್ತಾನೆ.
Kannada Translation - Hamza Butur(ಉಹುದ್ ಯುದ್ಧದಲ್ಲಿ) ಎರಡು ಬಣಗಳು ಮುಖಾಮುಖಿಯಾದ ದಿನದಂದು ನಿಮ್ಮ ಪೈಕಿ ಬೆನ್ನು ತೋರಿಸಿ ಓಡಿದವರು ಯಾರೋ—ಅವರು ಮಾಡಿದ ಕೆಲವು ದುಷ್ಕೃತ್ಯಗಳ ಕಾರಣದಿಂದ ಶೈತಾನನು ಅವರನ್ನು ಜಾರಿಕೊಳ್ಳುವಂತೆ ಮಾಡಿದ್ದನು. ಅಲ್ಲಾಹು ಅವರನ್ನು ಕ್ಷಮಿಸಿದ್ದಾನೆ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ಸತ್ಯವನ್ನು ನಿಷೇಧಿಸಿದವರು ಮತ್ತು ತಮ್ಮ ಸಹೋದರರು ಪ್ರಯಾಣ ಹೊರಟಾಗ ಅಥವಾ ಯುದ್ಧಕ್ಕೆ ಹೊರಟಾಗ, “ಇವರು ನಮ್ಮ ಬಳಿಯಿರುತ್ತಿದ್ದರೆ ಸಾಯುತ್ತಿರಲಿಲ್ಲ ಮತ್ತು ಕೊಲೆಯಾಗುತ್ತಿರಲಿಲ್ಲ” ಎಂದು ಹೇಳುವವರಂತೆ ನೀವಾಗಬೇಡಿ. ಈ ಕಲ್ಪನೆಯನ್ನು ಅಲ್ಲಾಹು ಅವರ ಹೃದಯಗಳಲ್ಲಿನ ವ್ಯಥೆಗೆ ಕಾರಣವಾಗಿ ಮಾಡುತ್ತಾನೆ. ಅಲ್ಲಾಹನೇ ಜೀವ ಮತ್ತು ಮರಣವನ್ನು ನೀಡುವವನು. ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
Kannada Translation - Hamza Buturನೀವು ಅಲ್ಲಾಹನ ಮಾರ್ಗದಲ್ಲಿ ಕೊಲೆಯಾದರೆ ಅಥವಾ ಸಾವನ್ನಪ್ಪಿದರೆ ಅಲ್ಲಾಹನ ಕಡೆಯ ಕ್ಷಮೆ ಮತ್ತು ದಯೆಯು ಅವರು ಸಂಗ್ರಹಿಸಿಡುವ ಎಲ್ಲಾ ವಸ್ತುಗಳಿಗಿಂತಲೂ ಶ್ರೇಷ್ಠವಾಗಿದೆ.
Kannada Translation - Hamza Butur(ಓ ಪ್ರವಾದಿಯವರೇ!) ಅಲ್ಲಾಹನ ಕಡೆಯ ದಯೆಯಿಂದಲೇ ನೀವು ಅವರೊಡನೆ ನಯವಾಗಿ ವರ್ತಿಸುತ್ತಿದ್ದೀರಿ. ನೀವು ಒರಟನೋ ಕಠೋರ ಹೃದಯಿಯೋ ಆಗಿದ್ದರೆ ಅವರು ನಿಮ್ಮ ಬಳಿಯಿಂದ ಚದುರಿಬಿಡುತ್ತಿದ್ದರು. ಆದ್ದರಿಂದ ಅವರನ್ನು ಕ್ಷಮಿಸಿರಿ ಮತ್ತು ಅವರಿಗಾಗಿ (ಅಲ್ಲಾಹನಲ್ಲಿ) ಕ್ಷಮೆಯಾಚಿಸಿರಿ. ಕಾರ್ಯನಿರ್ವಹಣೆಯ ಬಗ್ಗೆ ಅವರೊಡನೆ ಸಮಾಲೋಚನೆ ಮಾಡಿರಿ. ನಂತರ ನೀವು ದೃಢ ನಿರ್ಧಾರ ಕೈಗೊಂಡರೆ ಅಲ್ಲಾಹನಲ್ಲಿ ಭರವಸೆಯಿಡಿರಿ. ನಿಶ್ಚಯವಾಗಿಯೂ ಅಲ್ಲಾಹನ ಮೇಲೆ ಭರವಸೆಯಿಡುವವರನ್ನು ಅಲ್ಲಾಹು ಇಷ್ಟಪಡುತ್ತಾನೆ.
Kannada Translation - Hamza Buturಅಲ್ಲಾಹು ನಿಮಗೆ ಸಹಾಯ ಮಾಡಿದರೆ ನಿಮ್ಮನ್ನು ಸೋಲಿಸಲು ಯಾರಿಗೂ ಸಾಧ್ಯವಿಲ್ಲ. ಆದರೆ ಅವನೇನಾದರೂ ನಿಮ್ಮನ್ನು ಕೈಬಿಟ್ಟರೆ, ಅವನ ನಂತರ ನಿಮಗೆ ಸಹಾಯ ಮಾಡುವವರು ಯಾರು? ಸತ್ಯವಿಶ್ವಾಸಿಗಳು ಅಲ್ಲಾಹನಲ್ಲಿಯೇ ಭರವಸೆಯಿಡಲಿ.
Kannada Translation - Hamza Buturಪ್ರವಾದಿಯು ಮೋಸ ಮಾಡುವುದು ಅಸಂಭವ.[1] ಯಾರು ಮೋಸ ಮಾಡುತ್ತಾನೋ ಅವನು ಪುನರುತ್ಥಾನ ದಿನದಂದು ತಾನು ಮಾಡಿದ ಮೋಸದೊಂದಿಗೆ ಬರುತ್ತಾನೆ. ನಂತರ ಪ್ರತಿಯೊಬ್ಬನಿಗೂ ಅವನು ಮಾಡಿದ ಕರ್ಮದ ಫಲವನ್ನು ಪೂರ್ಣವಾಗಿ ನೀಡಲಾಗುವುದು. ಅವರಿಗೆ ಯಾವುದೇ ಅನ್ಯಾಯವಾಗುವುದಿಲ್ಲ.
Kannada Translation - Hamza Buturಅಲ್ಲಾಹನ ವಚನಗಳನ್ನು ಓದಿಕೊಡುವ, ಅವರನ್ನು ಶುದ್ದೀಕರಿಸುವ, ಅವರಿಗೆ ಗ್ರಂಥ ಮತ್ತು ವಿವೇಕವನ್ನು ಕಲಿಸಿಕೊಡುವ ಒಬ್ಬ ಸಂದೇಶವಾಹಕರನ್ನು ಅವರಿಂದಲೇ ಅವರಿಗೆ ಕಳುಹಿಸುವ ಮೂಲಕ ನಿಶ್ಚಯವಾಗಿಯೂ ಅಲ್ಲಾಹು ಸತ್ಯವಿಶ್ವಾಸಿಗಳಗೆ ಮಹಾ ಉಪಕಾರವನ್ನು ಮಾಡಿದ್ದಾನೆ. ಇದಕ್ಕೆ ಮೊದಲು ಅವರು ಸ್ಪಷ್ಟ ದುರ್ಮಾರ್ಗದಲ್ಲಿದ್ದರು.
Kannada Translation - Hamza Butur(ಉಹುದ್ ಯುದ್ಧದ ಸಂದರ್ಭ) ನಿಮಗೊಂದು ಅನಾಹುತ ಸಂಭವಿಸಿತು. ಆದರೆ ನೀವು ಶತ್ರುಗಳಿಗೆ (ಬದ್ರ್ ಯುುದ್ಧದ ಸಂದರ್ಭ) ಅದರ ಇಮ್ಮಡಿ ಅನಾಹುತವನ್ನು ಮಾಡಿದ್ದೀರಿ. ಹಾಗಿದ್ದೂ ಸಹ ನೀವು “ಇದು ಎಲ್ಲಿಂದ ಸಂಭವಿಸಿತು?” ಎಂದು ಕೇಳುತ್ತಿದ್ದೀರಿ! ಹೇಳಿರಿ: “ಅದು ನಿಮ್ಮ ತಪ್ಪಿನಿಂದಲೇ ಸಂಭವಿಸಿದೆ.” ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
Kannada Translation - Hamza Butur(ಉಹುದ್ ಯುದ್ಧದಲ್ಲಿ) ಎರಡು ಬಣಗಳು ಮುಖಾಮುಖಿಯಾದ ದಿನದಂದು ನಿಮಗೆ ಸಂಭವಿಸಿದ ಅನಾಹುತವು ಅಲ್ಲಾಹನ ಅಪ್ಪಣೆಯಿಂದಲೇ ಆಗಿದೆ. ಅದು ಸತ್ಯವಿಶ್ವಾಸಿಗಳು ಯಾರೆಂದು ತಿಳಿಯುವುದಕ್ಕಾಗಿದೆ.
Kannada Translation - Hamza Buturಮತ್ತು ಕಪಟವಿಶ್ವಾಸಿಗಳು ಯಾರೆಂದು ತಿಳಿಯುವುದಕ್ಕಾಗಿ. ಆ ಕಪಟವಿಶ್ವಾಸಿಗಳೊಡನೆ “ಬನ್ನಿ! ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿ ಅಥವಾ (ಕನಿಷ್ಠ) ರಕ್ಷಣೆಯನ್ನಾದರೂ ಮಾಡಿ” ಎಂದು ಹೇಳಲಾದಾಗ, ಅವರು ಹೇಳಿದರು: “ಯುದ್ಧ ಸಂಭವಿಸುತ್ತದೆಯೆಂದು ತಿಳಿದಿದ್ದರೆ ನಾವು ನಿಮ್ಮ ಹಿಂದೆ ಬರುತ್ತಿದ್ದೆವು.” ಅಂದು ಅವರು ಸತ್ಯವಿಶ್ವಾಸಕ್ಕಿಂತಲೂ ಸತ್ಯನಿಷೇಧಕ್ಕೆ ಹೆಚ್ಚು ಹತ್ತಿರವಾಗಿದ್ದರು. ಅವರ ಹೃದಯಗಳಲ್ಲಿಲ್ಲದ ವಿಷಯವನ್ನು ಅವರು ಬಾಯಿ ಮೂಲಕ ಹೇಳುತ್ತಾರೆ. ಅವರು ಮುಚ್ಚಿಡುವ ಸಂಗತಿಗಳು ಏನೆಂದು ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ.
Kannada Translation - Hamza Buturಅವರು ಯಾರೆಂದರೆ, (ಯುದ್ಧಕ್ಕೆ ತೆರಳದೆ) ಮನೆಯಲ್ಲೇ ಕುಳಿತು (ಯುದ್ಧಕ್ಕೆ ಹೊರಟ) ತಮ್ಮ ಸಹೋದರರ ಬಗ್ಗೆ, “ಅವರು ನಮ್ಮ ಮಾತನ್ನು ಕೇಳುತ್ತಿದ್ದರೆ ಖಂಡಿತ ಕೊಲೆಯಾಗುತ್ತಿರಲಿಲ್ಲ” ಎಂದು ಹೇಳಿದವರಾಗಿದ್ದಾರೆ. ಹೇಳಿರಿ: “ನೀವು ಸತ್ಯವನ್ನೇ ಹೇಳುತ್ತಿದ್ದರೆ ನಿಮಗೆ ಸಾವು ಬರುವುದನ್ನು ತಡೆಗಟ್ಟಿರಿ.”
Kannada Translation - Hamza Buturಅಲ್ಲಾಹನ ಮಾರ್ಗದಲ್ಲಿ ಹುತಾತ್ಮರಾದವರನ್ನು 'ಸತ್ತವರು' ಎಂದು ಭಾವಿಸಬೇಡಿ. ಅವರು ಜೀವಂತವಾಗಿದ್ದಾರೆ. ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಆಹಾರವನ್ನು ನೀಡಲಾಗುತ್ತಿದೆ.
Kannada Translation - Hamza Buturಅಲ್ಲಾಹು ಅವನ ಔದಾರ್ಯದಿಂದ ಅವರಿಗೆ ದಯಪಾಲಿಸಿರುವುದರಲ್ಲಿ ಅವರು ಸಂತೋಷವಾಗಿದ್ದಾರೆ. ತಮ್ಮೊಂದಿಗೆ ಇನ್ನೂ ಸೇರದ, ತಮ್ಮ ಹಿಂದೆ (ಇಹಲೋಕದಲ್ಲಿ) ಜೀವಿಸುತ್ತಿರುವ ಸತ್ಯವಿಶ್ವಾಸಿಗಳ ಬಗ್ಗೆ, ಅವರಿಗೆ ಯಾವುದೇ ಭಯವಿಲ್ಲ ಮತ್ತು ಅವರು ದುಃಖಿಸುವುದೂ ಇಲ್ಲವೆಂದು ತಿಳಿದು ಅವರು ಸಂತೋಷಪಡುತ್ತಿದ್ದಾರೆ.
Kannada Translation - Hamza Buturಅಲ್ಲಾಹನ ಅನುಗ್ರಹ ಮತ್ತು ಔದಾರ್ಯದಿಂದ; ಮತ್ತು ಅಲ್ಲಾಹು ಸತ್ಯವಿಶ್ವಾಸಿಗಳ ಪ್ರತಿಫಲವನ್ನು ವ್ಯರ್ಥಗೊಳಿಸುವುದಿಲ್ಲ ಎಂಬುದರಿಂದ ಅವರು ಸಂತೋಷಪಡುತ್ತಿದ್ದಾರೆ.
Kannada Translation - Hamza Buturಅವರು ಯಾರೆಂದರೆ ಗಾಯಾಳುಗಳಾದ ಬಳಿಕವೂ ಅಲ್ಲಾಹು ಮತ್ತು ಸಂದೇಶವಾಹಕರ ಕರೆಗೆ ಉತ್ತರಿಸಿದವರು. ಅವರಲ್ಲಿ ಒಳಿತು ಮಾಡಿದವರಿಗೆ ಮತ್ತು ದೇವಭಯವುಳ್ಳವರಿಗೆ ಮಹಾ ಪ್ರತಿಫಲವಿದೆ.
Kannada Translation - Hamza Butur“ನಿಶ್ಚಯವಾಗಿಯೂ ಆ ಜನರು (ಶತ್ರುಗಳು) ನಿಮ್ಮ ವಿರುದ್ಧ ಸೈನ್ಯವನ್ನು ಜಮಾವಣೆಗೊಳಿಸಿದ್ದಾರೆ; ಆದ್ದರಿಂದ ಅವರನ್ನು ಭಯಪಡಿರಿ” ಎಂದು ಜನರು ಅವರೊಡನೆ ಹೇಳಿದಾಗ ಅದು ಅವರ ವಿಶ್ವಾಸವನ್ನು ಹೆಚ್ಚಿಸಿತು. ಅವರು ಹೇಳಿದರು: “ನಮಗೆ ಅಲ್ಲಾಹು ಸಾಕು. ಭರವಸೆಯಿಡಲು ಅವನು ಅತ್ಯುತ್ತಮನಾಗಿದ್ದಾನೆ.”[1]
Kannada Translation - Hamza Buturಆದ್ದರಿಂದ ಅವರು ಅಲ್ಲಾಹನ ಕಡೆಯ ಅನುಗ್ರಹ ಮತ್ತು ಔದಾರ್ಯದೊಂದಿಗೆ ಮರಳಿದರು. ಅವರಿಗೆ ಯಾವುದೇ ತೊಂದರೆಯಾಗಲಿಲ್ಲ. ಅವರು ಅಲ್ಲಾಹನ ಸಂಪ್ರೀತಿಯನ್ನು ಹಿಂಬಾಲಿಸಿದರು. ಅಲ್ಲಾಹು ಮಹಾ ಔದಾರ್ಯವುಳ್ಳವನಾಗಿದ್ದಾನೆ.
Kannada Translation - Hamza Buturಅದು (ನಿಮ್ಮನ್ನು ಹೆದರಿಸಿದ್ದು) ಶೈತಾನನಾಗಿದ್ದನು. ಅವನು ಅವನ ಮಿತ್ರರ ಬಗ್ಗೆ ಹೆದರಿಸುತ್ತಾನೆ. ಆದ್ದರಿಂದ ನೀವು ಅವರನ್ನು ಭಯಪಡಬೇಡಿ; ನನ್ನನ್ನು ಭಯಪಡಿರಿ. ನೀವು ಸತ್ಯವಿಶ್ವಾಸಿಗಳಾಗಿದ್ದರೆ.
Kannada Translation - Hamza Buturಸತ್ಯನಿಷೇಧದಲ್ಲಿ ತ್ವರೆ ಮಾಡುತ್ತಾ ಮುನ್ನುಗ್ಗುವವರನ್ನು ಕಂಡು ನೀವು ಬೇಸರಿಸಬೇಡಿ. ನಿಶ್ಚಯವಾಗಿಯೂ ಅವರು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಅಲ್ಲಾಹು ಅವರಿಗೆ ಪರಲೋಕದಲ್ಲಿ ಯಾವುದೇ ಪಾಲು ನೀಡದಿರಲು ಉದ್ದೇಶಿಸಿದ್ದಾನೆ. ಅವರಿಗೆ ಕಠಿಣವಾದ ಶಿಕ್ಷೆಯಿದೆ.
Kannada Translation - Hamza Buturನಿಶ್ಚಯವಾಗಿಯೂ ಸತ್ಯವಿಶ್ವಾಸದ ಬದಲಿಗೆ ಸತ್ಯನಿಷೇಧವನ್ನು ಖರೀದಿಸಿದವರು ಯಾರೋ—ಅವರು ಅಲ್ಲಾಹನಿಗೆ ಯಾವುದೇ ತೊಂದರೆ ಮಾಡುವುದಿಲ್ಲ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
Kannada Translation - Hamza Buturಸತ್ಯನಿಷೇಧಿಗಳಿಗೆ ನಾವು ಕಾಲಾವಕಾಶ ನೀಡುವುದು ಅವರ ಪಾಲಿಗೆ ಒಳಿತೆಂದು ಅವರೆಂದೂ ಭಾವಿಸದಿರಲಿ. ನಾವು ಅವರಿಗೆ ಕಾಲಾವಕಾಶ ನೀಡುವುದು ಅವರು ಪಾಪಗಳನ್ನು ಹೆಚ್ಚಿಸಲಿಕ್ಕಾಗಿದೆ. ಅವರಿಗೆ ಅವಮಾನಕರ ಶಿಕ್ಷೆಯಿದೆ.
Kannada Translation - Hamza Buturಶುದ್ಧ ಮತ್ತು ಅಶುದ್ಧವನ್ನು ಬೇರ್ಪಡಿಸಿ ತೋರಿಸುವ ತನಕ ನೀವು ಯಾವ ಸ್ಥಿತಿಯಲ್ಲಿದ್ದೀರೋ ಅದೇ ಸ್ಥಿತಿಯಲ್ಲಿ ಅಲ್ಲಾಹು ಸತ್ಯವಿಶ್ವಾಸಿಗಳನ್ನು ಬಿಟ್ಟುಬಿಡುವುದಿಲ್ಲ. ಅಲ್ಲಾಹು ನಿಮಗೆ ಅದೃಶ್ಯ ಜ್ಞಾನವನ್ನು ತಿಳಿಸಿಕೊಡುವುದೂ ಇಲ್ಲ. ಆದರೆ ಅಲ್ಲಾಹು ಅವನ ಸಂದೇಶವಾಹಕರುಗಳಲ್ಲಿ ಅವನು ಇಚ್ಛಿಸುವವರನ್ನು ಆರಿಸುತ್ತಾನೆ. ಆದ್ದರಿಂದ ನೀವು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡಿರಿ. ನೀವು ವಿಶ್ವಾಸವಿಟ್ಟರೆ ಮತ್ತು ದೇವಭಯದಿಂದ ಜೀವಿಸಿದರೆ ನಿಮಗೆ ಮಹಾ ಪ್ರತಿಫಲವಿದೆ.
Kannada Translation - Hamza Buturಅಲ್ಲಾಹು ತನ್ನ ಔದಾರ್ಯದಿಂದ ದಯಪಾಲಿಸಿದ ಧನದಲ್ಲಿ ಜಿಪುಣತೆ ತೋರುವವರು ಯಾರೋ—ಅದು ಅವರಿಗೆ ಒಳಿತೆಂದು ಅವರು ಭಾವಿಸದಿರಲಿ. ಅಲ್ಲ, ವಾಸ್ತವವಾಗಿ ಅದು ಅವರಿಗೆ ಕೆಡುಕಾಗಿದೆ. ಪುನರುತ್ಥಾನ ದಿನದಂದು ಅವರು ಜಿಪುಣತೆ ತೋರಿದ ವಸ್ತುವನ್ನು ಅವರ ಕೊರಳಿಗೆ ಹಾರವಾಗಿ ತೊಡಿಸಲಾಗುವುದು. ಭೂಮ್ಯಾಕಾಶಗಳ ವಾರಸುಹಕ್ಕು ಅಲ್ಲಾಹನಿಗೆ ಸೇರಿದ್ದು. ನೀವು ಮಾಡುವ ಕರ್ಮಗಳ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ತಿಳಿಯುವವನಾಗಿದ್ದಾನೆ.
Kannada Translation - Hamza Buturಅಲ್ಲಾಹು ಬಡವನು ಮತ್ತು ನಾವು ಶ್ರೀಮಂತರು ಎಂದು ಹೇಳಿದವರ (ಯಹೂದಿಗಳ) ಮಾತನ್ನು ಅಲ್ಲಾಹು ಖಂಡಿತ ಕೇಳಿದ್ದಾನೆ.[1] ಅವರು ಹೇಳಿದ ಮಾತನ್ನು ಮತ್ತು ಅವರು ಪ್ರವಾದಿಗಳನ್ನು ಅನ್ಯಾಯವಾಗಿ ಕೊಲೆ ಮಾಡಿದ್ದನ್ನು ನಾವು ದಾಖಲಿಸಿಡುತ್ತೇವೆ. ಉರಿಯುವ ನರಕ ಶಿಕ್ಷೆಯ ರುಚಿಯನ್ನು ನೋಡಿರಿ ಎಂದು ನಾವು ಅವರೊಡನೆ ಹೇಳುವೆವು.
Kannada Translation - Hamza Buturಅವರು ಯಾರೆಂದರೆ, “ನಮ್ಮ ಮುಂದೆ ಒಂದು ಬಲಿ ನೀಡಿ ಅದನ್ನು ಅಗ್ನಿಯು ಭಕ್ಷಿಸುವುದನ್ನು (ಕಣ್ಣಾರೆ ನೋಡುವ) ತನಕ ನಾವು ಯಾವುದೇ ಸಂದೇಶವಾಹಕನಲ್ಲಿ ವಿಶ್ವಾಸವಿಡಬಾರದು ಎಂದು ಅಲ್ಲಾಹು ನಮ್ಮಿಂದ ಕರಾರು ಪಡೆದಿದ್ದಾನೆ” ಎಂದು ಹೇಳಿದವರು.[1] ಹೇಳಿರಿ: “ನನಗಿಂತ ಮೊದಲು ಹಲವಾರು ಸಂದೇಶವಾಹಕರುಗಳು ಸ್ಪಷ್ಟ ಪುರಾವೆಗಳೊಂದಿಗೆ ಮತ್ತು ನೀವು ಹೇಳುತ್ತಿರುವ ಪವಾಡಗಳೊಂದಿಗೆ ನಿಮ್ಮ ಬಳಿಗೆ ಬಂದಿದ್ದರು. ಹಾಗಿದ್ದೂ ನೀವು ಸತ್ಯವಂತರಾಗಿದ್ದರೆ ನೀವೇಕೆ ಅವರನ್ನು ಕೊಲೆ ಮಾಡಿದಿರಿ?”
Kannada Translation - Hamza Buturಅವರು ನಿಮ್ಮನ್ನು ನಿಷೇಧಿಸುವುದಾದರೆ ನಿಮಗಿಂತ ಮೊದಲು ಸ್ಪಷ್ಟ ಪುರಾವೆಗಳೊಂದಿಗೆ, ಹೊತ್ತಗೆಗಳೊಂದಿಗೆ ಮತ್ತು ಪ್ರಕಾಶ ಬೀರುವ ಗ್ರಂಥದೊಂದಿಗೆ ಬಂದ ಸಂದೇಶವಾಹಕರು ಕೂಡ ನಿಷೇಧಿಸಲ್ಪಟ್ಟಿದ್ದರು.
Kannada Translation - Hamza Buturಎಲ್ಲಾ ಆತ್ಮಗಳೂ ಸಾವಿನ ರುಚಿಯನ್ನು ನೋಡಲಿವೆ. ನಿಮ್ಮ ಪ್ರತಿಫಲಗಳನ್ನು ಪುನರುತ್ಥಾನ ದಿನದಂದು ನಿಮಗೆ ಪೂರ್ಣವಾಗಿ ನೀಡಲಾಗುವುದು. ಆಗ ಯಾರು ನರಕದಿಂದ ದೂರವಾಗಿ, ಸ್ವರ್ಗಕ್ಕೆ ಪ್ರವೇಶ ಪಡೆಯುತ್ತಾನೋ ಅವನು ಜಯಶಾಲಿಯಾದನು. ಇಹಲೋಕ ಜೀವನವು ಮರುಳುಗೊಳಿಸುವ ಆನಂದ ಮಾತ್ರವಾಗಿದೆ.
Kannada Translation - Hamza Buturನಿಶ್ಚಯವಾಗಿಯೂ ನಿಮ್ಮ ತನು-ಧನಗಳಲ್ಲಿ ನಿಮ್ಮನ್ನು ಪರೀಕ್ಷಿಸಲಾಗುವುದು. ನಿಮಗಿಂತ ಮೊದಲು ಗ್ರಂಥ ನೀಡಲಾದವರಿಂದ ಮತ್ತು ಬಹುದೇವಾರಾಧಕರಿಂದ ನೀವು ಅನೇಕ ಚುಚ್ಚು ಮಾತುಗಳನ್ನು ಕೇಳುವಿರಿ. ನೀವು ತಾಳ್ಮೆ ವಹಿಸಿದರೆ ಮತ್ತು ಅಲ್ಲಾಹನನ್ನು ಭಯಪಟ್ಟು ಜೀವಿಸಿದರೆ ನಿಶ್ಚಯವಾಗಿಯೂ ಅದು ದೃಢಸಂಕಲ್ಪದಲ್ಲಿ ಸೇರಿದ ವಿಷಯವಾಗಿದೆ.
Kannada Translation - Hamza Butur“ನಿಶ್ಚಯವಾಗಿಯೂ ನೀವು ಅದನ್ನು (ಗ್ರಂಥವನ್ನು) ಜನರಿಗೆ ವಿವರಿಸಿಕೊಡಬೇಕು ಮತ್ತು ಅದನ್ನು ಬಚ್ಚಿಡಬಾರದು” ಎಂದು ಅಲ್ಲಾಹು ಗ್ರಂಥ ನೀಡಲಾದವರಿಂದ ಕರಾರು ಪಡೆದ ಸಂದರ್ಭ. ಆದರೆ ಅವರು ಅದನ್ನು (ಗ್ರಂಥವನ್ನು) ತಮ್ಮ ಬೆನ್ನ ಹಿಂದಕ್ಕೆ ಎಸೆದರು ಮತ್ತು ಅದನ್ನು ಅಲ್ಪ ಬೆಲೆಗೆ ಮಾರಾಟ ಮಾಡಿದರು. ಅವರು ಮಾಡಿದ ಮಾರಾಟವು ಬಹಳ ನಿಕೃಷ್ಟವಾಗಿದೆ!
Kannada Translation - Hamza Buturತಾವು ಮಾಡಿದ ಕರ್ಮಗಳ ಬಗ್ಗೆ ಸಂತೋಷಪಡುವವರು ಮತ್ತು ತಾವು ಮಾಡದ ಕರ್ಮಗಳ ಹೆಸರಿನಲ್ಲಿ ಪ್ರಶಂಸೆ ಪಡೆಯಲು ಇಷ್ಟಪಡುವವರು ಯಾರೋ—ಅವರು ಶಿಕ್ಷೆಯಿಂದ ಮುಕ್ತರೆಂದು ನೀವೆಂದೂ ಭಾವಿಸಬೇಡಿ. ಅವರಿಗೆ ಯಾತನಾಮಯ ಶಿಕ್ಷೆಯಿದೆ.
Kannada Translation - Hamza Buturಅವರು ಯಾರೆಂದರೆ, ನಿಂತುಕೊಂಡು, ಕುಳಿತುಕೊಂಡು ಮತ್ತು ಪಾರ್ಶ್ವಕ್ಕೆ ಸರಿದು (ಮಲಗಿಕೊಂಡು) ಅಲ್ಲಾಹನನ್ನು ಸ್ಮರಿಸುವವರು ಮತ್ತು ಭೂಮ್ಯಾಕಾಶಗಳ ಸೃಷ್ಟಿಯ ಬಗ್ಗೆ ಆಲೋಚಿಸುವವರು. (ಅವರು ಹೇಳುತ್ತಾರೆ): “ಓ ನಮ್ಮ ಪರಿಪಾಲಕನೇ! ನೀನು ಇದನ್ನು ವ್ಯರ್ಥವಾಗಿ ಸೃಷ್ಟಿಸಿಲ್ಲ. ನೀನು ಪರಿಶುದ್ಧನು. ಆದ್ದರಿಂದ ನಮ್ಮನ್ನು ನರಕ ಶಿಕ್ಷೆಯಿಂದ ರಕ್ಷಿಸು.
Kannada Translation - Hamza Buturಓ ನಮ್ಮ ಪರಿಪಾಲಕನೇ! ನಿಮ್ಮ ಪರಿಪಾಲಕನಲ್ಲಿ (ಅಲ್ಲಾಹನಲ್ಲಿ) ವಿಶ್ವಾಸವಿಡಿ ಎಂದು ಹೇಳುತ್ತಾ ಸತ್ಯವಿಶ್ವಾಸಕ್ಕೆ ಕರೆ ನೀಡುವವನ ಕರೆಯನ್ನು ಕೇಳಿ ನಾವು ವಿಶ್ವಾಸವಿಟ್ಟಿದ್ದೇವೆ. ಆದ್ದರಿಂದ ಓ ನಮ್ಮ ಪರಿಪಾಲಕನೇ! ನಮ್ಮ ಪಾಪಗಳನ್ನು ಕ್ಷಮಿಸು ಮತ್ತು ನಮ್ಮ ದೋಷಗಳನ್ನು ನಮ್ಮಿಂದ ಅಳಿಸು; ನಮ್ಮನ್ನು ನೀತಿವಂತರೊಂದಿಗೆ ಮರಣಹೊಂದುವಂತೆ ಮಾಡು.
Kannada Translation - Hamza Buturಓ ನಮ್ಮ ಪರಿಪಾಲಕನೇ! ನಿನ್ನ ಸಂದೇಶವಾಹಕರ ಮೂಲಕ ನೀನು ವಾಗ್ದಾನ ಮಾಡಿದ್ದನ್ನು ನಮಗೆ ದಯಪಾಲಿಸು ಮತ್ತು ಪುನರುತ್ಥಾನ ದಿನದಂದು ನಮ್ಮನ್ನು ಅವಮಾನಿಸದಿರು. ನಿಶ್ಚಯವಾಗಿಯೂ ನೀನು ವಾಗ್ದಾನವನ್ನು ಉಲ್ಲಂಘಿಸುವುದಿಲ್ಲ.”
Kannada Translation - Hamza Buturಆಗ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಉತ್ತರಿಸಿದನು: “ಪುರುಷನಾಗಲಿ ಸ್ತ್ರೀಯಾಗಲಿ ನಿಮ್ಮಲ್ಲಿ ಕರ್ಮವೆಸಗಿದ ಯಾರ ಕರ್ಮವನ್ನೂ ನಾನು ನಿಷ್ಫಲಗೊಳಿಸುವುದಿಲ್ಲ. ನೀವು ಒಬ್ಬರು ಇನ್ನೊಬ್ಬರಿಂದ ಉಂಟಾದವರು. ಆದ್ದರಿಂದ ವಲಸೆ (ಹಿಜ್ರ) ಮಾಡಿದವರು, ತಮ್ಮ ಮನೆಗಳಿಂದ ಹೊರಹಾಕಲಾದವರು, ನನ್ನ ಮಾರ್ಗದಲ್ಲಿ ತೊಂದರೆಯನ್ನು ಅನುಭವಿಸಿದವರು, (ನನ್ನ ಮಾರ್ಗದಲ್ಲಿ) ಯುದ್ಧ ಮಾಡಿದವರು ಮತ್ತು ಕೊಲೆಯಾದವರು (ಹುತಾತ್ಮರು) ಯಾರೋ—ಅವರ ಪಾಪಗಳನ್ನು ನಾನು ಅಳಿಸುವೆನು ಮತ್ತು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಅವರನ್ನು ಪ್ರವೇಶ ಮಾಡಿಸುವೆನು. ಇದು ಅಲ್ಲಾಹನ ಕಡೆಯ ಪ್ರತಿಫಲವಾಗಿದೆ. ಅಲ್ಲಾಹನ ಬಳಿ ಅತ್ಯುತ್ತಮವಾದ ಪ್ರತಿಫಲವಿದೆ.
Kannada Translation - Hamza Buturಆದರೆ ತಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡುವವರು ಯಾರೋ—ಅವರಿಗೆ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿವೆ. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದು ಅಲ್ಲಾಹನ ಕಡೆಯ ಔತಣವಾಗಿದೆ. ನೀತಿವಂತರಿಗೆ ಅಲ್ಲಾಹನ ಬಳಿಯಿರುವುದೇ ಅತ್ಯುತ್ತಮವಾಗಿದೆ.
Kannada Translation - Hamza Buturನಿಶ್ಚಯವಾಗಿಯೂ ಗ್ರಂಥದವರಲ್ಲಿ ಕೆಲವರಿದ್ದಾರೆ. ಅವರು ಅಲ್ಲಾಹನಲ್ಲಿ, ನಿಮಗೆ ಅವತೀರ್ಣವಾಗಿರುವುದರಲ್ಲಿ ಮತ್ತು ಅವರಿಗೆ ಅವತೀರ್ಣವಾಗಿರುವುದರಲ್ಲಿ ವಿಶ್ವಾಸವಿಡುತ್ತಾರೆ. ಅವರು ಅಲ್ಲಾಹನಿಗೆ ವಿಧೇಯತೆಯಿಂದ ಶರಣಾಗಿದ್ದಾರೆ. ಅವರು ಅಲ್ಲಾಹನ ವಚನಗಳನ್ನು ಅಲ್ಪ ಬೆಲೆಗೆ ಮಾರುವುದಿಲ್ಲ. ಅವರಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಪ್ರತಿಫಲವಿದೆ. ನಿಶ್ಚಯವಾಗಿಯೂ ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುತ್ತಾನೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ತಾಳ್ಮೆಯಿಂದಿರಿ, ಪರಸ್ಪರ ಸ್ಥೈರ್ಯವನ್ನು ತೋರಿರಿ ಮತ್ತು ಪ್ರತಿರೋಧ ಸನ್ನದ್ಧರಾಗಿರಿ. ಅಲ್ಲಾಹನನ್ನು ಭಯಪಡಿರಿ. ನೀವು ಯಶಸ್ವಿಯಾಗುವುದಕ್ಕಾಗಿ.