Kannada Translation - Hamza Buturಓ ಜನರೇ! ನಿಮ್ಮನ್ನು ಒಂದೇ ದೇಹದಿಂದ ಸೃಷ್ಟಿಸಿದ ನಿಮ್ಮ ಪರಿಪಾಲಕನನ್ನು (ಅಲ್ಲಾಹನನ್ನು) ಭಯಪಡಿರಿ. ಅವನು ಅದರಿಂದಲೇ ಅದರ ಸಂಗಾತಿಯನ್ನು ಸೃಷ್ಟಿಸಿದನು ಮತ್ತು ಅವರಿಬ್ಬರಿಂದ ಅಸಂಖ್ಯ ಪುರುಷರನ್ನು ಮತ್ತು ಸ್ತ್ರೀಯರನ್ನು ಹಬ್ಬಿಸಿದನು. ಯಾರ ಹೆಸರಿನಿಂದ ನೀವು ಪರಸ್ಪರ ಕೇಳುತ್ತೀರೋ ಆ ಅಲ್ಲಾಹನನ್ನು ಮತ್ತು ಕುಟುಂಬ ಸಂಬಂಧ ಕಡಿಯುವುದನ್ನು ಭಯಪಡಿರಿ. ಅಲ್ಲಾಹು ನಿಮ್ಮನ್ನು ಸದಾ ಗಮನಿಸುತ್ತಿದ್ದಾನೆ.
Kannada Translation - Hamza Buturಅನಾಥರಿಗೆ ಅವರ ಆಸ್ತಿಯನ್ನು ಕೊಟ್ಟುಬಿಡಿ. ಶುದ್ಧ (ಮತ್ತು ಧರ್ಮಸಮ್ಮತ) ವಸ್ತುಗಳ ಬದಲಿಗೆ ಹೊಲಸು (ಮತ್ತು ನಿಷಿದ್ಧ) ವಸ್ತುಗಳನ್ನು ಪಡೆಯಬೇಡಿ. ಅವರ ಆಸ್ತಿಯನ್ನು ನಿಮ್ಮ ಆಸ್ತಿಯೊಂದಿಗೆ ಸೇರಿಸಿ ತಿನ್ನಬೇಡಿ. ನಿಶ್ಚಯವಾಗಿಯೂ ಅದು ಗಂಭೀರ ಅಪರಾಧವಾಗಿದೆ.
Kannada Translation - Hamza Buturಅನಾಥ ಹೆಣ್ಣುಮಕ್ಕಳ ವಿಷಯದಲ್ಲಿ ನ್ಯಾಯದಿಂದ ವರ್ತಿಸಲು ನಿಮಗೆ ಸಾಧ್ಯವಾಗದೆಂದು ನೀವು ಭಯಪಡುವುದಾದರೆ, ಇತರ ಮಹಿಳೆಯರಲ್ಲಿ ನಿಮಗೆ ಇಷ್ಟವಾದ ಇಬ್ಬರು, ಮೂವರು ಅಥವಾ ನಾಲ್ವರನ್ನು ವಿವಾಹವಾಗಿರಿ.[1] ಆದರೆ (ಅವರ ನಡುವೆ) ನ್ಯಾಯದಿಂದ ವರ್ತಿಸಲು ನಿಮಗೆ ಸಾಧ್ಯವಾಗದೆಂಬ ಭಯವಿದ್ದರೆ, ಒಬ್ಬಳನ್ನೇ ವಿವಾಹವಾಗಿರಿ.[2] ಅಥವಾ ನಿಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯನ್ನು ವಿವಾಹವಾಗಿರಿ. ನೀವು (ಅನ್ಯಾಯದ ಕಡೆಗೆ) ವಾಲದಿರಲು ಇದು ಅತ್ಯಂತ ಸೂಕ್ತವಾಗಿದೆ.
Kannada Translation - Hamza Buturಮಹಿಳೆಯರಿಗೆ ಅವರ ವಧುದಕ್ಷಿಣೆಯನ್ನು (ಮಹರ್) ಆತ್ಮತೃಪ್ತಿಯಿಂದ ನೀಡಿರಿ. ಅವರು ಸ್ವಯಂಪ್ರೇರಿತವಾಗಿ ಅದರಲ್ಲಿ ಏನಾದರೂ ಬಿಟ್ಟುಬಿಟ್ಟರೆ ಅದನ್ನು ಸಂತೋಷದಿಂದ ಮತ್ತು ಸಂತೃಪ್ತಿಯಿಂದ ಸೇವಿಸಿರಿ.
Kannada Translation - Hamza Buturಅಲ್ಲಾಹು ನಿಮ್ಮ ಜೀವನೋಪಾಯದ ಮಾರ್ಗವಾಗಿ ಮಾಡಿರುವ ನಿಮ್ಮ ಧನವನ್ನು ವಿವೇಕವಿಲ್ಲದವರಿಗೆ ನೀಡಬೇಡಿ. ಆದರೆ, ಅದರಿಂದ ಅವರಿಗೆ ಆಹಾರ ಮತ್ತು ಬಟ್ಟೆ-ಬರೆಗಳನ್ನು ನೀಡಿರಿ; ಮತ್ತು ಅವರೊಂದಿಗೆ ಉತ್ತಮವಾದ ಮಾತುಗಳನ್ನಾಡಿರಿ.
Kannada Translation - Hamza Buturಅನಾಥರು ಪ್ರೌಢರಾಗುವ ತನಕ ಅವರನ್ನು ಪರೀಕ್ಷಿಸುತ್ತಿರಿ. ಅವರಲ್ಲಿ ವಿವೇಕ ಮತ್ತು ವ್ಯವಹಾರ ಪ್ರಜ್ಞೆಯನ್ನು ಕಂಡರೆ, ಅವರ ಆಸ್ತಿಯನ್ನು ಅವರಿಗೆ ಹಸ್ತಾಂತರಿಸಿ. ಅವರು ಪ್ರೌಢರಾಗುತ್ತಿದ್ದಾರೆಂಬ ಭಯದಿಂದ ಅವರ ಆಸ್ತಿಯನ್ನು ಅಗತ್ಯಕ್ಕಿಂತ ಹೆಚ್ಚಾಗಿ ತ್ವರೆಯಿಂದ ತಿನ್ನಬೇಡಿ. ಪೋಷಕನು ಶ್ರೀಮಂತನಾಗಿದ್ದರೆ ಆ ಆಸ್ತಿಯನ್ನು ಮುಟ್ಟದೆ ಸಂಯಮ ತೋರಲಿ. ಆದರೆ ಅವನು ಬಡವನಾಗಿದ್ದರೆ ಅಗತ್ಯಕ್ಕೆ ತಕ್ಕಷ್ಟು ಮಾತ್ರ ತೆಗೆದುಕೊಳ್ಳಲಿ. ಅವರ ಆಸ್ತಿಯನ್ನು ಅವರಿಗೆ ಹಸ್ತಾಂತರಿಸುವಾಗ ಸಾಕ್ಷಿಗಳನ್ನು ನಿಲ್ಲಿಸಿರಿ. ವಿಚಾರಣೆ ಮಾಡುವವನಾಗಿ ಅಲ್ಲಾಹು ಸಾಕು.
Kannada Translation - Hamza Buturಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟುಹೋದ ಆಸ್ತಿಯಲ್ಲಿ ಪುರುಷರಿಗೆ ಪಾಲಿದೆ. ಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟುಹೋದ ಆಸ್ತಿಯಲ್ಲಿ ಮಹಿಳೆಯರಿಗೂ ಪಾಲಿದೆ. ಆಸ್ತಿ ಕಡಿಮೆಯಿರಲಿ ಅಥವಾ ಹೆಚ್ಚಿರಲಿ. ಅದರ ಪಾಲನ್ನು ನಿಗದಿಪಡಿಸಲಾಗಿದೆ.
Kannada Translation - Hamza Buturಆಸ್ತಿ ಪಾಲು ಮಾಡುವಾಗ (ಬೇರೆ) ಸಂಬಂಧಿಕರು, ಅನಾಥರು ಮತ್ತು ಬಡವರು ಉಪಸ್ಥಿತರಿದ್ದರೆ, ಅವರಿಗೆ ಅದರಿಂದ ಸ್ವಲ್ಪ ಕೊಟ್ಟುಬಿಡಿ. ಅವರೊಂದಿಗೆ ಉತ್ತಮ ಮಾತುಗಳನ್ನಾಡಿರಿ.
Kannada Translation - Hamza Buturತಮ್ಮ ಅಮಾಯಕ ಮಕ್ಕಳನ್ನು ಬಿಟ್ಟು (ತಾವು ಸತ್ತರೆ ಅವರ ಸ್ಥಿತಿಯೇನಾಗಬಹುದೆಂದು) ಭಯಪಡುವವರು (ಪೋಷಕರು) ಇತರರ ಬಗ್ಗೆಯೂ ಹಾಗೆಯೇ ಭಯಪಡಲಿ. ಅವರು ಅಲ್ಲಾಹನನ್ನು ಭಯಪಡಲಿ ಮತ್ತು ಸರಿಯಾದ ಮಾತುಗಳನ್ನಾಡಲಿ.[1]
Kannada Translation - Hamza Buturನಿಶ್ಚಯವಾಗಿಯೂ ಅನಾಥರ ಆಸ್ತಿಯನ್ನು ಅನ್ಯಾಯವಾಗಿ ತಿನ್ನುವವರು ಯಾರೋ—ಅವರು ತಮ್ಮ ಉದರಗಳಲ್ಲಿ ಅಗ್ನಿಯನ್ನೇ ತುಂಬಿಸುತ್ತಾರೆ. ಅವರು ಸದ್ಯವೇ ಧಗಧಗಿಸುವ ಅಗ್ನಿಯಲ್ಲಿ ಉರಿಯುವರು.
Kannada Translation - Hamza Buturನಿಮ್ಮ ಮಕ್ಕಳ (ಉತ್ತರಾಧಿಕಾರದ) ವಿಷಯದಲ್ಲಿ ಅಲ್ಲಾಹು ನಿಮಗೆ ಆದೇಶಿಸುತ್ತಾನೆ. ಒಬ್ಬ ಪುರುಷನ ಪಾಲು ಇಬ್ಬರು ಮಹಿಳೆಯರ ಪಾಲಿಗೆ ಸಮಾನವಾಗಿದೆ. ಮೃತನಿಗೆ ಹೆಣ್ಣು ಮಕ್ಕಳು ಮಾತ್ರವಿದ್ದು, ಅವರು ಇಬ್ಬರಿಗಿಂತ ಹೆಚ್ಚಿದ್ದರೆ,[1] ಅವನು ಬಿಟ್ಟು ಹೋದ ಆಸ್ತಿಯ ಮೂರನೇ ಎರಡು ಭಾಗವು ಅವರಿಗೆ ದೊರೆಯುತ್ತದೆ. ಒಬ್ಬ ಮಗಳು ಮಾತ್ರವಿದ್ದರೆ ಅವಳಿಗೆ ಅರ್ಧ ಭಾಗ ದೊರೆಯುತ್ತದೆ. ಮೃತನಿಗೆ ಮಕ್ಕಳಿದ್ದರೆ ಅವನ ಮಾತಾಪಿತರಲ್ಲಿ ಪ್ರತಿಯೊಬ್ಬರಿಗೂ ಅವನು ಬಿಟ್ಟುಹೋದ ಆಸ್ತಿಯ ಆರನೇ ಒಂದು ಭಾಗ ದೊರೆಯುತ್ತದೆ. ಅವನು ಸಂತಾನರಹಿತನಾಗಿದ್ದು ಮಾತಾಪಿತರು ಅವನ ವಾರಸುದಾರರಾಗಿದ್ದರೆ, ಅವನ ತಾಯಿಗೆ ಮೂರನೇ ಒಂದು ಭಾಗ ದೊರೆಯುತ್ತದೆ.[2] ಅವನಿಗೆ ಸಹೋದರರಿದ್ದರೆ (ಮತ್ತು / ಅಥವಾ ಸಹೋದರಿಯರಿದ್ದರೆ) ಅವನ ತಾಯಿಗೆ ಆರನೇ ಒಂದು ಭಾಗ ದೊರೆಯುತ್ತದೆ.[3] ಅವನು ಮಾಡಿರುವ ಉಯಿಲು ಮತ್ತು ಸಾಲವಿದ್ದರೆ ಅದನ್ನು ತೀರಿಸಿದ ನಂತರ. ನಿಮ್ಮ ತಂದೆ-ತಾಯಿ ಮತ್ತು ಮಕ್ಕಳಲ್ಲಿ ಯಾರು ನಿಮಗೆ ಹೆಚ್ಚು ಉಪಕಾರ ಮಾಡುವರೆಂದು ನಿಮಗೆ ತಿಳಿದಿಲ್ಲ. ಇವು ಅಲ್ಲಾಹು ನಿಗದಿಪಡಿಸಿದ ಪಾಲುಗಳು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturನಿಮ್ಮ ಪತ್ನಿಯರಿಗೆ ಮಕ್ಕಳಿಲ್ಲದಿದ್ದರೆ, ಅವರು ಬಿಟ್ಟುಹೋದ ಆಸ್ತಿಯಲ್ಲಿ ಅರ್ಧ ಭಾಗವು ನಿಮಗೆ ದೊರೆಯುತ್ತದೆ. ಅವರಿಗೆ ಮಕ್ಕಳಿದ್ದರೆ ಅವರು ಬಿಟ್ಟು ಹೋದ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗವು ನಿಮಗೆ ದೊರೆಯುತ್ತದೆ. ಇದು ಅವರು ಮಾಡುವ ಉಯಿಲು ಮತ್ತು ಸಾಲವನ್ನು ತೀರಿಸಿದ ನಂತರ. ನಿಮಗೆ ಮಕ್ಕಳಿಲ್ಲದಿದ್ದರೆ, ನೀವು ಬಿಟ್ಟುಹೋದ ಆಸ್ತಿಯಲ್ಲಿ ನಾಲ್ಕನೇ ಒಂದು ಭಾಗವು ಅವರಿಗೆ (ಪತ್ನಿಯರಿಗೆ) ದೊರೆಯುತ್ತದೆ. ನಿಮಗೆ ಮಕ್ಕಳಿದ್ದರೆ, ನೀವು ಬಿಟ್ಟುಹೋದ ಆಸ್ತಿಯಲ್ಲಿ ಎಂಟನೇ ಒಂದು ಭಾಗವು ಅವರಿಗೆ ದೊರೆಯುತ್ತದೆ. ಇದು ನೀವು ಮಾಡುವ ಉಯಿಲು ಮತ್ತು ಸಾಲವನ್ನು ತೀರಿಸಿದ ನಂತರ. ವಾರಸು ಆಸ್ತಿಯನ್ನು ಬಿಟ್ಟು ಹೋಗುವ ಪುರುಷ ಅಥವಾ ಮಹಿಳೆಗೆ ತಂದೆ-ತಾಯಿ ಹಾಗೂ ಮಕ್ಕಳಿಲ್ಲದೆ, ಕೇವಲ ಸಹೋದರ ಅಥವಾ ಸಹೋದರಿಯಿದ್ದರೆ, ಆ ಇಬ್ಬರಲ್ಲಿ ಪ್ರತಿಯೊಬ್ಬರಿಗೂ ಆರನೇ ಒಂದು ಭಾಗವು ದೊರೆಯುತ್ತದೆ. ಅವರು ಇಬ್ಬರಿಗಿಂತ ಹೆಚ್ಚಿದ್ದರೆ, ಅವರು ಮೂರನೇ ಒಂದು ಭಾಗದಲ್ಲಿ ಸಮಾನ ಪಾಲುದಾರರಾಗುತ್ತಾರೆ. ಇದು ಹಾನಿಕರವಲ್ಲದ ಉಯಿಲು[1] ಮತ್ತು ಸಾಲವನ್ನು ತೀರಿಸಿದ ನಂತರ. ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ಸಹಿಷ್ಣುತೆಯುಳ್ಳವನಾಗಿದ್ದಾನೆ.
Kannada Translation - Hamza Buturಇವು ಅಲ್ಲಾಹನ ಎಲ್ಲೆಗಳು. ಯಾರು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಅನುಸರಿಸುತ್ತಾನೋ—ಅವನನ್ನು ಅಲ್ಲಾಹು ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವನು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅದೇ ಮಹಾ ವಿಜಯ.
Kannada Translation - Hamza Buturಯಾರು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ಅವಿಧೇಯತೆ ತೋರುತ್ತಾನೋ ಮತ್ತು ಅವನ ಎಲ್ಲೆಗಳನ್ನು ಮೀರುತ್ತಾನೋ—ಅವನನ್ನು ಅಲ್ಲಾಹು ನರಕಾಗ್ನಿಗೆ ಪ್ರವೇಶ ಮಾಡಿಸುವನು. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುವನು. ಅವನಿಗೆ ಅಪಮಾನಕರ ಶಿಕ್ಷೆಯಿದೆ.
Kannada Translation - Hamza Buturನಿಮ್ಮ ಮಹಿಳೆಯರಲ್ಲಿ ಯಾರು ಅಶ್ಲೀಲ ಕೃತ್ಯವನ್ನು ಮಾಡುತ್ತಾರೋ—ಅವರಿಗೆದುರಾಗಿ ನಿಮ್ಮಲ್ಲಿನ ನಾಲ್ಕು ಮಂದಿಯನ್ನು ಸಾಕ್ಷಿ ನಿಲ್ಲಿಸಿರಿ. ಅವರು ಸಾಕ್ಷಿ ನಿಂತರೆ ಅವರು (ಮಹಿಳೆಯರು) ಮರಣವನ್ನಪ್ಪುವ ತನಕ ಅಥವಾ ಅಲ್ಲಾಹು ಅವರಿಗೊಂದು ಮಾರ್ಗವನ್ನು ಮಾಡಿಕೊಡುವ ತನಕ ಅವರನ್ನು ನೀವು ಮನೆಗಳಲ್ಲಿ ತಡೆದಿರಿಸಿರಿ.[1]
Kannada Translation - Hamza Buturನಿಮ್ಮಲ್ಲಿ ಯಾರು ಅಶ್ಲೀಲ ಕೃತ್ಯವನ್ನು ಮಾಡುತ್ತಾರೋ ಅವರಿಗೆ (ಇಬ್ಬರಿಗೂ) ತೊಂದರೆ ಕೊಡಿ. ಅವರಿಬ್ಬರೂ ಪಶ್ಚಾತ್ತಾಪಪಟ್ಟು ನಡತೆಯನ್ನು ಸರಿಪಡಿಸಿದರೆ ಅವರನ್ನು ಬಿಟ್ಟುಬಿಡಿ.[1] ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Kannada Translation - Hamza Buturಅಲ್ಲಾಹು ಪಶ್ಚಾತ್ತಾಪವನ್ನು ಸ್ವೀಕರಿಸುವುದು ಅಜ್ಞಾನದಿಂದ ತಪ್ಪು ಮಾಡಿ (ಅದು ತಪ್ಪೆಂದು ತಿಳಿದಾಗ) ತಡಮಾಡದೆ ಪಶ್ಚಾತ್ತಾಪಪಡುವವರಿಂದ ಮಾತ್ರ. ಅವರ ಪಶ್ಚಾತ್ತಾಪವನ್ನು ಅಲ್ಲಾಹು ಸ್ವೀಕರಿಸುತ್ತಾನೆ. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturತಪ್ಪು ಮಾಡುತ್ತಲೇ ಇದ್ದು, ಸಾವು ಸನ್ನಿಹಿತವಾದಾಗ, “ನಾನು ಪಶ್ಚಾತ್ತಾಪಪಟ್ಟಿದ್ದೇನೆ” ಎಂದು ಹೇಳುವವರ ಪಶ್ಚಾತ್ತಾಪವನ್ನು ಸ್ವೀಕರಿಸಲಾಗದು. ಸತ್ಯನಿಷೇಧಿಗಳಾಗಿ ಸಾಯುವವರ ಪಶ್ಚಾತ್ತಾಪವನ್ನೂ ಸ್ವೀಕರಿಸಲಾಗದು. ಅವರಿಗೆ ನಾವು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ಮಹಿಳೆಯರನ್ನು ಬಲವಂತದಿಂದ ಉತ್ತರಾಧಿಕಾರವಾಗಿ ಪಡೆಯುವುದು ನಿಮಗೆ ಧರ್ಮಸಮ್ಮತವಲ್ಲ.[1] ನೀವು ಅವರಿಗೆ (ಪತ್ನಿಯರಿಗೆ) ನೀಡಿರುವುದರಲ್ಲಿ ಒಂದಂಶವನ್ನು ಹಿಂದಕ್ಕೆ ಪಡೆಯಲು ಅವರನ್ನು ತಡೆದಿರಿಸಬೇಡಿ— ಅವರು ಬಹಿರಂಗವಾಗಿ ಏನಾದರೂ ಅಶ್ಲೀಲ ಕೃತ್ಯವೆಸಗದಿದ್ದರೆ. ಅವರೊಂದಿಗೆ ಉತ್ತಮವಾಗಿ ವರ್ತಿಸಿರಿ. ನೀವು ಅವರನ್ನು ದ್ವೇಷಿಸುವುದಾದರೆ, ಬಹುಶಃ ನೀವು ದ್ವೇಷಿಸುವ ಒಂದು ವಸ್ತುವಿನಲ್ಲಿ ಅಲ್ಲಾಹು ಅತ್ಯಧಿಕ ಒಳಿತನ್ನಿಟ್ಟಿರಬಹುದು.
Kannada Translation - Hamza Buturನೀವು ಒಬ್ಬ ಪತ್ನಿಯ ಬದಲಿಗೆ ಇನ್ನೊಬ್ಬ ಪತ್ನಿಯನ್ನು ತರಲು ಉದ್ದೇಶಿಸಿದರೆ, ಮತ್ತು ಅವರಲ್ಲಿ ಒಬ್ಬಳಿಗೆ ನೀವು ದೊಡ್ಡ ಮೊತ್ತವನ್ನು ಕೊಟ್ಟಿದ್ದರೆ, ಅದರಿಂದ ಏನನ್ನೂ ಹಿಂದಕ್ಕೆ ಪಡೆಯಬೇಡಿ. ಸುಳ್ಳಾರೋಪದಿಂದ ಮತ್ತು ಸ್ಪಷ್ಟ ಪಾಪದಿಂದ ನೀವು ಅದನ್ನು ಹಿಂದಕ್ಕೆ ಪಡೆಯುವಿರಾ?
Kannada Translation - Hamza Buturನಿಮ್ಮ ತಂದೆಯರು ವಿವಾಹವಾದ ಮಹಿಳೆಯರನ್ನು ನೀವು ವಿವಾಹವಾಗಬಾರದು. ಈಗಾಗಲೇ ಸಂಭವಿಸಿದವುಗಳ ಹೊರತು. ನಿಶ್ಚಯವಾಗಿಯೂ ಅದು ಅಶ್ಲೀಲ, ಅಸಹ್ಯ ಮತ್ತು ಕೆಟ್ಟ ಮಾರ್ಗವಾಗಿದೆ.
Kannada Translation - Hamza Buturನಿಮಗೆ ವಿವಾಹವಾಗಲು ನಿಷಿದ್ಧವಾಗಿರುವವರು ಯಾರೆಂದರೆ—ನಿಮ್ಮ ತಾಯಂದಿರು, ಹೆಣ್ಣುಮಕ್ಕಳು, ಸಹೋದರಿಯರು, ತಂದೆಯ ಸಹೋದರಿಯರು, ತಾಯಿಯ ಸಹೋದರಿಯರು, ಸಹೋದರರ ಹೆಣ್ಣುಮಕ್ಕಳು, ಸಹೋದರಿಯರ ಹೆಣ್ಣುಮಕ್ಕಳು, ನಿಮಗೆ ಸ್ತನಪಾನ ಮಾಡಿದ ತಾಯಂದಿರು, ಸ್ತನಪಾನ ಸಂಬಂಧದಲ್ಲಿ ಸಹೋದರಿಗಳಾಗಿರುವವರು, ನಿಮ್ಮ ಪತ್ನಿಯರ ತಾಯಂದಿರು, ನಿಮ್ಮ ಪೋಷಣೆಯಲ್ಲಿ ಬೆಳೆಯುತ್ತಿರುವ ನಿಮ್ಮ ಪತ್ನಿಯರ ಹೆಣ್ಣುಮಕ್ಕಳು—ನೀವು ಆ ಪತ್ನಿಯರೊಡನೆ ಲೈಂಗಿಕ ಸಂಪರ್ಕ ಮಾಡಿದ್ದರೆ—ನೀವು ಅವರೊಡನೆ ಲೈಂಗಿಕ ಸಂಪರ್ಕ ಮಾಡಿರದಿದ್ದರೆ ಆ ಸಾಕುಪುತ್ರಿಯರನ್ನು ವಿವಾಹವಾಗುವುದರಲ್ಲಿ ದೋಷವಿಲ್ಲ; ನಿಮ್ಮ ಬೆನ್ನೆಲುಬಿನಿಂದ ಹುಟ್ಟಿದ ಗಂಡುಮಕ್ಕಳ ಪತ್ನಿಯರು ಮತ್ತು ಇಬ್ಬರು ಸಹೋದರಿಯರನ್ನು ಏಕಕಾಲದಲ್ಲಿ ವಿವಾಹವಾಗುವುದು—ಈಗಾಗಲೇ ಸಂಭವಿಸಿರುವುದರ ಹೊರತು. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Kannada Translation - Hamza Buturವಿವಾಹಿತ ಮಹಿಳೆಯರು (ಕೂಡ ನಿಮಗೆ ನಿಷಿದ್ಧವಾಗಿದ್ದಾರೆ). ಆದರೆ ನಿಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರ ಹೊರತು. ಇವು ಅಲ್ಲಾಹು ಕಡ್ಡಾಯಗೊಳಿಸಿದ ನಿಯಮಗಳಾಗಿವೆ. ಇವರ ಹೊರತಾಗಿರುವ ಎಲ್ಲಾ ಮಹಿಳೆಯರು ನಿಮಗೆ ಧರ್ಮಸಮ್ಮತವಾಗಿದ್ದಾರೆ. ನೀವು ಪರಿಶುದ್ಧ ಜೀವನವನ್ನು ಬಯಸುವವರು ಮತ್ತು ಅನೈತಿಕತೆಯನ್ನು ಬಯಸದವರಾಗಿದ್ದರೆ, ನಿಮ್ಮ ಧನವನ್ನು ನೀಡಿ ಇವರನ್ನು ವಿವಾಹವಾಗಬಹುದು. ನೀವು ಯಾರಿಂದ ಸುಖವನ್ನು ಪಡೆಯಲು ಬಯಸುತ್ತೀರೋ ಅವರಿಗೆ ನಿಶ್ಚಯಿಸಲಾದ ವಧುದಕ್ಷಿಣೆಯನ್ನು (ಮಹರ್) ಕೊಟ್ಟುಬಿಡಿ. ವಧುದಕ್ಷಿಣೆಯನ್ನು ನಿಶ್ಚಯಿಸಲಾದ ಬಳಿಕ ನೀವು ಪರಸ್ಪರ ತೃಪ್ತಿಯಿಂದ ವಿನಾಯಿತಿ ತೋರಿದರೆ ಅದರಲ್ಲಿ ನಿಮಗೆ ದೋಷವಿಲ್ಲ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಸತ್ಯವಿಶ್ವಾಸಿಗಳಾದ ಸ್ವತಂತ್ರ ಮಹಿಳೆಯರನ್ನು ವಿವಾಹವಾಗಲು ನಿಮಗೆ ಆರ್ಥಿಕ ಸಾಮರ್ಥ್ಯವಿಲ್ಲದಿದ್ದರೆ, ನಿಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರಲ್ಲಿ ಒಬ್ಬಳನ್ನು (ಪತ್ನಿಯಾಗಿ ಸ್ವೀಕರಿಸಬಹುದು). ನಿಮ್ಮ ವಿಶ್ವಾಸದ ಬಗ್ಗೆ ಅಲ್ಲಾಹನಿಗೆ ಚೆನ್ನಾಗಿ ತಿಳಿದಿದೆ. ನೀವು ಒಬ್ಬರು ಇನ್ನೊಬ್ಬರಿಂದ ಉಂಟಾಗಿದ್ದೀರಿ. ಅವರ ಯಜಮಾನರ ಒಪ್ಪಿಗೆ ಪಡೆದು ಅವರನ್ನು ವಿವಾಹವಾಗಿರಿ. ಸ್ವೀಕಾರಾರ್ಹ ರೀತಿಯಲ್ಲಿ ಅವರ ವಧುದಕ್ಷಿಣೆಯನ್ನು ಅವರಿಗೆ ಕೊಟ್ಟುಬಿಡಿ. ಅವರು ಪರಿಶುದ್ಧೆಯರಾಗಿರಲಿ; ಅನೈತಿಕ ಸಂಬಂಧವಿರುವವರೋ ಅಥವಾ ರಹಸ್ಯ ಪ್ರೇಮಿಗಳನ್ನು ಹೊಂದಿದವರೋ ಆಗಿರಬಾರದು. ಅವರು ವಿವಾಹಿತೆಯರಾದ ಬಳಿಕ ವೇಶ್ಯಾವೃತ್ತಿ ಮಾಡಿದರೆ, ಸ್ವತಂತ್ರ ಮಹಿಳೆಯರಿಗೆ ನೀಡಲಾಗುವ ಶಿಕ್ಷೆಯ ಅರ್ಧ ಭಾಗವನ್ನು ಅವರಿಗೆ ನೀಡಲಾಗುವುದು. ಇದು (ಗುಲಾಮಸ್ತ್ರೀಯರ ವಿವಾಹ) ನಿಮ್ಮಲ್ಲಿ ಪಾಪವನ್ನು ಭಯಪಡುವವರಿಗೆ ನೀಡಲಾದ ಅನುಮತಿಯಾಗಿದೆ. ನೀವು ತಾಳ್ಮೆಯಿಂದಿದ್ದರೆ ಅದು ನಿಮಗೆ ಒಳಿತಾಗಿದೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Kannada Translation - Hamza Buturಅಲ್ಲಾಹು ನಿಮಗೆ (ವಿಷಯಗಳನ್ನು) ಸ್ಪಷ್ಟಗೊಳಿಸಲು, ನಿಮ್ಮ (ನೀತಿವಂತ) ಪೂರ್ವಜರ ಚರ್ಯೆಗಳನ್ನು ತೋರಿಸಿಕೊಡಲು ಮತ್ತು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲು ಬಯಸುತ್ತಾನೆ. ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಅಲ್ಲಾಹು ನಿಮ್ಮ ಪಶ್ಚಾತ್ತಾಪವನ್ನು ಸ್ವೀಕರಿಸಲು ಬಯಸುತ್ತಾನೆ. ಆದರೆ ಸ್ವೇಚ್ಛೆಗಳನ್ನು ಹಿಂಬಾಲಿಸುವವರು ನೀವು ಅತಿದೊಡ್ಡ ದುರ್ಮಾರ್ಗದಲ್ಲಿ ತಪ್ಪಿಹೋಗಬೇಕೆಂದು ಬಯಸುತ್ತಾರೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಒಬ್ಬರು ಇನ್ನೊಬ್ಬರ ಧನವನ್ನು ಅನ್ಯಾಯವಾಗಿ ತಿನ್ನಬೇಡಿ. ಪರಸ್ಪರ ಸಂತೃಪ್ತಿಯಿಂದ ನಡೆಸುವ ವ್ಯವಹಾರದ ಹೊರತು. ನೀವು ನಿಮ್ಮನ್ನೇ ಕೊಲ್ಲಬೇಡಿ.[1] ನಿಶ್ಚಯವಾಗಿಯೂ ಅಲ್ಲಾಹು ನಿಮ್ಮೊಡನೆ ಅತ್ಯಂತ ದಯೆಯುಳ್ಳವನಾಗಿದ್ದಾನೆ.
Kannada Translation - Hamza Buturಯಾರು ಅತಿರೇಕ ಮತ್ತು ಅನ್ಯಾಯದಿಂದ ಅದನ್ನು ಮಾಡುತ್ತಾನೋ—ಅವನನ್ನು ನಾವು ನರಕಾಗ್ನಿಯಲ್ಲಿ ಹಾಕಿ ಉರಿಸುವೆವು. ಅದು ಅಲ್ಲಾಹನಿಗೆ ಅತಿ ಸುಲಭವಾಗಿದೆ.
Kannada Translation - Hamza Buturನಿಮಗೆ ವಿರೋಧಿಸಲಾದ ಮಹಾಪಾಪಗಳಿಂದ ನೀವು ದೂರವಾದರೆ, ನಿಮ್ಮ ಸಣ್ಣ-ಪುಟ್ಟ ತಪ್ಪುಗಳನ್ನು ನಾವು ಅಳಿಸುತ್ತೇವೆ; ಮತ್ತು ಗೌರವಾನ್ವಿತ ಸ್ಥಾನಕ್ಕೆ ನಿಮ್ಮನ್ನು ಪ್ರವೇಶ ಮಾಡಿಸುತ್ತೇವೆ.
Kannada Translation - Hamza Buturಅಲ್ಲಾಹು ನಿಮ್ಮಲ್ಲಿ ಕೆಲವರಿಗೆ ಇತರರಿಗಿಂತ ಹೆಚ್ಚು ಔದಾರ್ಯ ತೋರಿದ್ದನ್ನು ನೀವು ಆಸೆಪಡಬೇಡಿ. ಪುರುಷರಿಗೆ ಅವರು ಸಂಪಾದಿಸಿದ ಪಾಲಿದೆ ಮತ್ತು ಮಹಿಳೆಯರಿಗೆ ಅವರು ಸಂಪಾದಿಸಿದ ಪಾಲಿದೆ. ಅಲ್ಲಾಹನ ಔದಾರ್ಯದಿಂದ ಅವನಲ್ಲಿ ಬೇಡಿಕೊಳ್ಳಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳನ್ನು ತಿಳಿದವನಾಗಿದ್ದಾನೆ.
Kannada Translation - Hamza Buturಮಾತಾಪಿತರು ಮತ್ತು ನಿಕಟ ಸಂಬಂಧಿಕರು ಬಿಟ್ಟು ಹೋದ ಆಸ್ತಿಯಲ್ಲಿ ನಾವು ಪ್ರತಿಯೊಬ್ಬರನ್ನೂ ಹಕ್ಕುದಾರರನ್ನಾಗಿ ಮಾಡಿದ್ದೇವೆ. ನಿಮ್ಮ ಬಲಗೈಗಳ ಮೂಲಕ ಕರಾರು ಮಾಡಿದವರಿಗೆ ಅವರ ಪಾಲನ್ನು ಕೊಟ್ಟುಬಿಡಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ.
Kannada Translation - Hamza Buturಪುರುಷರಿಗೆ ಮಹಿಳೆಯರ ಮೇಲೆ ಅಧಿಕಾರವಿದೆ. ಅದೇಕೆಂದರೆ, ಅಲ್ಲಾಹು ನಿಮ್ಮಲ್ಲಿ ಕೆಲವರನ್ನು ಇತರ ಕೆಲವರಿಗಿಂತ ಶ್ರೇಷ್ಠಗೊಳಿಸಿದ್ದಾನೆ ಮತ್ತು ಅವರು (ಪುರುಷರು) ತಮ್ಮ ಧನದಿಂದ ಖರ್ಚು ಮಾಡುತ್ತಾರೆ. ವಿಧೇಯತೆ ತೋರುವವರು ಮತ್ತು ಗಂಡಂದಿರ ಅನುಪಸ್ಥಿತಿಯಲ್ಲಿ ಅಲ್ಲಾಹು ಕಾಪಾಡಬೇಕೆಂದು ಹೇಳಿದ್ದನ್ನು ಕಾಪಾಡುವವರು ಯಾರೋ ಅವರೇ ನೀತಿವಂತ ಮಹಿಳೆಯರು. ಅವರು ವಿಧೇಯತೆ ತೋರುವುದಿಲ್ಲವೆಂದು ನಿಮಗೆ ಭಯವಾದರೆ, ಅವರಿಗೆ ಹಿತೋಪದೇಶ ಮಾಡಿ, ಹಾಸಿಗೆಯಿಂದ ದೂರವಿಡಿ ಮತ್ತು ಥಳಿಸಿ. ಅವರು ನಿಮ್ಮ ಮಾತನ್ನು ಕೇಳಿದರೆ, ಅವರ ವಿರುದ್ಧ ಬೇರೆ ಮಾರ್ಗವನ್ನು ಹುಡುಕಬೇಡಿ. ನಿಶ್ಚಯವಾಗಿಯೂ ಅಲ್ಲಾಹು ಅತ್ಯುನ್ನತನು ಮತ್ತು ಸರ್ವಶ್ರೇಷ್ಠನಾಗಿದ್ದಾನೆ.
Kannada Translation - Hamza Buturಅವರಿಬ್ಬರ (ಗಂಡ-ಹೆಂಡತಿಯ) ನಡುವೆ ಒಡಕು ಮೂಡಬಹುದೆಂದು ನೀವು ಭಯಪಟ್ಟರೆ, ಅವನ ಕಡೆಯಿಂದ ಒಬ್ಬ ತೀರ್ಪುಗಾರನನ್ನು ಮತ್ತು ಅವಳ ಕಡೆಯಿಂದ ಒಬ್ಬ ತೀರ್ಪುಗಾರನನ್ನು ಕಳುಹಿಸಿರಿ. ಅವರಿಬ್ಬರು ರಾಜಿ ಮಾಡಿಕೊಳ್ಳಲು ಬಯಸುವುದಾದರೆ ಅಲ್ಲಾಹು ಅವರ ನಡುವೆ ಹೊಂದಾಣಿಕೆ ಮಾಡುವನು. ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ತಿಳಿದವನು ಮತ್ತು ಸೂಕ್ಷ್ಮಜ್ಞಾನವುಳ್ಳವನಾಗಿದ್ದಾನೆ.
Kannada Translation - Hamza Buturನೀವು ಅಲ್ಲಾಹನನ್ನು ಆರಾಧಿಸಿರಿ ಮತ್ತು ಅವನೊಂದಿಗೆ ಏನನ್ನೂ ಸಹಭಾಗಿಯನ್ನಾಗಿ ಮಾಡಬೇಡಿ. ಮಾತಾಪಿತರಿಗೆ ಒಳಿತು ಮಾಡಿರಿ. ಸಂಬಂಧಿಕರು, ಅನಾಥರು, ಬಡವರು, ಕುಟುಂಬ ಸಂಬಂಧವಿರುವ ನೆರೆಹೊರೆಯವರು, ಇತರ ನೆರೆಹೊರೆಯವರು, ಸಂಗಡಿಗರು, ಪ್ರಯಾಣಿಕರು ಮತ್ತು ನಿಮ್ಮ ಅಧೀನದಲ್ಲಿರುವ ಗುಲಾಮರು ಮುಂತಾದವರೊಡನೆ ಉತ್ತಮವಾಗಿ ವರ್ತಿಸಿರಿ. ಅಹಂಕಾರ ಮತ್ತು ದರ್ಪವಿರುವ ಯಾರನ್ನೂ ಅಲ್ಲಾಹು ಇಷ್ಟಪಡುವುದಿಲ್ಲ.
Kannada Translation - Hamza Buturಜಿಪುಣರು, ಜನರನ್ನು ಜಿಪುಣರಾಗಲು ಪ್ರೋತ್ಸಾಹಿಸುವವರು ಮತ್ತು ಅಲ್ಲಾಹು ಉದಾರವಾಗಿ ನೀಡಿದ ಧನವನ್ನು ಬಚ್ಚಿಡುವವರು ಯಾರೋ—ಆ ಸತ್ಯನಿಷೇಧಿಗಳಿಗೆ ನಾವು ಅಪಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
Kannada Translation - Hamza Buturತೋರಿಕೆಗಾಗಿ ತಮ್ಮ ಹಣವನ್ನು ಖರ್ಚು ಮಾಡುವವರು ಮತ್ತು ಅಲ್ಲಾಹನಲ್ಲಿ ಅಥವಾ ಅಂತ್ಯದಿನದಲ್ಲಿ ವಿಶ್ವಾಸವಿಡದವರು. ಯಾರು ಶೈತಾನನನ್ನು ಸಂಗಡಿಗನಾಗಿ ಸ್ವೀಕರಿಸುತ್ತಾನೋ, ಆ ಸಂಗಡಿಗನು ಎಷ್ಟು ಕೆಟ್ಟವನು!
Kannada Translation - Hamza Buturಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಟ್ಟರೆ ಮತ್ತು ಅಲ್ಲಾಹು ನೀಡಿದ ಧನದಿಂದ ಖರ್ಚು ಮಾಡಿದರೆ ಅವರಿಗೇನು ತೊಂದರೆ? ಅಲ್ಲಾಹು ಅವರನ್ನು ಬಹಳ ಚೆನ್ನಾಗಿ ತಿಳಿದಿದ್ದಾನೆ.
Kannada Translation - Hamza Buturನಿಶ್ಚಯವಾಗಿಯೂ ಅಲ್ಲಾಹು ಒಂದು ಅಣುವಿನ ತೂಕದಷ್ಟು ಕೂಡ ಅನ್ಯಾಯ ಮಾಡುವುದಿಲ್ಲ. ಒಳಿತೇನಾದರೂ ಇದ್ದರೆ ಅವನು ಅದನ್ನು ದ್ವಿಗುಣಗೊಳಿಸಿ ತನ್ನ ಕಡೆಯ ಮಹಾ ಪ್ರತಿಫಲವನ್ನು ದಯಪಾಲಿಸುವನು.
Kannada Translation - Hamza Buturಅಂದು ಸತ್ಯನಿಷೇಧಿಗಳು ಮತ್ತು ಸಂದೇಶವಾಹಕರಿಗೆ ಅವಿಧೇಯತೆ ತೋರಿದವರು ಭೂಮಿಯನ್ನು ತಮ್ಮೊಂದಿಗೆ ಸಮತಟ್ಟು ಮಾಡಲಾದರೆ ಎಷ್ಟು ಚೆನ್ನಾಗಿತ್ತು ಎಂದು ಹಾರೈಸುವರು. ಅಲ್ಲಾಹನಿಂದ ಯಾವುದೇ ಸಂಗತಿಯನ್ನು ಮುಚ್ಚಿಡಲು ಅವರಿಗೆ ಸಾಧ್ಯವಿಲ್ಲ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ಪಾನಮತ್ತರಾದ ಸ್ಥಿತಿಯಲ್ಲಿ ನೀವು ನಮಾಝ್ ಮಾಡಲು ಬರಬೇಡಿ—ನೀವೇನು ಹೇಳುತ್ತಿದ್ದೀರಿ ಎಂದು ನಿಮಗೆ ಅರ್ಥವಾಗುವ ತನಕ. ದೊಡ್ಡ ಅಶುದ್ಧಿಯಿರುವಾಗಲೂ[1] ಬರಬೇಡಿ—ಸ್ನಾನ ಮಾಡಿ ಶುದ್ಧರಾಗುವ ತನಕ. ಆದರೆ (ಮಸೀದಿಯ ಮೂಲಕ) ಹಾದು ಹೋಗುವುದರಲ್ಲಿ ತೊಂದರೆಯಿಲ್ಲ. ನೀವು ಅನಾರೋಗ್ಯದಲ್ಲಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ; ಅಥವಾ ನಿಮ್ಮಲ್ಲೊಬ್ಬನು ಮಲಮೂತ್ರ ವಿಸರ್ಜನೆ ಮಾಡಿ ಬಂದಿದ್ದರೆ, ಅಥವಾ ಮಹಿಳೆಯರನ್ನು ಸ್ಪರ್ಶಿಸಿದ್ದರೆ (ಲೈಂಗಿಕ ಸಂಪರ್ಕ ಮಾಡಿದ್ದರೆ); ನಂತರ ನಿಮಗೆ ಶುದ್ಧಿಯಾಗಲು ನೀರು ದೊರೆಯದಿದ್ದರೆ, ಶುದ್ಧ ಮಣ್ಣಿನಿಂದ ತಯಮ್ಮುಮ್[2] ಮಾಡಿ ಮುಖ ಮತ್ತು ಕೈಗಳನ್ನು ಸವರಿರಿ. ನಿಶ್ಚಯವಾಗಿಯೂ ಅಲ್ಲಾಹು ಮನ್ನಿಸುವವನು ಮತ್ತು ಕ್ಷಮಿಸುವವನಾಗಿದ್ದಾನೆ.
Kannada Translation - Hamza Buturಗ್ರಂಥದಿಂದ ಒಂದು ಪಾಲು ನೀಡಲಾದವರನ್ನು ನೀವು ನೋಡಿಲ್ಲವೇ? ಅವರು ದುರ್ಮಾರ್ಗವನ್ನು ಖರೀದಿಸುತ್ತಾರೆ ಮತ್ತು ನೀವು ನೇರಮಾರ್ಗದಿಂದ ತಪ್ಪಿಹೋಗಬೇಕೆಂದು ಬಯಸುತ್ತಾರೆ.
Kannada Translation - Hamza Buturಯಹೂದಿಗಳಲ್ಲಿ ಕೆಲವರಿದ್ದಾರೆ. ಅವರು ವಚನಗಳನ್ನು ಅದರ ಸ್ಥಾನದಿಂದ ವಿರೂಪಗೊಳಿಸುತ್ತಾರೆ. ಅವರು ಹೇಳುತ್ತಾರೆ: “ನಾವು ಕಿವಿಗೊಡುತ್ತೇವೆ ಮತ್ತು ಅವಿಧೇಯತೆ ತೋರುತ್ತೇವೆ.” “ಕೇಳು, ಆದರೆ ನಿನ್ನ ಮಾತು ಕೇಳದಂತಾಗಲಿ.” “ನಮ್ಮ ಕಡೆಗೆ ಗಮನಕೊಡು.” (ಹೀಗೆ ಹೇಳುವಾಗ) ಅವರು ತಮ್ಮ ನಾಲಗೆಗಳನ್ನು ತಿರುಚುತ್ತಾರೆ ಮತ್ತು ಧರ್ಮಕ್ಕೆ ಕಳಂಕ ಹಚ್ಚುತ್ತಾರೆ.[1] ನಾವು ಕಿವಿಗೊಡುತ್ತೇವೆ ಮತ್ತು ವಿಧೇಯತೆ ತೋರುತ್ತೇವೆ; ಕೇಳಿರಿ; ಮತ್ತು ನಮ್ಮನ್ನು ನೋಡಿರಿ ಎಂದು ಅವರು ಹೇಳುತ್ತಿದ್ದರೆ ಅವರಿಗೆ ಅದು ಅತ್ಯುತ್ತಮ ಮತ್ತು ನೇರವಾಗಿರುತ್ತಿತ್ತು. ಆದರೆ ಅವರ ಸತ್ಯನಿಷೇಧದಿಂದಾಗಿ ಅಲ್ಲಾಹು ಅವರನ್ನು ಶಪಿಸಿದ್ದಾನೆ. ಆದ್ದರಿಂದ ಅವರು ಸ್ವಲ್ಪ ಮಾತ್ರ ವಿಶ್ವಾಸವಿಡುತ್ತಾರೆ.
Kannada Translation - Hamza Buturಓ ಗ್ರಂಥ ನೀಡಲಾದವರೇ! ನಾವು ಮುಖಗಳನ್ನು ಅಳಿಸಿ ಅವುಗಳನ್ನು ಹಿಂಭಾಗಕ್ಕೆ ತಿರುಗಿಸುವುದಕ್ಕೆ ಮೊದಲು; ಅಥವಾ ಸಬ್ಬತ್ನ ಜನರನ್ನು ಶಪಿಸಿದಂತೆ ನಿಮ್ಮನ್ನೂ ಶಪಿಸುವುದಕ್ಕೆ ಮೊದಲು, ನಿಮ್ಮ ಬಳಿಯಿರುವ ಗ್ರಂಥವನ್ನು ದೃಢೀಕರಿಸುತ್ತಾ ನಾವು ಅವತೀರ್ಣಗೊಳಿಸಿದ ಸಂದೇಶದಲ್ಲಿ ವಿಶ್ವಾಸವಿಡಿ. ಅಲ್ಲಾಹನ ಆಜ್ಞೆಯು ನೆರವೇರಿಯೇ ತೀರುತ್ತದೆ.
Kannada Translation - Hamza Buturತನ್ನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಲಾಗುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತಾದ ಪಾಪಗಳನ್ನು ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ. ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುವವನು ನಿಶ್ಚಯವಾಗಿಯೂ ಗಂಭೀರ ಪಾಪವನ್ನೆಸಗಿದನು.
Kannada Translation - Hamza Buturತಮ್ಮನ್ನು ತಾವೇ ಪರಿಶುದ್ಧರೆಂದು ಹೇಳುವವರನ್ನು ನೀವು ನೋಡಿಲ್ಲವೇ? ಅಲ್ಲ; ವಾಸ್ತವವಾಗಿ ಅಲ್ಲಾಹು ಅವನು ಇಚ್ಛಿಸುವವರನ್ನು ಪರಿಶುದ್ಧಗೊಳಿಸುತ್ತಾನೆ. (ಖರ್ಜೂರದ ಬೀಜದಲ್ಲಿರುವ) ನೂಲಿನಷ್ಟೂ ಕೂಡ ಯಾರಿಗೂ ಅನ್ಯಾಯವಾಗುವುದಿಲ್ಲ.
Kannada Translation - Hamza Buturಗ್ರಂಥದಿಂದ ಒಂದು ಪಾಲು ನೀಡಲಾದವರನ್ನು ನೀವು ನೋಡಿಲ್ಲವೇ? ಅವರು ವಿಗ್ರಹಗಳು ಮತ್ತು ಮಿಥ್ಯ ದೇವರುಗಳಲ್ಲಿ ವಿಶ್ವಾಸವಿಡುತ್ತಾರೆ ಮತ್ತು ಸತ್ಯನಿಷೇಧಿಗಳೊಡನೆ, “ಸತ್ಯವಿಶ್ವಾಸಿಗಳಿಗಿಂತಲೂ ಇವರೇ ಹೆಚ್ಚು ಸನ್ಮಾರ್ಗದಲ್ಲಿದ್ದಾರೆ” ಎಂದು ಹೇಳುತ್ತಾರೆ.
Kannada Translation - Hamza Buturಜನರಿಗೆ ಅಲ್ಲಾಹು ತನ್ನ ಔದಾರ್ಯದಿಂದ ನೀಡಿದ್ದನ್ನು ಕಂಡು ಅವರಿಗೆ ಹೊಟ್ಟೆ ಉರಿಯುತ್ತಿದೆಯೇ? ಹಾಗಾದರೆ, ನಾವು ಇಬ್ರಾಹೀಮರ ಕುಟುಂಬಕ್ಕೆ ಗ್ರಂಥ ಮತ್ತು ವಿವೇಕವನ್ನು ನೀಡಿದ್ದೇವೆ. ಅವರಿಗೆ ನಾವು ಮಹಾ ಸಾಮ್ರಾಜ್ಯವನ್ನು ಕೂಡ ನೀಡಿದ್ದೇವೆ.
Kannada Translation - Hamza Buturಅವರಲ್ಲಿ ಕೆಲವರು ಅದರಲ್ಲಿ (ಗ್ರಂಥದಲ್ಲಿ) ವಿಶ್ವಾಸವಿಡುತ್ತಾರೆ ಮತ್ತು ಅವರಲ್ಲಿ ಕೆಲವರು ಅದನ್ನು ದ್ವೇಷಿಸುತ್ತಾರೆ. ಅವರಿಗೆ ಧಗಧಗಿಸುವ ನರಕಾಗ್ನಿಯೇ ಸಾಕು.
Kannada Translation - Hamza Buturನಿಶ್ಚಯವಾಗಿಯೂ ನಮ್ಮ ವಚನಗಳನ್ನು ನಿಷೇಧಿಸಿದವರು ಯಾರೋ—ಅವರನ್ನು ನಾವು ನರಕಾಗ್ನಿಯಲ್ಲಿ ಹಾಕಿ ಉರಿಸುವೆವು. ಅವರ ಚರ್ಮಗಳು ಬೆಂದು ಕರಟುವಾಗಲೆಲ್ಲಾ, ಅವರು ಶಿಕ್ಷೆಯನ್ನು ಅನುಭವಿಸುತ್ತಲೇ ಇರಲು, ನಾವು ಅವರಿಗೆ ಬೇರೆ ಚರ್ಮಗಳನ್ನು ಬದಲಿಯಾಗಿ ನೀಡುವೆವು. ನಿಶ್ಚಯವಾಗಿಯೂ ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರನ್ನು ನಾವು ಸದ್ಯವೇ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವೆವು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಿ ಅವರಿಗೆ ಪರಿಶುದ್ಧ ಸಂಗಾತಿಗಳಿರುವರು. ನಾವು ಅವರನ್ನು ಶಾಶ್ವತ ನೆರಳಿಗೆ ಪ್ರವೇಶ ಮಾಡಿಸುವೆವು.
Kannada Translation - Hamza Buturನಂಬಿಕೆಯಿಂದ ನೀಡಲಾದ ವಸ್ತುಗಳನ್ನು ಅವುಗಳ ಹಕ್ಕುದಾರರಿಗೆ ಕೊಟ್ಟುಬಿಡಲು ಮತ್ತು ಜನರ ನಡುವೆ ತೀರ್ಪು ನೀಡುವಾಗ ನ್ಯಾಯವಾಗಿಯೇ ತೀರ್ಪು ನೀಡಲು ಅಲ್ಲಾಹು ನಿಮಗೆ ಆಜ್ಞಾಪಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ನಿಮಗೆ ನೀಡುವ ಉಪದೇಶವು ಬಹಳ ಉತ್ತಮವಾಗಿದೆ! ನಿಶ್ಚಯವಾಗಿಯೂ ಅಲ್ಲಾಹು ಎಲ್ಲವನ್ನೂ ಕೇಳುವವನು ಮತ್ತು ನೋಡುವವನಾಗಿದ್ದಾನೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನನ್ನು ಅನುಸರಿಸಿರಿ ಮತ್ತು ಸಂದೇಶವಾಹಕರನ್ನು ಅನುಸರಿಸಿರಿ. ನಿಮ್ಮ ಮೇಲೆ ಅಧಿಕಾರವಿರುವವರನ್ನೂ ಅನುಸರಿಸಿರಿ. ನಿಮ್ಮ ಮಧ್ಯೆ ಯಾವುದೇ ವಿಷಯದಲ್ಲಿ ಭಿನ್ನಮತವುಂಟಾದರೆ ಅದನ್ನು ಅಲ್ಲಾಹನಿಗೆ ಮತ್ತು ಸಂದೇಶವಾಹಕರಿಗೆ ಮರಳಿಸಿರಿ—ನೀವು ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿಡುವವರಾಗಿದ್ದರೆ. ಅದು ಅತ್ಯುತ್ತಮ ಮಾರ್ಗವಾಗಿದ್ದು ಅತ್ಯುತ್ತಮ ಪರಿಣಾಮವನ್ನು ಹೊಂದಿದೆ.
Kannada Translation - Hamza Buturನಿಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಿಮಗಿಂತ ಮುಂಚೆ ಅವತೀರ್ಣವಾದ ಗ್ರಂಥಗಳಲ್ಲಿ ನಾವು ವಿಶ್ವಾಸವಿಟ್ಟಿದ್ದೇವೆ ಎಂದು ವಾದಿಸುವವರನ್ನು ನೀವು ನೋಡಿಲ್ಲವೇ? ಅವರು ತೀರ್ಪಿಗಾಗಿ ಮಿಥ್ಯ ದೇವರುಗಳ ಬಳಿಗೆ ಹೋಗಲು ಬಯಸುತ್ತಾರೆ. ವಾಸ್ತವವಾಗಿ, ಮಿಥ್ಯ ದೇವರುಗಳನ್ನು ನಿಷೇಧಿಸಬೇಕೆಂದು ಅವರಿಗೆ ಆಜ್ಞಾಪಿಸಲಾಗಿತ್ತು. ಶೈತಾನನು ಅವರನ್ನು ವಿದೂರ ದುರ್ಮಾರ್ಗದಲ್ಲಿ ಬಿಟ್ಟುಬಿಡಲು ಬಯಸುತ್ತಾನೆ.
Kannada Translation - Hamza Butur“ಅಲ್ಲಾಹು ಅವತೀರ್ಣಗೊಳಿಸಿದ ಗ್ರಂಥಕ್ಕೆ ಮತ್ತು ಅವನ ಸಂದೇಶವಾಹಕರ ಕಡೆಗೆ ಬನ್ನಿರಿ” ಎಂದು ಅವರೊಡನೆ ಹೇಳಲಾದರೆ, ಆ ಕಪಟವಿಶ್ವಾಸಿಗಳು ದ್ವೇಷದಿಂದ ನಿಮ್ಮನ್ನು ಅವಗಣಿಸಿ ನಡೆಯುವುದನ್ನು ನೀವು ಕಾಣುವಿರಿ.
Kannada Translation - Hamza Buturಅವರ ಕೈಗಳು ಈಗಾಗಲೇ ಮಾಡಿಟ್ಟ ದುಷ್ಕರ್ಮಗಳ ಕಾರಣದಿಂದ ಅವರಿಗೇನಾದರೂ ಅನಾಹುತ ಸಂಭವಿಸಿದರೆ, ನಂತರ ಅವರು ತಮ್ಮ ಬಳಿಗೆ ಬಂದು ಅಲ್ಲಾಹನ ಮೇಲೆ ಆಣೆ ಮಾಡುತ್ತಾ, “ನಾವು ಒಳಿತು ಮತ್ತು ಹೊಂದಾಣಿಕೆಯನ್ನು ಮಾತ್ರ ಬಯಸಿದ್ದೆವು” ಎಂದು ಹೇಳುವಾಗ ಅವರ ಸ್ಥಿತಿ ಹೇಗಿರಬಹುದು?
Kannada Translation - Hamza Buturಅವರ ಹೃದಯಗಳಲ್ಲಿ ಏನಿದೆಯೆಂದು ಅಲ್ಲಾಹು ತಿಳಿದಿದ್ದಾನೆ. ಆದ್ದರಿಂದ ಅವರನ್ನು ಬಿಟ್ಟು ದೂರ ಸರಿಯಿರಿ; ಅವರಿಗೆ ಉಪದೇಶ ಮಾಡಿರಿ ಮತ್ತು ಅವರಿಗೆ ಹೃದಯಸ್ಪರ್ಶಿ ಮಾತನ್ನು ಹೇಳಿರಿ.
Kannada Translation - Hamza Buturಅಲ್ಲಾಹನ ಅಪ್ಪಣೆಯಿಂದ ಅನುಸರಿಸುವುದಕ್ಕಾಗಿಯೇ ಹೊರತು ನಾವು ಯಾವುದೇ ಸಂದೇಶವಾಹಕರನ್ನು ಕಳುಹಿಸಿಲ್ಲ. ಅವರು ಸ್ವಯಂ ಅವರ ಮೇಲೆಯೇ ಅಕ್ರಮವೆಸಗಿ, ನಂತರ ನಿಮ್ಮ ಬಳಿಗೆ ಬಂದು ಅಲ್ಲಾಹನಲ್ಲಿ ಕ್ಷಮೆಯಾಚಿಸಿದರೆ, ಮತ್ತು ಅವರ ಪರವಾಗಿ ಸಂದೇಶವಾಹಕರು ಕೂಡ ಕ್ಷಮೆಯಾಚಿಸಿದರೆ, ಅವರು ಅಲ್ಲಾಹನನ್ನು ಪಶ್ಚಾತ್ತಾಪ ಸ್ವೀಕರಿಸುವವನಾಗಿ ಮತ್ತು ದಯೆ ತೋರುವವನಾಗಿ ಕಾಣುವರು.
Kannada Translation - Hamza Buturಇಲ್ಲ, ನಿಮ್ಮ ಪರಿಪಾಲಕನ (ಅಲ್ಲಾಹನ) ಮೇಲಾಣೆ! ಅವರು ತಮ್ಮ ನಡುವಿನ ಭಿನ್ನಮತಗಳಿಗೆ ನಿಮ್ಮನ್ನು ತೀರ್ಪುಗಾರನನ್ನಾಗಿ ಮಾಡಿ, ನಂತರ ನೀವು ನೀಡುವ ತೀರ್ಪನ್ನು ಯಾವುದೇ ಜಂಜಾಟವಿಲ್ಲದೆ ಸ್ವೀಕರಿಸಿ ಸಂಪೂರ್ಣ ವಿಧೇಯರಾಗುವ ತನಕ ಅವರು ಸತ್ಯವಿಶ್ವಾಸಿಗಳಾಗುವುದಿಲ್ಲ.
Kannada Translation - Hamza Butur“ನೀವು ನಿಮ್ಮನ್ನೇ ಕೊಲ್ಲಿರಿ” ಅಥವಾ “ನೀವು ನಿಮ್ಮ ಮನೆಗಳನ್ನು ಬಿಟ್ಟು ಹೊರಡಿರಿ” ಎಂಬ ಆಜ್ಞೆಯನ್ನು ನಾವು ಅವರಿಗೆ ಕಡ್ಡಾಯಗೊಳಿಸುತ್ತಿದ್ದರೆ, ಅವರಲ್ಲಿ ಕೆಲವರ ಹೊರತು ಯಾರೂ ಅದನ್ನು ಮಾಡುತ್ತಿರಲಿಲ್ಲ. ಅವರಿಗೆ ನೀಡಲಾಗುವ ಉಪದೇಶದಂತೆ ಅವರು ನಡೆಯುತ್ತಿದ್ದರೆ, ಅದು ಅವರಿಗೆ ಶ್ರೇಷ್ಠವಾಗಿರುತ್ತಿತ್ತು ಮತ್ತು ಅವರಿಗೆ ಪ್ರಬಲ ದೃಢತೆಯಾಗಿ ಮಾರ್ಪಡುತ್ತಿತ್ತು.
Kannada Translation - Hamza Buturಯಾರು ಅಲ್ಲಾಹನನ್ನು ಮತ್ತು ಸಂದೇಶವಾಹಕರನ್ನು ಅನುಸರಿಸುತ್ತಾನೋ—ಅವರು ಅಲ್ಲಾಹು ಅನುಗ್ರಹಿಸಿದ ಪ್ರವಾದಿಗಳು, ಸತ್ಯವಂತರು, ಹುತಾತ್ಮರು ಮತ್ತು ನೀತಿವಂತರೊಡನೆ ಸೇರುವರು. ಅವರು ಬಹಳ ಉತ್ತಮ ಸಂಗಡಿಗರು!
Kannada Translation - Hamza Buturನಿಶ್ಚಯವಾಗಿಯೂ ನಿಮ್ಮಲ್ಲಿ ಹಿಂದೆ ಬೀಳುವ ಕೆಲವರಿದ್ದಾರೆ. ನಿಮಗೇನಾದರೂ ಅನಾಹುತ ಸಂಭವಿಸಿದರೆ, “ನಾನು ಅವರೊಂದಿಗೆ ಯುದ್ಧಕ್ಕೆ ಹೋಗದಂತೆ ಮಾಡುವ ಮೂಲಕ ಅಲ್ಲಾಹು ನನ್ನನ್ನು ಅನುಗ್ರಹಿಸಿದ್ದಾನೆ” ಎಂದು ಅವರು ಹೇಳುತ್ತಾರೆ.
Kannada Translation - Hamza Buturನಿಮಗೆ ಅಲ್ಲಾಹನ ಕಡೆಯಿಂದ ಏನಾದರೂ ಔದಾರ್ಯ ದೊರೆತರೆ, ನಿಮ್ಮ ಮತ್ತು ಅವರ ನಡುವೆ ಯಾವುದೇ ಅನ್ಯೋನ್ಯತೆಯಿಲ್ಲದ ಶೈಲಿಯಲ್ಲಿ, “ಅಯ್ಯೋ! ನಾನು ಅವರ ಜೊತೆಗೆ ತೆರಳುತ್ತಿದ್ದರೆ ಎಷ್ಟು ಚೆನ್ನಾಗಿತ್ತು! ನನಗೂ ಮಹಾ ಗೆಲುವನ್ನು ಸಂಪಾದಿಸಬಹುದಿತ್ತು” ಎನ್ನುತ್ತಾರೆ.
Kannada Translation - Hamza Buturಪರಲೋಕಕ್ಕಾಗಿ ಇಹಲೋಕವನ್ನು ತ್ಯಾಗ ಮಾಡಲು ಸಿದ್ಧರಾಗಿರುವವರು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಲಿ. ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿ ಕೊಲೆಯಾಗುವವರು ಅಥವಾ ಜಯಶಾಲಿಯಾಗುವವರು ಯಾರೋ—ಅವರಿಗೆ ನಾವು ಮಹಾ ಪ್ರತಿಫಲವನ್ನು ನೀಡುತ್ತೇವೆ.
Kannada Translation - Hamza Buturನಿಮಗೇನಾಗಿದೆ? ದಬ್ಬಾಳಿಕೆಯಿಂದ ನರಳುತ್ತಿರುವ ಪುರುಷರು, ಮಹಿಳೆಯರು ಮತ್ತು ಮಕ್ಕಳಿಗಾಗಿ ನೀವೇಕೆ ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವುದಿಲ್ಲ? “ಓ ನಮ್ಮ ಪರಿಪಾಲಕನೇ! ದಬ್ಬಾಳಿಕೆ ನಡೆಸುವ ಜನರು ವಾಸಿಸುತ್ತಿರುವ ಈ ಊರಿನಿಂದ ನಮ್ಮನ್ನು ವಿಮೋಚನೆಗೊಳಿಸು; ನಮಗೆ ನಿನ್ನ ಕಡೆಯ ಒಬ್ಬ ರಕ್ಷಕನನ್ನು ಮತ್ತು ನಿನ್ನ ಕಡೆಯ ಒಬ್ಬ ಸಹಾಯಕನನ್ನು ನಿಯೋಗಿಸು” ಎಂದು ಅವರು ಪ್ರಾರ್ಥಿಸುತ್ತಿದ್ದಾರೆ.
Kannada Translation - Hamza Buturಸತ್ಯವಿಶ್ವಾಸಿಗಳು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಸತ್ಯನಿಷೇಧಿಗಳು ಮಿಥ್ಯ ದೇವರುಗಳ ಮಾರ್ಗದಲ್ಲಿ ಯುದ್ಧ ಮಾಡುತ್ತಾರೆ. ಆದ್ದರಿಂದ ಶೈತಾನನ ಮಿತ್ರರ ವಿರುದ್ಧ ಯುದ್ಧ ಮಾಡಿರಿ. ನಿಶ್ಚಯವಾಗಿಯೂ ಶೈತಾನನ ತಂತ್ರವು ಬಲಹೀನವಾಗಿದೆ.
Kannada Translation - Hamza Butur“ನಿಮ್ಮ ಕೈಗಳನ್ನು ತಡೆಹಿಡಿಯಿರಿ, ನಮಾಝ್ ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ” ಎಂದು ಆದೇಶಿಸಲಾದ ಜನರನ್ನು ನೀವು ನೋಡಿಲ್ಲವೇ? ಅವರಿಗೆ ಯುದ್ಧವನ್ನು ಕಡ್ಡಾಯಗೊಳಿಸಲಾದಾಗ ಅವರಲ್ಲೊಂದು ಗುಂಪು ಅಲ್ಲಾಹನನ್ನು ಭಯಪಡುವಂತೆ ಅಥವಾ ಅದಕ್ಕಿಂತಲೂ ತೀವ್ರವಾಗಿ ಜನರನ್ನು ಭಯಪಡುತ್ತಾರೆ! ಅವರು ಕೇಳುತ್ತಾರೆ: “ಓ ನಮ್ಮ ಪರಿಪಾಲಕನೇ! ನಮಗೆ ಯುದ್ಧವನ್ನು (ಈಗಲೇ) ಏಕೆ ಕಡ್ಡಾಯಗೊಳಿಸಿದೆ? ಹತ್ತಿರದ ಒಂದು ಅವಧಿಯ ತನಕ ನಮಗೆ ಕಾಲಾವಕಾಶ ನೀಡಬಹುದಿತ್ತಲ್ಲವೇ?” ಹೇಳಿರಿ: “ಇಹಲೋಕದ ಆನಂದವು ಅತ್ಯಲ್ಪವಾಗಿದೆ. ದೇವಭಯವುಳ್ಳವರಿಗೆ ಪರಲೋಕವು ಅತ್ಯುತ್ತಮವಾಗಿದೆ. ನಿಮಗೆ (ಖರ್ಜೂರದ ಬೀಜದಲ್ಲಿರುವ) ನೂಲಿನಷ್ಟೂ ಅನ್ಯಾಯವಾಗುವುದಿಲ್ಲ.”
Kannada Translation - Hamza Buturನೀವೆಲ್ಲೇ ಇದ್ದರೂ ಸಾವು ನಿಮ್ಮನ್ನು ಬೆನ್ನಟ್ಟುತ್ತದೆ. ನೀವು ಸುಭದ್ರ ಕೋಟೆಯೊಳಗಿದ್ದರೂ ಸಹ. ಅವರಿಗೆ ಒಳಿತುಂಟಾದರೆ, “ಇದು ಅಲ್ಲಾಹನಿಂದ” ಎಂದು ಅವರು ಹೇಳುತ್ತಾರೆ. ಆದರೆ ಅವರಿಗೆ ಕೆಡುಕುಂಟಾದರೆ, “ಇದು ನಿಮ್ಮಿಂದ” ಎನ್ನುತ್ತಾರೆ. ಹೇಳಿರಿ: “ಎಲ್ಲವೂ ಅಲ್ಲಾಹನಿಂದಲೇ ಆಗಿದೆ.” ಈ ಜನರಿಗೇನಾಗಿದೆ? ಇವರೇಕೆ ಮಾತನ್ನು ಅರ್ಥಮಾಡಿಕೊಳ್ಳುವುದಿಲ್ಲ?
Kannada Translation - Hamza Buturನಿಮಗೇನಾದರೂ ಒಳಿತುಂಟಾದರೆ ಅದು ಅಲ್ಲಾಹನಿಂದ. ನಿಮಗೆ ಕೆಡುಕು ಬಾಧಿಸಿದರೆ, ಅದು ನಿಮ್ಮಿಂದಲೇ ಆಗಿದೆ. ನಾವು ನಿಮ್ಮನ್ನು ಮನುಷ್ಯರಿಗೆ ಸಂದೇಶವಾಹಕನನ್ನಾಗಿ ಮಾಡಿ ಕಳುಹಿಸಿದ್ದೇವೆ. ಸಾಕ್ಷಿಯಾಗಿ ಅಲ್ಲಾಹು ಸಾಕು.
Kannada Translation - Hamza Buturಯಾರು ಸಂದೇಶವಾಹಕರನ್ನು ಅನುಸರಿಸುತ್ತಾನೋ ಅವನು ಅಲ್ಲಾಹನನ್ನು ಅನುಸರಿಸಿದನು. ಯಾರು ವಿಮುಖರಾಗುತ್ತಾರೋ ಅವರ ಮೇಲೆ ಕಾವಲುಗಾರನಾಗಿ ನಾವು ನಿಮ್ಮನ್ನು ಕಳುಹಿಸಿಲ್ಲ.
Kannada Translation - Hamza Buturಅವರು ಹೇಳುತ್ತಾರೆ: “ನಾವು ಅನುಸರಿಸಿದ್ದೇವೆ.” ನಂತರ ಅವರು ನಿಮ್ಮ ಬಳಿಯಿಂದ ಹೊರಟರೆ, ಅವರಲ್ಲೊಂದು ಗುಂಪು ನೀವು ಹೇಳಿದ್ದಕ್ಕೆ ವಿರುದ್ಧವಾಗಿ ರಾತ್ರಿಯಲ್ಲಿ ಗೂಢ ಮಾತುಕತೆ ನಡೆಸುತ್ತಾರೆ. ಅವರು ಮಾಡುವ ಗೂಢಾಲೋಚನೆಯನ್ನು ಅಲ್ಲಾಹು ದಾಖಲಿಸುತ್ತಿದ್ದಾನೆ. ಆದ್ದರಿಂದ ನೀವು ಅವರಿಂದ ವಿಮುಖರಾಗಿರಿ ಮತ್ತು ಅಲ್ಲಾಹನಲ್ಲಿ ಭರವಸೆಯಿಡಿರಿ. ಭರವಸೆಯಿಡಲು ನಿಮಗೆ ಅಲ್ಲಾಹು ಸಾಕು.
Kannada Translation - Hamza Buturಅವರು ಕುರ್ಆನನ್ನು ಮನನ ಮಾಡುವುದಿಲ್ಲವೇ? ಅದು ಅಲ್ಲಾಹು ಅಲ್ಲದವರ ಕಡೆಯಿಂದ (ಅವತೀರ್ಣವಾಗಿರುತ್ತಿದ್ದರೆ) ಅವರು ಅದರಲ್ಲಿ ಅನೇಕ ವಿರೋಧಾಭಾಸಗಳನ್ನು ಕಾಣುತ್ತಿದ್ದರು.
Kannada Translation - Hamza Buturಅವರಿಗೆ ಶಾಂತಿ ಅಥವಾ ಭೀತಿಯ ಸುದ್ದಿಗಳು ತಲುಪಿದೊಡನೆ ಅವರು ಅದನ್ನು ಪ್ರಚಾರ ಮಾಡುತ್ತಾರೆ. ಅವರು ಅದನ್ನು ಸಂದೇಶವಾಹಕರಿಗೆ ಮತ್ತು ಅವರಲ್ಲಿ ವಿಷಯಗಳನ್ನು ಆಳವಾಗಿ ವಿಶ್ಲೇಷಿಸುವ ವಿದ್ವಾಂಸರಿಗೆ ಬಿಟ್ಟು ಬಿಡುತ್ತಿದ್ದರೆ, ಅವರು ಅದರ ಸತ್ಯಾಸತ್ಯತೆಗಳನ್ನು ತಿಳಿಯುತ್ತಿದ್ದರು. ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ ನಿಮ್ಮಲ್ಲಿ ಕೆಲವರ ಹೊರತು ಎಲ್ಲರೂ ಶೈತಾನನನ್ನು ಹಿಂಬಾಲಿಸುತ್ತಿದ್ದರು.
Kannada Translation - Hamza Buturಆದ್ದರಿಂದ ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡಿರಿ. ನಿಮಗೆ ನಿಮ್ಮ ವಿಷಯದ ಹೊಣೆಯನ್ನು ಮಾತ್ರ ಹೊರಿಸಲಾಗಿದೆ. ಸತ್ಯವಿಶ್ವಾಸಿಗಳನ್ನು ಹುರಿದುಂಬಿಸಿರಿ. ಅಲ್ಲಾಹು ಸತ್ಯನಿಷೇಧಿಗಳ ದಾಳಿಯನ್ನು ತಡೆಗಟ್ಟುವನು. ಅಲ್ಲಾಹು ಮಹಾ ಶಕ್ತಿಶಾಲಿ ಮತ್ತು ಅತಿಕಠಿಣವಾಗಿ ಶಿಕ್ಷಿಸುವವನಾಗಿದ್ದಾನೆ.
Kannada Translation - Hamza Buturಯಾರು ಒಳಿತಿನ ಕಾರ್ಯದಲ್ಲಿ ಶಿಫಾರಸು ಮಾಡುತ್ತಾನೋ, ಅದರ ಒಂದು ಪಾಲು ಅವನಿಗೂ ಇದೆ. ಯಾರು ಕೆಡುಕಿನ ಕಾರ್ಯದಲ್ಲಿ ಶಿಫಾರಸು ಮಾಡುತ್ತಾನೋ, ಅದರ ಒಂದು ಪಾಲು ಅವನಿಗೂ ಇದೆ. ಅಲ್ಲಾಹು ಎಲ್ಲ ವಿಷಯಗಳಲ್ಲೂ ಮೇಲ್ವಿಚಾರಕನಾಗಿದ್ದಾನೆ.
Kannada Translation - Hamza Buturನಿಮಗೆ ಅಭಿವಂದನೆ (ಸಲಾಂ) ಸಲ್ಲಿಸಲಾದರೆ ಅದಕ್ಕಿಂತಲೂ ಉತ್ತಮವಾಗಿ ಅಭಿವಂದನೆ ಸಲ್ಲಿಸಿರಿ. ಅಥವಾ ಕನಿಷ್ಠ ಅದನ್ನು ಮರಳಿಸಿರಿ.[1] ನಿಶ್ಚಯವಾಗಿಯೂ ಅಲ್ಲಾಹು ಪ್ರತಿಯೊಂದು ವಿಷಯವನ್ನೂ ವಿಚಾರಣೆ ಮಾಡುತ್ತಾನೆ.
Kannada Translation - Hamza Buturಅಲ್ಲಾಹು! ಅವನ ಹೊರತು ಆರಾಧನೆಗೆ ಅರ್ಹರಾದ ಅನ್ಯ ದೇವರಿಲ್ಲ. ನಿಶ್ಚಯವಾಗಿಯೂ ಅವನು ನಿಮ್ಮೆಲ್ಲರನ್ನೂ ಪುನರುತ್ಥಾನ ದಿನಕ್ಕೆ ಒಟ್ಟುಗೂಡಿಸುವನು. ಅದರಲ್ಲಿ ಸಂದೇಹವೇ ಇಲ್ಲ. ಮಾತಿನಲ್ಲಿ ಅಲ್ಲಾಹನಿಗಿಂತಲೂ ಹೆಚ್ಚು ಸತ್ಯವಂತನು ಯಾರು?
Kannada Translation - Hamza Buturನಿಮಗೇನಾಗಿದೆ? ಕಪಟವಿಶ್ವಾಸಿಗಳ ವಿಷಯದಲ್ಲಿ ನೀವೇಕೆ ಎರಡು ಗುಂಪುಗಳಾಗಿದ್ದೀರಿ? ಅವರು ಮಾಡಿದ (ದುಷ್ಕರ್ಮಗಳ) ಕಾರಣದಿಂದ ಅಲ್ಲಾಹು ಅವರನ್ನು ಹಿಂದಕ್ಕೆ ತಿರುಗಿಸಿದ್ದಾನೆ. ಅಲ್ಲಾಹು ದಾರಿತಪ್ಪಿಸಿದ ಜನರಿಗೆ ನೀವು ಸನ್ಮಾರ್ಗ ತೋರಿಸಲು ಬಯಸುತ್ತೀರಾ? ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಯಾವುದೇ ದಾರಿಯನ್ನು ನೀವು ಕಾಣಲಾರಿರಿ.
Kannada Translation - Hamza Buturಅವರು ಸತ್ಯನಿಷೇಧಿಗಳಾದಂತೆ ನೀವೂ ಸತ್ಯನಿಷೇಧಿಗಳಾಗಬೇಕು ಮತ್ತು ನೀವೆಲ್ಲರೂ ಸಮಾನರಾಗಬೇಕು ಎಂದು ಅವರು ಬಯಸುತ್ತಾರೆ. ಆದ್ದರಿಂದ ಅವರು ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡುವ ತನಕ ಅವರಲ್ಲಿ ಯಾರನ್ನೂ ನೀವು ಮಿತ್ರರನ್ನಾಗಿ ಸ್ವೀಕರಿಸಬೇಡಿ. ಅವರು ವಿಮುಖರಾದರೆ, ಅವರನ್ನು ಹಿಡಿಯಿರಿ ಮತ್ತು ಕಂಡಲ್ಲಿ ಕೊಲ್ಲಿರಿ. ಅವರಲ್ಲಿ ಯಾರನ್ನೂ ನೀವು ಮಿತ್ರರನ್ನಾಗಿ ಅಥವಾ ಸಹಾಯಕರನ್ನಾಗಿ ಸ್ವೀಕರಿಸಬೇಡಿ.
Kannada Translation - Hamza Buturಆದರೆ ನಿಮ್ಮೊಂದಿಗೆ ಒಪ್ಪಂದ ಮಾಡಿಕೊಂಡಿರುವ ಜನರ ಬಳಿಗೆ ಹೋಗಿ ಆಶ್ರಯ ಪಡೆದವರ ಹೊರತು; ಅಥವಾ, ನಿಮ್ಮ ವಿರುದ್ಧ ಯುದ್ಧ ಮಾಡಲು ಅಥವಾ ತಮ್ಮದೇ ಜನರ ವಿರುದ್ಧ ಯುದ್ಧ ಮಾಡಲು ಹೃದಯದಲ್ಲಿ ಇಕ್ಕಟ್ಟು ಅನುಭವಿಸುತ್ತಾ ನಿಮ್ಮ ಬಳಿಗೆ ಬಂದವರ ಹೊರತು. ಅಲ್ಲಾಹು ಇಚ್ಛಿಸುತ್ತಿದ್ದರೆ ಅವನು ಅವರಿಗೆ ನಿಮ್ಮ ಮೇಲೆ ಅಧಿಕಾರ ನೀಡುತ್ತಿದ್ದನು. ಆಗ ಅವರು ನಿಮ್ಮ ವಿರುದ್ಧ ಯುದ್ಧ ಮಾಡುತ್ತಿದ್ದರು. ಆದರೆ ಅವರು ಯುದ್ಧದಿಂದ ದೂರ ಸರಿದು, ನಿಮ್ಮ ವಿರುದ್ಧ ಯುದ್ಧ ಮಾಡದಿದ್ದರೆ ಮತ್ತು ಶಾಂತಿ ಪ್ರಸ್ತಾಪವನ್ನು ಮುಂದಿಟ್ಟರೆ, ಅವರಿಗೆ ವಿರುದ್ಧವಾಗಿ ಯಾವುದೇ ಮಾರ್ಗವನ್ನು ಸ್ವೀಕರಿಸಲು ಅಲ್ಲಾಹು ನಿಮಗೆ ಅನುಮತಿ ನೀಡಿಲ್ಲ.
Kannada Translation - Hamza Buturನೀವು ಇನ್ನೊಂದು ರೀತಿಯ ಜನರನ್ನು ಕಾಣುವಿರಿ. ಅವರು ನಿಮ್ಮಿಂದ ಮತ್ತು ತಮ್ಮದೇ ಜನರಿಂದ ಸುರಕ್ಷಿತರಾಗಿರಲು ಬಯಸುತ್ತಾರೆ. ಆದರೆ, ಅವರನ್ನು ಕ್ಷೋಭೆಗೆ (ಯುದ್ಧಕ್ಕೆ) ಮರಳಿಸಿದಾಗಲೆಲ್ಲಾ ಅವರು ಅದರಲ್ಲಿ ತಲೆಕೆಳಗಾಗಿ ಬೀಳುತ್ತಾರೆ.[1] ಅವರು ಯುದ್ಧದಿಂದ ದೂರ ಸರಿಯದಿದ್ದರೆ ಮತ್ತು ಶಾಂತಿ ಪ್ರಸ್ತಾಪವನ್ನು ಮುಂದಿಡದಿದ್ದರೆ, ಹಾಗೂ ತಮ್ಮ ಕೈಗಳನ್ನು ತಡೆಹಿಡಿಯದಿದ್ದರೆ, ಅವರನ್ನು ಹಿಡಿಯಿರಿ ಮತ್ತು ಕಂಡಲ್ಲಿ ಕೊಲ್ಲಿರಿ. ಅವರ ವಿರುದ್ಧ ನಾವು ನಿಮಗೆ ಸ್ಪಷ್ಟ ಅಧಿಕಾರವನ್ನು ನೀಡಿದ್ದೇವೆ.
Kannada Translation - Hamza Buturಒಬ್ಬ ಸತ್ಯವಿಶ್ವಾಸಿ ಇನ್ನೊಬ್ಬ ಸತ್ಯವಿಶ್ವಾಸಿಯನ್ನು ಕೊಲ್ಲಬಾರದು. ಪ್ರಮಾದವಶಾತ್ ಸಂಭವಿಸುವುದರ ಹೊರತು. ಒಬ್ಬ ಸತ್ಯವಿಶ್ವಾಸಿಯನ್ನು ಯಾರಾದರೂ ಪ್ರಮಾದವಶಾತ್ ಕೊಂದುಬಿಟ್ಟರೆ, ಅದಕ್ಕೆ ಪರಿಹಾರವಾಗಿ ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಸ್ವತಂತ್ರಗೊಳಿಸಬೇಕು ಮತ್ತು ಕೊಲೆಯಾದವನ ಕುಟುಂಬಕ್ಕೆ ರಕ್ತ ಪರಿಹಾರ ಕೊಡಬೇಕು. ಅವರು (ಕೊಲೆಯಾದವನ ಕುಟುಂಬದವರು) ಅದನ್ನು ಉದಾರವಾಗಿ ಬಿಟ್ಟುಬಿಡುವ ಹೊರತು. ಕೊಲೆಯಾದವನು ಶತ್ರು ಪಕ್ಷಕ್ಕೆ ಸೇರಿದ ಸತ್ಯವಿಶ್ವಾಸಿಯಾಗಿದ್ದರೆ, ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಸ್ವತಂತ್ರಗೊಳಿಸಿದರೆ ಸಾಕು. ಅವನು ನಿಮ್ಮೊಂದಿಗೆ ಒಪ್ಪಂದದಲ್ಲಿರುವ ಪಕ್ಷಕ್ಕೆ ಸೇರಿದವನಾಗಿದ್ದರೆ ಅವನ ಕುಟುಂಬದವರಿಗೆ ರಕ್ತ ಪರಿಹಾರ ಕೊಡಬೇಕು ಮತ್ತು ಒಬ್ಬ ಸತ್ಯವಿಶ್ವಾಸಿ ಗುಲಾಮನನ್ನು ಸ್ವತಂತ್ರಗೊಳಿಸಬೇಕು. ಯಾರಿಗೆ ಇದು ಸಾಧ್ಯವಿಲ್ಲವೋ ಅವನು ಸತತ ಎರಡು ತಿಂಗಳು ಉಪವಾಸ ಆಚರಿಸಬೇಕು. ಇದು ಅಲ್ಲಾಹು ನಿಶ್ಚಯಿಸಿದ ಪಶ್ಚಾತ್ತಾಪವಾಗಿದೆ. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಯಾರು ಒಬ್ಬ ಸತ್ಯವಿಶ್ವಾಸಿಯನ್ನು ಉದ್ದೇಶಪೂರ್ವಕ ಕೊಲ್ಲುತ್ತಾನೋ, ಅವನಿಗೆ ನರಕಾಗ್ನಿಯೇ ಪ್ರತಿಫಲವಾಗಿದೆ. ಅವನು ಅದರಲ್ಲಿ ಶಾಶ್ವತವಾಗಿ ವಾಸಿಸುವನು. ಅವನು ಅಲ್ಲಾಹನ ಕೋಪ ಮತ್ತು ಶಾಪಕ್ಕೆ ಪಾತ್ರನಾಗುವನು. ಅಲ್ಲಾಹು ಅವನಿಗೆ ಅತಿಕಠೋರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನ ಮಾರ್ಗದಲ್ಲಿ ಯುದ್ಧ ಮಾಡುವಾಗ (ಶತ್ರು ಮತ್ತು ಮಿತ್ರ ಯಾರೆಂದು) ಸ್ಪಷ್ಟವಾಗಿ ಗುರುತಿಸಿರಿ. ನಿಮಗೆ ಸಲಾಮ್ ಹೇಳಿದವನೊಂದಿಗೆ ನೀನು ಸತ್ಯವಿಶ್ವಾಸಿಯಲ್ಲ ಎಂದು ಹೇಳಬೇಡಿ. ನೀವು ಭೌತಿಕ ಲಾಭದ ಹುಡುಕಾಟದಲ್ಲಿದ್ದರೆ, ಅಲ್ಲಾಹನ ಬಳಿ ಯಥೇಷ್ಟ ಐಶ್ವರ್ಯವಿದೆ. ಈ ಹಿಂದೆ ನೀವೂ ಹೀಗೆಯೇ (ಸತ್ಯನಿಷೇಧದಲ್ಲಿ) ಇದ್ದಿರಿ.[1] ನಂತರ ಅಲ್ಲಾಹು ನಿಮಗೆ (ಸನ್ಮಾರ್ಗ ತೋರಿಸಿ) ಉಪಕಾರ ಮಾಡಿದನು. ಆದ್ದರಿಂದ ನೀವು ಸ್ಪಷ್ಟವಾಗಿ ಗುರುತಿಸಿರಿ. ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ.
Kannada Translation - Hamza Buturಯಾವುದೇ ಕಾರಣವಿಲ್ಲದೆ ಕುಳಿತಿರುವ ಸತ್ಯವಿಶ್ವಾಸಿಗಳು ಮತ್ತು ಅಲ್ಲಾಹನ ಮಾರ್ಗದಲ್ಲಿ ತನು-ಧನಗಳಿಂದ ಯುದ್ಧ ಮಾಡುವ ಸತ್ಯವಿಶ್ವಾಸಿಗಳು ಸಮಾನರಲ್ಲ. ತನು-ಧನಗಳಿಂದ ಯುದ್ಧ ಮಾಡುವವರಿಗೆ ಅಲ್ಲಾಹು ಕುಳಿತವರಿಗಿಂತ ಹೆಚ್ಚು ಪದವಿಗಳನ್ನು ನೀಡಿ ಅನುಗ್ರಹಿಸುತ್ತಾನೆ. ಅಲ್ಲಾಹು (ಅವರಿಬ್ಬರಲ್ಲಿ) ಪ್ರತಿಯೊಬ್ಬರಿಗೂ ಉತ್ತಮ ಪ್ರತಿಫಲದ ವಾಗ್ದಾನ ಮಾಡಿದ್ದಾನೆ. ಆದರೆ ಯುದ್ಧ ಮಾಡುವವರಿಗೆ ಅಲ್ಲಾಹು ಕುಳಿತವರಿಗೆ ನೀಡುವುದಕ್ಕಿಂತಲೂ ದೊಡ್ಡ ಪ್ರತಿಫಲವನ್ನು ನೀಡಿ ಅನುಗ್ರಹಿಸುತ್ತಾನೆ.
Kannada Translation - Hamza Buturಸ್ವಯಂ ಅಕ್ರಮವೆಸಗಿದವರ ಆತ್ಮಗಳನ್ನು ವಶಪಡಿಸುವಾಗ ದೇವದೂತರುಗಳು ಕೇಳುವರು: “ನೀವು ಯಾವ ಸ್ಥಿತಿಯಲ್ಲಿದ್ದಿರಿ?” ಅವರು ಹೇಳುವರು: “ನಾವು ಊರಿನಲ್ಲಿ ದಬ್ಬಾಳಿಕೆಗೆ ಗುರಿಯಾಗಿ ಬದುಕುತ್ತಿದ್ದೆವು.” ದೇವದೂತರುಗಳು ಕೇಳುವರು: “ಅಲ್ಲಾಹನ ಭೂಮಿ ವಿಶಾಲವಾಗಿತ್ತಲ್ಲವೇ? ನಿಮಗೆ ನಿಮ್ಮ ಊರನ್ನು ತ್ಯಜಿಸಿ ವಲಸೆ ಹೋಗಬಹುದಿತ್ತಲ್ಲವೇ?” ಅಂತಹವರಿಗೆ ನರಕಾಗ್ನಿಯೇ ವಾಸಸ್ಥಳವಾಗಿದೆ. ಅದು ಬಹಳ ಕೆಟ್ಟ ಗಮ್ಯಸ್ಥಾನ!
Kannada Translation - Hamza Buturಬೇರೆ ಯಾವ ಉಪಾಯವೂ ಇಲ್ಲದೆ (ದಬ್ಬಾಳಿಕೆಯಿಂದ) ಪಾರಾಗುವ ಮಾರ್ಗವನ್ನೂ ತಿಳಿಯದೆ, ದಬ್ಬಾಳಿಕೆಗೆ ಗುರಿಯಾಗಿ ಬದುಕುತ್ತಿರುವ ಪುರುಷರು, ಮಹಿಳೆಯರು ಮತ್ತು ಮಕ್ಕಳು ಇದರಿಂದ ಹೊರತಾಗಿದ್ದಾರೆ.
Kannada Translation - Hamza Buturಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡುವವನು ಭೂಮಿಯಲ್ಲಿ ಅನೇಕ ಆಶ್ರಯಗಳನ್ನು ಮತ್ತು ಜೀವನ ವೈಶಾಲ್ಯತೆಗಳನ್ನು ಕಾಣುವನು. ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಬಳಿಗೆ ವಲಸೆ (ಹಿಜ್ರ) ಮಾಡಲು ಮನೆಯಿಂದ ಹೊರಡುತ್ತಾನೋ—ನಂತರ (ದಾರಿ ಮಧ್ಯೆ) ಸಾವು ಅವನನ್ನು ಅಪ್ಪಿಕೊಂಡರೂ ಸಹ—ಅವನ ಪ್ರತಿಫಲವು ಅಲ್ಲಾಹನ ಬಳಿ ಖಾತ್ರಿಯಾಗಿ ಬಿಟ್ಟಿತು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Kannada Translation - Hamza Buturನೀವು ಭೂಮಿಯಲ್ಲಿ ಪ್ರಯಾಣ ಮಾಡುವಾಗ ಸತ್ಯನಿಷೇಧಿಗಳು ನಿಮಗೆ ತೊಂದರೆ ಕೊಡುವರೆಂಬ ಭಯವಿದ್ದರೆ, ನಮಾಝನ್ನು ಕುಗ್ಗಿಸಿ (ಎರಡು ರಕಅತ್ಗಳಾಗಿ) ನಿರ್ವಹಿಸುವುದರಲ್ಲಿ ನಿಮಗೆ ದೋಷವಿಲ್ಲ.[1] ನಿಶ್ಚಯವಾಗಿಯೂ ಸತ್ಯನಿಷೇಧಿಗಳು ನಿಮ್ಮ ಪ್ರತ್ಯಕ್ಷ ಶತ್ರುಗಳಾಗಿದ್ದಾರೆ.
Kannada Translation - Hamza Butur(ಓ ಪ್ರವಾದಿಯವರೇ!) ನೀವು ಅವರ ಜೊತೆಯಲ್ಲಿರುವಾಗ ಮತ್ತು ಅವರಿಗೆ ಇಮಾಂ ನಿಂತು ನಮಾಝ್ ನಿರ್ವಹಿಸುತ್ತಿರುವಾಗ, ಅವರಲ್ಲೊಂದು ಗುಂಪು ತಮ್ಮ ಜೊತೆಗೆ ನಮಾಝ್ ಮಾಡಲಿ. ಅವರು ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡಿರಲಿ. ಅವರು ಸುಜೂದ್ ಮಾಡಿದ ನಂತರ ತಮ್ಮ ಹಿಂಭಾಗಕ್ಕೆ ಸರಿದು, ನಮಾಝ್ ನಿರ್ವಹಿಸದ ಇನ್ನೊಂದು ಗುಂಪು ಬಂದು ನಿಮ್ಮೊಂದಿಗೆ ನಮಾಝ್ ನಿರ್ವಹಿಸಲಿ. ಅವರು ಎಚ್ಚರವಾಗಿರಲಿ ಮತ್ತು ತಮ್ಮ ಶಸ್ತ್ರಗಳನ್ನು ಹಿಡಿದುಕೊಂಡಿರಲಿ. ನೀವು ನಿಮ್ಮ ಶಸ್ತ್ರಗಳನ್ನು ಮತ್ತು ನಿಮ್ಮ ಸಾಮಗ್ರಿಗಳನ್ನು ನಿರ್ಲಕ್ಷಿಸಿದರೆ, ನಿಮ್ಮ ಮೇಲೆ ಒಮ್ಮೆಲೇ ದಾಳಿ ಮಾಡಬಹುದೆಂದು ಸತ್ಯನಿಷೇಧಿಗಳು ಬಯಸುತ್ತಾರೆ. ಆದರೆ ನೀವು ಮಳೆಯಿಂದ ತೊಂದರೆ ಅನುಭವಿಸುತ್ತಿದ್ದರೆ, ಅಥವಾ ನೀವು ಅನಾರೋಗ್ಯದಲ್ಲಿದ್ದರೆ, ನಿಮ್ಮ ಶಸ್ತ್ರಗಳನ್ನು ಕೆಳಗಿಡುವುದರಲ್ಲಿ ದೋಷವಿಲ್ಲ. ಆದರೆ ಪೂರ್ಣ ಎಚ್ಚರಿಕೆಯಿಂದಿರಿ. ನಿಶ್ಚಯವಾಗಿಯೂ ಅಲ್ಲಾಹು ಸತ್ಯನಿಷೇಧಿಗಳಿಗೆ ಅವಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.[1]
Kannada Translation - Hamza Buturನೀವು ನಮಾಝ್ ನಿರ್ವಹಿಸಿದ ಬಳಿಕ ನಿಂತು, ಕುಳಿತು ಮತ್ತು ಪಾರ್ಶ್ವಕ್ಕೆ ಸರಿದು (ಮಲಗಿ) ಅಲ್ಲಾಹನನ್ನು ಸ್ಮರಿಸಿರಿ. ನೀವು ನಿರ್ಭಯರಾಗಿರುವಾಗ, ನಮಾಝನ್ನು ಯಥಾಪ್ರಕಾರ ಸಂಸ್ಥಾಪಿಸಿರಿ. ನಿಶ್ಚಯವಾಗಿಯೂ ನಮಾಝ್ ಸತ್ಯವಿಶ್ವಾಸಿಗಳ ಮೇಲೆ ಸಮಯ ನಿರ್ಣಿತ ಕಡ್ಡಾಯ ಕರ್ಮವಾಗಿದೆ.
Kannada Translation - Hamza Buturಶತ್ರುಗಳನ್ನು ಬೆನ್ನಟ್ಟುವುದರಲ್ಲಿ ಬಲಹೀನರಾಗಬೇಡಿ. ನೀವು ನೋವು ಅನುಭವಿಸುತ್ತಿದ್ದರೆ, ಅವರು ಕೂಡ ನಿಮ್ಮಂತೆಯೇ ನೋವು ಅನುಭವಿಸುತ್ತಿದ್ದಾರೆ. ಆದರೆ ನೀವು ಅಲ್ಲಾಹನಿಂದ ಅವರು ನಿರೀಕ್ಷಿಸದೇ ಇರುವುದನ್ನು ನಿರೀಕ್ಷಿಸುತ್ತೀರಿ. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಅಲ್ಲಾಹು ನಿಮಗೆ ತೋರಿಸಿಕೊಟ್ಟಂತೆ ನೀವು ಜನರ ನಡುವೆ ತೀರ್ಪು ನೀಡಲು ನಾವು ನಿಮಗೆ ಈ ಗ್ರಂಥವನ್ನು ಸತ್ಯಸಹಿತ ಅವತೀರ್ಣಗೊಳಿಸಿದ್ದೇವೆ. ನೀವು ವಂಚಕರಿಗಾಗಿ ತರ್ಕಿಸುವವರಾಗಬೇಡಿ.
Kannada Translation - Hamza Buturಅವರು ಜನರಿಂದ (ತಮ್ಮ ನಿಜಬಣ್ಣವನ್ನು) ಅಡಗಿಸುತ್ತಾರೆ. ಆದರೆ ಅಲ್ಲಾಹನಿಂದ ಅಡಗಿಸಲು ಅವರಿಗೆ ಸಾಧ್ಯವಿಲ್ಲ. ಅಲ್ಲಾಹು ಇಷ್ಟಪಡದ ಮಾತುಗಳನ್ನು ಹೇಳುತ್ತಾ, ಅವರು ರಾತ್ರಿಯಲ್ಲಿ ಗೂಢ ಮಾತುಕತೆ ನಡೆಸುವಾಗ ಅವನು ಅವರ ಜೊತೆಯಲ್ಲೇ ಇದ್ದಾನೆ. ಅಲ್ಲಾಹು (ತನ್ನ ಜ್ಞಾನದಿಂದ) ಅವರು ಮಾಡುವುದನ್ನು ಪೂರ್ಣವಾಗಿ ಆವರಿಸಿಕೊಂಡಿದ್ದಾನೆ.
Kannada Translation - Hamza Buturಹೌದು, ನೀವು ಇಹಲೋಕ ಜೀವನದಲ್ಲಿ ಅವರಿಗಾಗಿ ತರ್ಕಿಸಿದ್ದೀರಿ. ಆದರೆ ಪುನರುತ್ಥಾನ ದಿನದಂದು ಅವರ ವಿಷಯದಲ್ಲಿ ಅಲ್ಲಾಹನೊಂದಿಗೆ ತರ್ಕಿಸಲು ಯಾರು ಮುಂದೆ ಬರುತ್ತೀರಿ? ಅಥವಾ ಅವರ ವಿಷಯವನ್ನು ಯಾರು ವಹಿಸಿಕೊಳ್ಳುತ್ತೀರಿ?
Kannada Translation - Hamza Buturಪಾಪವನ್ನು ಮಾಡಿದ ನಂತರ, ಅಥವಾ ಸ್ವಯಂ ಅನ್ಯಾಯವೆಸಗಿದ ನಂತರ ಅಲ್ಲಾಹನಲ್ಲಿ ಕ್ಷಮೆಯಾಚಿಸುವವನು ಯಾರೋ—ಅವನು ಅಲ್ಲಾಹನನ್ನು ಕ್ಷಮಿಸುವವನಾಗಿ ಮತ್ತು ದಯೆ ತೋರುವವನಾಗಿ ಕಾಣುವನು.
Kannada Translation - Hamza Buturಯಾರು ಒಂದು ತಪ್ಪು ಅಥವಾ ಪಾಪವನ್ನು ಮಾಡಿ, ನಂತರ ಅದನ್ನು ಒಬ್ಬ ಅಮಾಯಕನ ಮೇಲೆ ಹೊರಿಸುತ್ತಾನೋ, ನಿಶ್ಚಯವಾಗಿಯೂ ಅವನು ಸುಳ್ಳಾರೋಪವನ್ನು ಮತ್ತು ಪ್ರತ್ಯಕ್ಷ ಪಾಪವನ್ನು ವಹಿಸಿಕೊಂಡನು.
Kannada Translation - Hamza Butur(ಪ್ರವಾದಿಯವರೇ) ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ ಅವರಲ್ಲೊಂದು ಗುಂಪು ನಿಮ್ಮನ್ನು ದಾರಿತಪ್ಪಿಸಲು ಮುಂದಾಗುತ್ತಿದ್ದರು. ಆದರೆ ಅವರು ಸ್ವಯಂ ಅವರನ್ನೇ ದಾರಿತಪ್ಪಿಸುತ್ತಿದ್ದಾರೆ. ಅವರು ನಿಮಗೆ ಯಾವುದೇ ತೊಂದರೆ ಮಾಡಲಾರರು. ಅಲ್ಲಾಹು ನಿಮಗೆ ಗ್ರಂಥವನ್ನು ಮತ್ತು ವಿವೇಕವನ್ನು ಅವತೀರ್ಣಗೊಳಿಸಿದ್ದಾನೆ ಮತ್ತು ನೀವು ತಿಳಿಯದ ವಿಷಯಗಳನ್ನು ನಿಮಗೆ ಕಲಿಸಿದ್ದಾನೆ. ಅಲ್ಲಾಹು ನಿಮ್ಮ ಮೇಲೆ ತೋರಿದ ಔದಾರ್ಯವು ಬಹಳ ದೊಡ್ಡದಾಗಿದೆ.
Kannada Translation - Hamza Buturಅವರು ಮಾಡುವ ಗೂಢ ಮಾತುಕತೆಗಳಲ್ಲಿ ಯಾವುದೇ ಒಳಿತಿಲ್ಲ. ದಾನ-ಧರ್ಮ ಮಾಡಲು, ಒಳಿತು ಮಾಡಲು ಮತ್ತು ಜನರ ನಡುವೆ ಸಾಮರಸ್ಯ ಮೂಡಿಸಲು ಆದೇಶಿಸುವವರ ಹೊರತು. ಯಾರು ಅಲ್ಲಾಹನ ಸಂಪ್ರೀತಿಯನ್ನು ಬಯಸಿ ಅದನ್ನು ಮಾಡುತ್ತಾನೋ ಅವನಿಗೆ ನಾವು ಸದ್ಯವೇ ಮಹಾ ಪ್ರತಿಫಲವನ್ನು ದಯಪಾಲಿಸುವೆವು.
Kannada Translation - Hamza Buturಸನ್ಮಾರ್ಗವು ಸ್ಪಷ್ಟವಾದ ಬಳಿಕ ಯಾರು ಸಂದೇಶವಾಹಕರಿಗೆ ವಿರುದ್ಧವಾಗಿ ಚಲಿಸುತ್ತಾನೋ ಮತ್ತು ಸತ್ಯವಿಶ್ವಾಸಿಗಳದ್ದಲ್ಲದ[1] ಮಾರ್ಗವನ್ನು ಅನುಸರಿಸುತ್ತಾನೋ ಅವನು ತಿರುಗಿದ ಮಾರ್ಗಕ್ಕೆ ನಾವು ಅವನನ್ನು ತಿರುಗಿಸುವೆವು ಮತ್ತು ನರಕಾಗ್ನಿಗೆ ಹಾಕಿ ಉರಿಸುವೆವು. ಆ ಗಮ್ಯಸ್ಥಾನವು ಬಹಳ ನಿಕೃಷ್ಟವಾಗಿದೆ!
Kannada Translation - Hamza Buturತನ್ನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡಲಾಗುವುದನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ. ಅದರ ಹೊರತಾದ ಪಾಪಗಳನ್ನು ಅವನು ಇಚ್ಛಿಸುವವರಿಗೆ ಅವನು ಕ್ಷಮಿಸುತ್ತಾನೆ. ಯಾರು ಅಲ್ಲಾಹನೊಂದಿಗೆ ಸಹಭಾಗಿತ್ವ (ಶಿರ್ಕ್) ಮಾಡುತ್ತಾನೋ ಅವನು ವಿದೂರ ದುರ್ಮಾರ್ಗದಲ್ಲಿ ಬಿದ್ದಿದ್ದಾನೆ.
Kannada Translation - Hamza Buturಅವರು ಅಲ್ಲಾಹನನ್ನು ಬಿಟ್ಟು ಕೆಲವು ದೇವತೆಗಳನ್ನು ಮಾತ್ರ ಕರೆದು ಪ್ರಾರ್ಥಿಸುತ್ತಾರೆ. (ವಾಸ್ತವದಲ್ಲಿ) ಅವರು ಕಡು ಧಿಕ್ಕಾರಿಯಾದ ಶೈತಾನನನ್ನೇ ಕರೆದು ಪ್ರಾರ್ಥಿಸುತ್ತಾರೆ.
Kannada Translation - Hamza Buturನಾನು ಅವರನ್ನು ಖಂಡಿತ ದಾರಿತಪ್ಪಿಸುವೆನು ಮತ್ತು ಅವರಲ್ಲಿ ಆಸೆಗಳನ್ನು ಹುಟ್ಟಿಸುವೆನು. ನಾನು ಅವರಿಗೆ ಆದೇಶಿಸಿದಾಗ, ಅವರು ಜಾನುವಾರುಗಳ ಕಿವಿಗಳನ್ನು ಹರಿಯುವರು. ನಾನು ಅವರಿಗೆ ಆದೇಶಿಸಿದಾಗ, ಅವರು ಅಲ್ಲಾಹನ ಸಹಜ ಪ್ರಕೃತಿಯನ್ನು ಬದಲಾಯಿಸುವರು.” ಯಾರು ಅಲ್ಲಾಹನನ್ನು ಬಿಟ್ಟು ಶೈತಾನನನ್ನು ರಕ್ಷಕನನ್ನಾಗಿ ಸ್ವೀಕರಿಸುತ್ತಾನೋ—ಅವನು ಅತ್ಯಂತ ಸ್ಪಷ್ಟವಾದ ನಷ್ಟಕ್ಕೊಳಗಾದನು.
Kannada Translation - Hamza Buturಅವನು (ಶೈತಾನನು) ಅವರಿಗೆ ಆಶ್ವಾಸನೆಗಳನ್ನು ನೀಡುತ್ತಾನೆ ಮತ್ತು ಅವರಲ್ಲಿ ಆಸೆಗಳನ್ನು ಹುಟ್ಟಿಸುತ್ತಾನೆ. ಆದರೆ ಶೈತಾನನು ಅವರಿಗೆ ನೀಡುವ ಆಶ್ವಾಸನೆಗಳು ವಂಚನೆಯಲ್ಲದೆ ಇನ್ನೇನಲ್ಲ.
Kannada Translation - Hamza Buturಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರನ್ನು ನಾವು ಸದ್ಯವೇ ತಳಭಾಗದಿಂದ ನದಿಗಳು ಹರಿಯುವ ಸ್ವರ್ಗೋದ್ಯಾನಗಳಿಗೆ ಪ್ರವೇಶ ಮಾಡಿಸುವೆವು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು. ಅಲ್ಲಾಹನ ಆಶ್ವಾಸನೆಯು ಸತ್ಯವಾಗಿದೆ. ಮಾತಿನಲ್ಲಿ ಅಲ್ಲಾಹನಿಗಿಂತಲೂ ಹೆಚ್ಚು ಸತ್ಯವಂತನು ಯಾರು?
Kannada Translation - Hamza Buturವಸ್ತುಸ್ಥಿತಿ ನಿಮ್ಮ ಇಷ್ಟದಂತಿಲ್ಲ. ಗ್ರಂಥದವರ ಇಷ್ಟದಂತೆಯೂ ಇಲ್ಲ. ಪಾಪ ಮಾಡಿದವನಿಗೆ ಅದರ ಪ್ರತಿಫಲವನ್ನು ನೀಡಲಾಗುತ್ತದೆ. ಅಲ್ಲಾಹನ ಹೊರತು ಬೇರೆ ಯಾವುದೇ ರಕ್ಷಕನನ್ನು ಅಥವಾ ಸಹಾಯಕನನ್ನು ಅವನು ಕಾಣಲಾರ.
Kannada Translation - Hamza Buturಸತ್ಯವಿಶ್ವಾಸಿಯಾಗಿದ್ದು ಸತ್ಕರ್ಮವೆಸಗುವವರು ಯಾರೋ—ಅವರು ಗಂಡಾಗಿರಲಿ ಅಥವಾ ಹೆಣ್ಣಾಗಿರಲಿ—ಅವರು ಸ್ವರ್ಗವನ್ನು ಪ್ರವೇಶಿಸುವರು. ಅವರಿಗೆ ಖರ್ಜೂರ ಬೀಜದ ಪೊರೆಯ ಗಾತ್ರದಷ್ಟು ಸಹ ಅನ್ಯಾಯವಾಗುವುದಿಲ್ಲ.
Kannada Translation - Hamza Buturಒಳಿತು ಮಾಡುತ್ತಾ ತನ್ನ ಮುಖವನ್ನು ಅಲ್ಲಾಹನಿಗೆ ಶರಣಾಗಿಸುವವನು ಮತ್ತು ಏಕನಿಷ್ಠರಾದ ಇಬ್ರಾಹೀಮರ ಮಾರ್ಗವನ್ನು ಹಿಂಬಾಲಿಸುವವನಿಗಿಂತ ಧರ್ಮದ ವಿಷಯದಲ್ಲಿ ಉತ್ತಮನಾಗಿರುವವನು ಯಾರು? ಅಲ್ಲಾಹು ಇಬ್ರಾಹೀಮರನ್ನು ಆಪ್ತಮಿತ್ರನಾಗಿ ಸ್ವೀಕರಿಸಿದ್ದಾನೆ.[1]
Kannada Translation - Hamza Buturಅವರು ತಮ್ಮೊಡನೆ ಮಹಿಳೆಯರ ವಿಷಯದಲ್ಲಿ ಧರ್ಮವಿಧಿಯನ್ನು ಕೇಳುತ್ತಾರೆ. ಹೇಳಿರಿ: “ಅಲ್ಲಾಹು ನಿಮಗೆ ಅವರ (ಮಹಿಳೆಯರ) ವಿಷಯದಲ್ಲಿ—ಅವರಿಗೆ ನಿಶ್ಚಯಿಸಲಾದ ಹಕ್ಕನ್ನು ನೀಡದೆ ನೀವು ವಿವಾಹವಾಗಲು ಬಯಸುವ ಅನಾಥ ಹೆಣ್ಣುಮಕ್ಕಳ ವಿಷಯದಲ್ಲಿ, ದುರ್ಬಲ ಮಕ್ಕಳ ವಿಷಯದಲ್ಲಿ ಮತ್ತು ಅನಾಥರೊಡನೆ ನ್ಯಾಯನಿಷ್ಠೆಯಿಂದ ವರ್ತಿಸಬೇಕೆಂಬ ವಿಷಯದಲ್ಲಿ ಧರ್ಮವಿಧಿ ನೀಡುತ್ತಾನೆ.” ನೀವು ಏನೇ ಒಳಿತು ಮಾಡಿದರೂ ನಿಶ್ಚಯವಾಗಿಯೂ ಅಲ್ಲಾಹು ಅದನ್ನು ತಿಳಿಯುತ್ತಾನೆ.
Kannada Translation - Hamza Buturಒಬ್ಬ ಮಹಿಳೆ ತನ್ನ ಗಂಡನಿಂದ ಕೆಟ್ಟ ವರ್ತನೆ ಅಥವಾ ಅವಗಣನೆಯನ್ನು ಭಯಪಟ್ಟರೆ, ಅವರಿಬ್ಬರು ಸೇರಿ ಅದನ್ನು ಇತ್ಯರ್ಥ ಮಾಡಿಕೊಳ್ಳುವುದರಲ್ಲಿ ಅವರಿಬ್ಬರಿಗೂ ದೋಷವಿಲ್ಲ. ಇತ್ಯರ್ಥ ಮಾಡುವುದು ಉತ್ತಮವಾಗಿದೆ. ಮನಸ್ಸುಗಳಲ್ಲಿ ಜಿಪುಣತನವು ಇದ್ದೇ ಇದೆ. ನೀವು ಒಳಿತು ಮಾಡುವವರು ಮತ್ತು ದೇವಭಯವುಳ್ಳವರಾಗಿದ್ದರೆ, ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಿದ್ದಾನೆ.
Kannada Translation - Hamza Buturನೀವು ಎಷ್ಟೇ ಆಸಕ್ತಿ ವಹಿಸಿದರೂ ಪತ್ನಿಯರ ನಡುವೆ ನ್ಯಾಯನಿಷ್ಠೆಯಿಂದ ವರ್ತಿಸಲು ನಿಮಗೆ ಖಂಡಿತ ಸಾಧ್ಯವಿಲ್ಲ. ಆದ್ದರಿಂದ ನೀವು ಒಬ್ಬಳ ಕಡೆಗೆ ಸಂಪೂರ್ಣ ಆಕರ್ಷಿತರಾಗಿ ಇನ್ನೊಬ್ಬಳನ್ನು ತೂಗು ಹಾಕಲಾದವಳಂತೆ ಬಿಟ್ಟುಬಿಡಬೇಡಿ. ನೀವು (ನಿಮ್ಮ ವರ್ತನೆಯನ್ನು) ಸುಧಾರಿಸಿದರೆ ಮತ್ತು ಅಲ್ಲಾಹನನ್ನು ಭಯಪಟ್ಟರೆ, ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Kannada Translation - Hamza Buturಆದರೆ ಅವರಿಬ್ಬರು ಬೇರ್ಪಡುವುದಾದರೆ, ಅಲ್ಲಾಹು ತನ್ನ ವಿಶಾಲ ಸಾಮರ್ಥ್ಯದಿಂದ ಅವರಿಬ್ಬರಲ್ಲಿ ಪ್ರತಿಯೊಬ್ಬರಿಗೂ ಸ್ವಾವಲಂಬನೆಯನ್ನು ನೀಡುವನು. ಅಲ್ಲಾಹು ವಿಶಾಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. “ಅಲ್ಲಾಹನನ್ನು ಭಯಪಡಿರಿ” ಎಂದು ನಾವು ನಿಮಗೂ ನಿಮಗಿಂತ ಮೊದಲು ಗ್ರಂಥ ನೀಡಲಾದವರಿಗೂ ಆದೇಶಿಸಿದ್ದೇವೆ. ನೀವು ನಿಷೇಧಿಸಿದರೆ (ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ). ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ನಿರಪೇಕ್ಷನು ಮತ್ತು ಸ್ತುತ್ಯರ್ಹನಾಗಿದ್ದಾನೆ.
Kannada Translation - Hamza Buturಯಾರು ಇಹಲೋಕದ ಪ್ರತಿಫಲವನ್ನು ಬಯಸುತ್ತಾನೋ—ಅಲ್ಲಾಹನ ಬಳಿ ಇಹಲೋಕ ಮತ್ತು ಪರಲೋಕಗಳ ಪ್ರತಿಫಲವಿದೆ (ಎಂದು ಅವನಿಗೆ ತಿಳಿದಿರಲಿ). ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ನೋಡುವವನಾಗಿದ್ದಾನೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಿಗೆ ಸಾಕ್ಷಿಯಾಗಿದ್ದು, ನ್ಯಾಯ ನಿಷ್ಠೆಯಲ್ಲಿ ಸದಾ ದೃಢವಾಗಿ ನಿಲ್ಲಿರಿ. ಅದು ನಿಮಗೆ, ನಿಮ್ಮ ತಂದೆ-ತಾಯಿಗಳಿಗೆ, ಅಥವಾ ಹತ್ತಿರದ ಸಂಬಂಧಿಕರಿಗೆ ವಿರುದ್ಧವಾಗಿದ್ದರೂ ಸಹ. ಶ್ರೀಮಂತನಾಗಿರಲಿ ಅಥವಾ ಬಡವನಾಗಿರಲಿ—ಇಬ್ಬರಿಗೂ ಅಲ್ಲಾಹು ಬಹಳ ಹತ್ತಿರದಲ್ಲಿದ್ದಾನೆ. ಆದ್ದರಿಂದ ನೀವು ಸ್ವೇಚ್ಛೆಗಳನ್ನು ಹಿಂಬಾಲಿಸಿ ನ್ಯಾಯ ತಪ್ಪಿ ನಡೆಯಬೇಡಿ. ನೀವು (ಸಾಕ್ಷ್ಯವನ್ನು) ತಿರುಚಿದರೆ, ಅಥವಾ (ಸಾಕ್ಷಿ ನುಡಿಯದೆ) ಹಿಂದೆ ಸರಿದರೆ, ನಿಶ್ಚಯವಾಗಿಯೂ ನೀವು ಮಾಡುವುದನ್ನು ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಅಲ್ಲಾಹನಲ್ಲಿ, ಅವನ ಸಂದೇಶವಾಹಕರಲ್ಲಿ, ಅವನ ಸಂದೇಶವಾಹಕರಿಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ಅವರಿಗಿಂತ ಮೊದಲು ಅವತೀರ್ಣವಾದ ಗ್ರಂಥಗಳಲ್ಲಿ ವಿಶ್ವಾಸವಿಡಿ. ಯಾರು ಅಲ್ಲಾಹನನ್ನು, ಅವನ ದೇವದೂತರುಗಳನ್ನು, ಅವನ ಗ್ರಂಥಗಳನ್ನು, ಅವನ ಸಂದೇಶವಾಹಕರುಗಳನ್ನು ಮತ್ತು ಅಂತ್ಯದಿನವನ್ನು ನಿಷೇಧಿಸುತ್ತಾನೋ—ಅವನು ವಿದೂರ ದುರ್ಮಾರ್ಗದಲ್ಲಿ ದಾರಿತಪ್ಪಿದ್ದಾನೆ.
Kannada Translation - Hamza Buturನಿಶ್ಚಯವಾಗಿಯೂ, ಸತ್ಯವಿಶ್ವಾಸ ಸ್ವೀಕರಿಸಿದ ನಂತರ ಸತ್ಯನಿಷೇಧಿಗಳಾದವರು, ನಂತರ ಪುನಃ ಸತ್ಯವಿಶ್ವಾಸಿಗಳಾಗಿ ಪುನಃ ಸತ್ಯನಿಷೇಧಿಗಳಾದವರು, ನಂತರ ಸತ್ಯನಿಷೇಧವನ್ನು ಹೆಚ್ಚಿಸುತ್ತಲೇ ಹೋದವರು ಯಾರೋ—ಅವರಿಗೆ ಅಲ್ಲಾಹು ಕ್ಷಮಿಸುವುದಿಲ್ಲ. ಅವರಿಗೆ ಸರಿದಾರಿಯನ್ನು ತೋರಿಸುವುದೂ ಇಲ್ಲ.
Kannada Translation - Hamza Buturಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಿದವರು ಯಾರೋ—ಅವರು ಸತ್ಯನಿಷೇಧಿಗಳ ಬಳಿ ಪ್ರತಿಷ್ಠೆಯನ್ನು ಹುಡುಕುತ್ತಿದ್ದಾರೆಯೇ? ನಿಶ್ಚಯವಾಗಿಯೂ ಪ್ರತಿಷ್ಠೆಯು ಸಂಪೂರ್ಣವಾಗಿ ಅಲ್ಲಾಹನ ವಶದಲ್ಲಿದೆ (ಎಂದು ಅವರು ತಿಳಿದಿರಲಿ).
Kannada Translation - Hamza Buturಜನರು ಅಲ್ಲಾಹನ ವಚನಗಳನ್ನು ನಿಷೇಧಿಸುವುದನ್ನು ಮತ್ತು ತಮಾಷೆ ಮಾಡುವುದನ್ನು ಕೇಳಿದರೆ, ಅವರು ಬೇರೆ ವಿಷಯದಲ್ಲಿ ಪ್ರವೇಶಿಸುವ ತನಕ ಅವರೊಡನೆ ಕುಳಿತುಕೊಳ್ಳಬೇಡಿ ಎಂಬ ಆದೇಶವನ್ನು ಗ್ರಂಥದಲ್ಲಿ ಈಗಾಗಲೇ ನಿಮಗೆ ಅವತೀರ್ಣಗೊಳಿಸಲಾಗಿದೆ.[1] ಅವರೊಡನೆ ಕುಳಿತುಕೊಂಡರೆ ನೀವು ಕೂಡ ಅವರಂತೆಯೇ ಆಗುವಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ಕಪಟವಿಶ್ವಾಸಿಗಳನ್ನು ಮತ್ತು ಸತ್ಯನಿಷೇಧಿಗಳನ್ನು ನರಕಾಗ್ನಿಯಲ್ಲಿ ಒಟ್ಟುಗೂಡಿಸುವನು.
Kannada Translation - Hamza Buturಅವರು ನಿಮ್ಮನ್ನು ಕಾದು ನೋಡುತ್ತಾರೆ. ನಿಮಗೆ ಅಲ್ಲಾಹನಿಂದ ಗೆಲುವು ಪ್ರಾಪ್ತವಾದರೆ, “ನಾವು ನಿಮ್ಮೊಂದಿಗೆ ಇರಲಿಲ್ಲವೇ?” ಎಂದು ಅವರು (ನಿಮ್ಮೊಂದಿಗೆ) ಕೇಳುತ್ತಾರೆ. ಗೆಲುವು ಸತ್ಯನಿಷೇಧಿಗಳ ಪಾಲಾದರೆ (ಅವರ ಬಳಿಗೆ ಹೋಗಿ), “ನಿಮ್ಮ ಮೇಲೆ ಗೆಲುವು ಪಡೆಯುವ ಸಾಧ್ಯತೆಯಿದ್ದೂ ಸಹ ನಾವು ನಿಮ್ಮನ್ನು ಸತ್ಯವಿಶ್ವಾಸಿಗಳಿಂದ ರಕ್ಷಿಸಲಿಲ್ಲವೇ?” ಎಂದು ಕೇಳುತ್ತಾರೆ. ಪುನರುತ್ಥಾನ ದಿನದಂದು ಅಲ್ಲಾಹು ನಿಮ್ಮ ನಡುವೆ ತೀರ್ಪು ನೀಡುವನು. ಅಲ್ಲಾಹು ಸತ್ಯವಿಶ್ವಾಸಿಗಳ ಮೇಲೆ ಸತ್ಯನಿಷೇಧಿಗಳಿಗೆ ಯಾವುದೇ ಮಾರ್ಗವನ್ನು ಮಾಡಿಕೊಡುವುದಿಲ್ಲ.
Kannada Translation - Hamza Buturನಿಶ್ಚಯವಾಗಿಯೂ ಕಪಟವಿಶ್ವಾಸಿಗಳು ಅಲ್ಲಾಹನನ್ನು ವಂಚಿಸಬಹುದೆಂದು (ಭಾವಿಸುತ್ತಾರೆ). ಆದರೆ, (ವಾಸ್ತವವಾಗಿ) ಅಲ್ಲಾಹನೇ ಅವರನ್ನು ವಂಚಿಸುತ್ತಿದ್ದಾನೆ.[1] ಅವರು ನಮಾಝ್ ಮಾಡಲು ನಿಲ್ಲುವಾಗ ಉದಾಸೀನರಾಗಿ ಮತ್ತು ಜನರಿಗೆ ತೋರಿಸುವುದಕ್ಕಾಗಿ ನಿಲ್ಲುತ್ತಾರೆ. ಅವರು ಅಲ್ಲಾಹನನ್ನು ಸ್ವಲ್ಪ ಮಾತ್ರ ಸ್ಮರಿಸುತ್ತಾರೆ.
Kannada Translation - Hamza Buturಅವರು ಎರಡು ಗುಂಪುಗಳ ಮಧ್ಯೆ ತೊಳಲಾಡುತ್ತಾರೆ. ಆ ಗುಂಪಿಗೂ ಸೇರುವುದಿಲ್ಲ; ಈ ಗುಂಪಿಗೂ ಸೇರುವುದಿಲ್ಲ. ಅಲ್ಲಾಹು ಯಾರನ್ನು ದಾರಿತಪ್ಪಿಸುತ್ತಾನೋ ಅವನಿಗೆ ಯಾವುದೇ ದಾರಿಯನ್ನು ನೀವು ಕಾಣಲಾರಿರಿ.
Kannada Translation - Hamza Buturಓ ಸತ್ಯವಿಶ್ವಾಸಿಗಳೇ! ನೀವು ಸತ್ಯವಿಶ್ವಾಸಿಗಳನ್ನು ಬಿಟ್ಟು ಸತ್ಯನಿಷೇಧಿಗಳನ್ನು ಆಪ್ತಮಿತ್ರರನ್ನಾಗಿ ಸ್ವೀಕರಿಸಬೇಡಿ. ನಿಮ್ಮ ವಿರುದ್ಧ ಅಲ್ಲಾಹನಿಗೆ ಸ್ಪಷ್ಟ ಸಾಕ್ಷ್ಯಾಧಾರವನ್ನು ಮಾಡಿಕೊಡಲು ನೀವು ಬಯಸುತ್ತೀರಾ?
Kannada Translation - Hamza Buturಆದರೆ ಪಶ್ಚಾತ್ತಾಪಪಡುವವರು, ಸುಧಾರಿಸಿಕೊಳ್ಳುವವರು, ಅಲ್ಲಾಹನನ್ನು ಬಿಗಿಯಾಗಿ ಹಿಡಿದುಕೊಳ್ಳುವವರು ಮತ್ತು ತಮ್ಮ ಧರ್ಮವನ್ನು ಅಲ್ಲಾಹನಿಗೆ ನಿಷ್ಕಳಂಕಗೊಳಿಸುವವರು ಇದರಿಂದ ಹೊರತಾಗಿದ್ದಾರೆ. ಅವರು ಸತ್ಯವಿಶ್ವಾಸಿಗಳಲ್ಲಿ ಸೇರಿದವರು. ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಮಹಾ ಪ್ರತಿಫಲವನ್ನು ನೀಡುವನು.
Kannada Translation - Hamza Buturಕೆಟ್ಟ ಪದಗಳನ್ನು ಜೋರಾಗಿ ಹೇಳುವುದನ್ನು ಅಲ್ಲಾಹು ಇಷ್ಟಪಡುವುದಿಲ್ಲ. ಆದರೆ ಅನ್ಯಾಯಕ್ಕೆ ಗುರಿಯಾದವನು ಇದರಿಂದ ಹೊರತಾಗಿದ್ದಾನೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Kannada Translation - Hamza Buturನೀವು ಬಹಿರಂಗವಾಗಿ ಅಥವಾ ರಹಸ್ಯವಾಗಿ ಒಳಿತು ಮಾಡಿದರೂ, ಅಥವಾ ಒಂದು ದುಷ್ಕರ್ಮವನ್ನು ಕ್ಷಮಿಸಿದರೂ—ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ಸರ್ವಶಕ್ತನಾಗಿದ್ದಾನೆ.
Kannada Translation - Hamza Buturನಿಶ್ಚಯವಾಗಿಯೂ ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ನಿಷೇಧಿಸುವವರು, ಅಲ್ಲಾಹು ಮತ್ತು ಅವನ ಸಂದೇಶವಾಹಕರ ನಡುವೆ ಬೇಧ ಮಾಡಲು ಬಯಸುವವರು, ನಾವು ಕೆಲವರನ್ನು ನಂಬುತ್ತೇವೆ ಮತ್ತು ಕೆಲವರನ್ನು ನಿಷೇಧಿಸುತ್ತೇವೆ ಎಂದು ಹೇಳುವವರು ಹಾಗೂ ಅದರ ಮಧ್ಯೆ ಒಂದು ಮಾರ್ಗವನ್ನು ಸ್ವೀಕರಿಸಲು ಬಯಸುವವರು ಯಾರೋ,
Kannada Translation - Hamza Buturಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಡುವವರು, ಮತ್ತು ಅವರಲ್ಲಿ ಯಾರ ನಡುವೆಯೂ ಬೇಧ ಮಾಡದವರು ಯಾರೋ—ಅವರಿಗೆ ಅಲ್ಲಾಹು ಅರ್ಹ ಪ್ರತಿಫಲವನ್ನು ನೀಡುವನು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Kannada Translation - Hamza Buturಗ್ರಂಥದವರು ನಿಮ್ಮೊಂದಿಗೆ—ಅವರಿಗೆ ಆಕಾಶದಿಂದ ಒಂದು ಗ್ರಂಥವನ್ನು ಇಳಿಸಿಕೊಡಬೇಕೆಂದು ಕೇಳುತ್ತಾರೆ. ಅವರು ಮೂಸಾರೊಡನೆ ಇದಕ್ಕಿಂತಲೂ ದೊಡ್ಡ ಸಂಗತಿಯನ್ನು ಕೇಳಿದ್ದರು. ಅವರು ಹೇಳಿದರು: “ನಮಗೆ ಅಲ್ಲಾಹನನ್ನು ಪ್ರತ್ಯಕ್ಷವಾಗಿ ತೋರಿಸಿಕೊಡಿ.” ಆಗ ಅವರು ಮಾಡಿದ ಅನ್ಯಾಯದಿಂದಾಗಿ ಮಿಂಚು ಅವರ ಮೇಲೆರಗಿತು. ನಂತರ ಅವರಿಗೆ ಸ್ಪಷ್ಟ ಸಾಕ್ಷ್ಯಾಧಾರಗಳು ತಲುಪಿದ ಬಳಿಕವೂ ಅವರು ಕರುವನ್ನು (ದೇವರನ್ನಾಗಿ) ಸ್ವೀಕರಿಸಿದರು. ಆದರೂ ನಾವು ಅದನ್ನು ಕ್ಷಮಿಸಿದೆವು. ಮೂಸಾರಿಗೆ ನಾವು ಸ್ಪಷ್ಟ ಸಾಕ್ಷ್ಯಾಧಾರಗಳನ್ನು ನೀಡಿದ್ದೆವು.
Kannada Translation - Hamza Buturಅವರಿಂದ ಕರಾರು ಪಡೆಯಲು ನಾವು ಅವರ ಮೇಲೆ ತೂರ್ ಪರ್ವತವನ್ನು ಎತ್ತಿಹಿಡಿದೆವು. ತಲೆಬಾಗುತ್ತಾ ದ್ವಾರವನ್ನು ಪ್ರವೇಶಿಸಿರಿ ಎಂದು ನಾವು ಅವರಿಗೆ ಆದೇಶಿಸಿದೆವು. ಸಬ್ಬತ್ ದಿನದಲ್ಲಿ ಅತಿರೇಕವೆಸಗಬೇಡಿ ಎಂದು ಅವರೊಡನೆ ಹೇಳಿದೆವು. ನಾವು ಅವರಿಂದ ಪ್ರಬಲ ಕರಾರನ್ನು ಪಡೆದೆವು.
Kannada Translation - Hamza Buturಅವರು ಕರಾರನ್ನು ಉಲ್ಲಂಘಿಸಿದ, ಅಲ್ಲಾಹನ ವಚನಗಳನ್ನು ನಿಷೇಧಿಸಿದ, ಅನ್ಯಾಯವಾಗಿ ಪ್ರವಾದಿಗಳನ್ನು ಕೊಲೆ ಮಾಡಿದ ಮತ್ತು ತಮ್ಮ ಹೃದಯಗಳು ಮುಚ್ಚಿವೆಯೆಂದು ಹೇಳಿದ ಕಾರಣದಿಂದ (ಶಾಪಕ್ಕೆ ಗುರಿಯಾದರು). ಅಲ್ಲ, ವಾಸ್ತವವಾಗಿ ಅವರ ಸತ್ಯನಿಷೇಧದಿಂದಾಗಿ ಅಲ್ಲಾಹು ಅವರ ಹೃದಯಗಳಿಗೆ ಮೊಹರು ಹಾಕಿದ್ದಾನೆ. ಆದ್ದರಿಂದ ಅವರು ಸ್ವಲ್ಪ ಮಾತ್ರ ವಿಶ್ವಾಸವಿಡುತ್ತಾರೆ.
Kannada Translation - Hamza Butur“ಅಲ್ಲಾಹನ ಸಂದೇಶವಾಹಕರಾದ ಮರ್ಯಮರ ಪುತ್ರ ಮಸೀಹ ಈಸಾರನ್ನು ನಾವು ಕೊಂದಿದ್ದೇವೆ” ಎಂದು ಹೇಳಿದ ನಿಮಿತ್ತ (ಅವರು ಶಾಪಕ್ಕೆ ಗುರಿಯಾದರು). ಅವರು ಅವರನ್ನು ಕೊಲ್ಲಲಿಲ್ಲ ಮತ್ತು ಶಿಲುಬೆಗೇರಿಸಲೂ ಇಲ್ಲ. ವಾಸ್ತವವಾಗಿ, ಅವರಿಗೆ ಅದನ್ನು ಸಾದೃಶ್ಯಗೊಳಿಸಲಾಯಿತು. ನಿಶ್ಚಯವಾಗಿಯೂ ಅವರ (ಈಸಾರ) ವಿಷಯದಲ್ಲಿ ಭಿನ್ನಮತ ತಳೆದವರು ಅದರ ಬಗ್ಗೆ ಸಂಶಯದಲ್ಲಿದ್ದಾರೆ. ವದಂತಿಗಳನ್ನು ಹಿಂಬಾಲಿಸುವುದನ್ನು ಬಿಟ್ಟರೆ ಅವರಿಗೆ ಅದರ ಬಗ್ಗೆ ಸರಿಯಾದ ಜ್ಞಾನವೇ ಇಲ್ಲ. ನಿಶ್ಚಯವಾಗಿಯೂ ಅವರು ಈಸಾರನ್ನು ಕೊಲ್ಲಲಿಲ್ಲ.[1]
Kannada Translation - Hamza Buturಅವರ (ಈಸಾರ) ಮರಣಕ್ಕೆ ಮೊದಲು ಅವರಲ್ಲಿ ವಿಶ್ವಾಸವಿಡದವರು ಯಾರೂ ಗ್ರಂಥದವರಲ್ಲಿ ಇರಲಾರರು. ಪುನರುತ್ಥಾನ ದಿನದಂದು ಅವರು ಇವರಿಗೆ ವಿರುದ್ಧವಾಗಿ ಸಾಕ್ಷಿ ನುಡಿಯುವರು.
Kannada Translation - Hamza Buturಯಹೂದಿಗಳು ಮಾಡಿದ ಅನ್ಯಾಯದ ನಿಮಿತ್ತ ಮತ್ತು ಅಲ್ಲಾಹನ ಮಾರ್ಗದಿಂದ ಅವರು ಹೇರಳವಾಗಿ ಜನರನ್ನು ತಡೆಗಟ್ಟಿದ ನಿಮಿತ್ತ ಅವರಿಗೆ ಅನುಮತಿಸಲಾಗಿದ್ದ ಹಲವಾರು ಉತ್ತಮ ವಸ್ತುಗಳನ್ನು ನಾವು ಅವರಿಗೆ ನಿಷೇಧಿಸಿದೆವು.
Kannada Translation - Hamza Buturಅವರಿಗೆ ಬಡ್ಡಿಯನ್ನು ವಿರೋಧಿಸಲಾಗಿದ್ದೂ ಸಹ ಅವರು ಅದನ್ನು ಪಡೆದ ನಿಮಿತ್ತ ಮತ್ತು ಜನರ ಧನವನ್ನು ಅನ್ಯಾಯವಾಗಿ ತಿಂದ ನಿಮಿತ್ತ. ಅವರಲ್ಲಿರುವ ಸತ್ಯನಿಷೇಧಿಗಳಿಗೆ ನಾವು ಯಾತನಾಮಯ ಶಿಕ್ಷೆಯನ್ನು ಸಿದ್ಧಗೊಳಿಸಿದ್ದೇವೆ.
Kannada Translation - Hamza Buturಆದರೆ ಅವರಲ್ಲಿರುವ ಮಹಾಜ್ಞಾನಿಗಳು ಮತ್ತು ಸತ್ಯವಿಶ್ವಾಸಿಗಳು ನಿಮಗೆ ಅವತೀರ್ಣವಾದ ಗ್ರಂಥದಲ್ಲಿ ಮತ್ತು ನಿಮಗಿಂತ ಮೊದಲು ಅವತೀರ್ಣವಾದ ಗ್ರಂಥಗಳಲ್ಲಿ ವಿಶ್ವಾಸವಿಡುತ್ತಾರೆ. ಅವರು ನಮಾಝ್ ಸಂಸ್ಥಾಪಿಸುತ್ತಾರೆ, ಝಕಾತ್ ನೀಡುತ್ತಾರೆ ಮತ್ತು ಅಲ್ಲಾಹನಲ್ಲಿ ಹಾಗೂ ಅಂತ್ಯದಿನದಲ್ಲಿ ವಿಶ್ವಾಸವಿಡುತ್ತಾರೆ. ನಾವು ಅವರಿಗೆ ಮಹಾ ಪ್ರತಿಫಲವನ್ನು ದಯಪಾಲಿಸುವೆವು.
Kannada Translation - Hamza Buturನೂಹ್ ಮತ್ತು ಅವರ ನಂತರದ ಪ್ರವಾದಿಗಳಿಗೆ ದೇವವಾಣಿ ನೀಡಿದಂತೆಯೇ ನಾವು ನಿಮಗೂ ದೇವವಾಣಿ ನೀಡಿದ್ದೇವೆ. ಇಬ್ರಾಹೀಮ್, ಇಸ್ಮಾಈಲ್, ಇಸ್ಹಾಕ್, ಯಾಕೂಬ್, ಯಾಕೂಬ್ ಸಂತತಿಗಳು, ಈಸಾ, ಅಯ್ಯೂಬ್, ಯೂನುಸ್, ಹಾರೂನ್, ಸುಲೈಮಾನ್ ಮುಂತಾದವರಿಗೂ ನಾವು ದೇವವಾಣಿಯನ್ನು ನೀಡಿದ್ದೇವೆ. ನಾವು ದಾವೂದರಿಗೆ ಝಬೂರನ್ನು ನೀಡಿದ್ದೇವೆ.
Kannada Translation - Hamza Buturನಾವು ಈಗಾಗಲೇ ನಿಮಗೆ ತಿಳಿಸಿಕೊಟ್ಟ ಸಂದೇಶವಾಹಕರನ್ನು ಮತ್ತು ನಾವು ನಿಮಗೆ ತಿಳಿಸಿಕೊಡದ ಸಂದೇಶವಾಹಕರನ್ನು (ನಾವು ಕಳುಹಿಸಿದ್ದೇವೆ). ಅಲ್ಲಾಹು ಮೂಸಾರೊಡನೆ ನೇರವಾಗಿ ಮಾತನಾಡಿದ್ದಾನೆ.
Kannada Translation - Hamza Buturಸುವಾರ್ತೆ ತಿಳಿಸುವ ಮತ್ತು ಮುನ್ನೆಚ್ಚರಿಕೆ ನೀಡುವ ಸಂದೇಶವಾಹಕರನ್ನು (ನಾವು ಕಳುಹಿಸಿದ್ದೇವೆ). ಸಂದೇಶವಾಹಕರನ್ನು ಕಳುಹಿಸಿದ ನಂತರ ಅಲ್ಲಾಹನಿಗೆದುರಾಗಿ ಜನರಿಗೆ ಯಾವುದೇ ಸಾಕ್ಷ್ಯಾಧಾರಗಳು ಇಲ್ಲದಿರುವುದಕ್ಕಾಗಿ. ಅಲ್ಲಾಹು ಪ್ರಬಲನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಆದರೆ ನಿಮಗೆ ಅವತೀರ್ಣಗೊಳಿಸಿದ ಸಂದೇಶಕ್ಕೆ ಅಲ್ಲಾಹು ಸಾಕ್ಷಿಯಾಗಿದ್ದಾನೆ. ಅವನು ಅದನ್ನು ಪೂರ್ಣ ತಿಳುವಳಿಕೆಯೊಂದಿಗೆ ಅವತೀರ್ಣಗೊಳಿಸಿದ್ದಾನೆ. ದೇವದೂತರುಗಳು ಕೂಡ ಅದಕ್ಕೆ ಸಾಕ್ಷಿಯಾಗಿದ್ದಾರೆ. ಸಾಕ್ಷಿಯಾಗಿ ಅಲ್ಲಾಹು ಸಾಕು.
Kannada Translation - Hamza Buturಸತ್ಯನಿಷೇಧಿಗಳು ಮತ್ತು ಅಕ್ರಮವೆಸಗಿದವರು ಯಾರೋ—ಅವರನ್ನು ಅಲ್ಲಾಹು ಎಂದಿಗೂ ಕ್ಷಮಿಸುವುದಿಲ್ಲ ಮತ್ತು ಅವರಿಗೆ ಯಾವುದೇ ಮಾರ್ಗವನ್ನು ತೋರಿಸುವುದಿಲ್ಲ.
Kannada Translation - Hamza Buturಓ ಜನರೇ! ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನಿಮ್ಮ ಬಳಿಗೆ ಸಂದೇಶವಾಹಕರು ಸತ್ಯಸಹಿತ ಬಂದಿದ್ದಾರೆ. ಆದ್ದರಿಂದ ಅವರಲ್ಲಿ ವಿಶ್ವಾಸವಿಡಿ. ಅದು ನಿಮಗೆ ಒಳಿತಾಗಿದೆ. ನೀವು ನಿಷೇಧಿಸಿದರೆ (ಅದರಿಂದ ಅಲ್ಲಾಹನಿಗೇನೂ ನಷ್ಟವಿಲ್ಲ). ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ಅಲ್ಲಾಹು ಎಲ್ಲವನ್ನು ತಿಳಿದವನು ಮತ್ತು ವಿವೇಕಪೂರ್ಣನಾಗಿದ್ದಾನೆ.
Kannada Translation - Hamza Buturಓ ಗ್ರಂಥದವರೇ! ನೀವು ನಿಮ್ಮ ಧರ್ಮದಲ್ಲಿ ಹದ್ದುಮೀರಿ ವರ್ತಿಸಬೇಡಿ. ಅಲ್ಲಾಹನ ಬಗ್ಗೆ ಸತ್ಯವನ್ನಲ್ಲದೆ ಬೇರೇನನ್ನೂ ಹೇಳಬೇಡಿ. ಮರ್ಯಮರ ಮಗ ಮಸೀಹ ಈಸಾ ಅಲ್ಲಾಹನ ಸಂದೇಶವಾಹಕರು, ಮರ್ಯಮರಿಗೆ ಅವನು ಹಾಕಿಕೊಟ್ಟ ಅವನ ವಚನ ಮತ್ತು ಅವನ ಕಡೆಯ ಒಂದು ಆತ್ಮವಾಗಿದ್ದಾರೆ. ಆದ್ದರಿಂದ ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರುಗಳಲ್ಲಿ ವಿಶ್ವಾಸವಿಡಿರಿ. ಮೂರು ಎಂದು ಹೇಳಬೇಡಿ.[1] ಹಾಗೆ ಹೇಳುವುದನ್ನು ನಿಲ್ಲಿಸಿದರೆ ನಿಮಗೇ ಒಳ್ಳೆಯದು. ಅಲ್ಲಾಹು ಏಕೈಕ ದೇವನಾಗಿದ್ದಾನೆ. ಮಕ್ಕಳು ಉಂಟಾಗುತ್ತಾರೆ ಎಂಬುದರಿಂದ ಅವನು ಎಷ್ಟೋ ಪರಿಶುದ್ಧನಾಗಿದ್ದಾನೆ. ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು.
Kannada Translation - Hamza Buturಅಲ್ಲಾಹನ ದಾಸನಾಗಿರಲು ಮಸೀಹರಿಗೆ ಯಾವುದೇ ತಿರಸ್ಕಾರವಿಲ್ಲ. (ಅಲ್ಲಾಹನ) ಸಾಮೀಪ್ಯವನ್ನು ಗಳಿಸಿದ ದೇವದೂತರುಗಳಿಗೂ ತಿರಸ್ಕಾರವಿಲ್ಲ.ಅಲ್ಲಾಹನನ್ನು ಆರಾಧಿಸಲು ತಿರಸ್ಕಾರ ಮಾಡುವವರು ಮತ್ತು ಅಹಂಕಾರಪಡುವವರು ಯಾರೋ—ಅವರೆಲ್ಲರನ್ನೂ ಅವನು ತನ್ನ ಬಳಿಗೆ ಒಟ್ಟುಗೂಡಿಸುವನು.
Kannada Translation - Hamza Buturಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರ ಪ್ರತಿಫಲವನ್ನು ಅವನು ಅವರಿಗೆ ಪೂರ್ಣವಾಗಿ ನೀಡುವನು ಮತ್ತು ತನ್ನ ಅನುಗ್ರಹದಿಂದ ಅವರಿಗೆ ಹೆಚ್ಚುವರಿಯನ್ನು ದಯಪಾಲಿಸುವನು. ಆದರೆ ತಿರಸ್ಕಾರ ಮಾಡುವವರು ಮತ್ತು ಅಹಂಕಾರಪಡುವವರು ಯಾರೋ—ಅವರಿಗೆ ಅವನು ಯಾತನಾಮಯ ಶಿಕ್ಷೆಯನ್ನು ನೀಡುವನು. ಅವರು ಅಲ್ಲಾಹನ ಹೊರತು ಯಾವುದೇ ರಕ್ಷಕನನ್ನು ಅಥವಾ ಸಹಾಯಕನನ್ನು ಕಾಣಲಾರರು.
Kannada Translation - Hamza Buturಓ ಮನುಷ್ಯರೇ! ನಿಶ್ಚಯವಾಗಿಯೂ ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸ್ಪಷ್ಟವಾದ ಸಾಕ್ಷ್ಯವು ಬಂದಿದೆ. ನಾವು ನಿಮಗೆ ಸ್ಪಷ್ಟ ಬೆಳಕನ್ನು ಇಳಿಸಿಕೊಟ್ಟಿದ್ದೇವೆ.
Kannada Translation - Hamza Buturಅಲ್ಲಾಹನಲ್ಲಿ ವಿಶ್ವಾಸವಿಟ್ಟು ಅವನನ್ನು ಬಿಗಿಯಾಗಿ ಹಿಡಿದುಕೊಳ್ಳುವವರು ಯಾರೋ—ಅವರನ್ನು ಅವನು ತನ್ನ ದಯೆ ಮತ್ತು ಅನುಗ್ರಹದಲ್ಲಿ ಸೇರಿಸುವನು. ಅವರನ್ನು ತನ್ನ ಬಳಿಗೆ ನೇರಮಾರ್ಗದಲ್ಲಿ ಮುನ್ನಡೆಸುವನು.
Kannada Translation - Hamza Buturಅವರು ತಮ್ಮೊಂದಿಗೆ ಧರ್ಮವಿಧಿಯನ್ನು ಕೇಳುತ್ತಾರೆ. ಹೇಳಿರಿ: “ತಂದೆ-ತಾಯಿ ಮತ್ತು ಮಕ್ಕಳಿಲ್ಲದವರ ಬಗ್ಗೆ ಅಲ್ಲಾಹು ನಿಮಗೆ ಧರ್ಮವಿಧಿಯನ್ನು ನೀಡುತ್ತಾನೆ.”[1] ಒಬ್ಬ ವ್ಯಕ್ತಿ ಸಾಯುವಾಗ ಸಂತಾನರಹಿತನಾಗಿದ್ದು ಅವನಿಗೆ ಒಬ್ಬ ಸಹೋದರಿ ಮಾತ್ರವಿದ್ದರೆ ಅವನು ಬಿಟ್ಟು ಹೋದ ಆಸ್ತಿಯಲ್ಲಿ ಅರ್ಧ ಭಾಗ ಅವಳಿಗೆ ದೊರೆಯುತ್ತದೆ. ಅವಳು ಸಂತಾನರಹಿತೆಯಾಗಿದ್ದು ಮರಣಹೊಂದಿದರೆ, ಅವಳ ಪೂರ್ಣ ಆಸ್ತಿಗೆ ಇವನು ವಾರಸುದಾರನಾಗುತ್ತಾನೆ. ಅವನಿಗೆ ಇಬ್ಬರು ಸಹೋದರಿಯರಿದ್ದರೆ ಅವನು ಬಿಟ್ಟು ಹೋದ ಆಸ್ತಿಯ ಮೂರನೇ ಎರಡು ಭಾಗವು ಅವರಿಗೆ ದೊರೆಯುತ್ತದೆ. ಅವನಿಗೆ ಅನೇಕ ಸಹೋದರ-ಸಹೋದರಿಯರಿದ್ದರೆ ಒಬ್ಬ ಪುರುಷನ ಪಾಲು ಇಬ್ಬರು ಮಹಿಳೆಯರ ಪಾಲಿಗೆ ಸಮಾನವಾಗಿದೆ. ನೀವು ದಾರಿತಪ್ಪದಿರಲು ಅಲ್ಲಾಹು ನಿಮಗೆ ವಿಷಯಗಳನ್ನು ಸ್ಪಷ್ಟಗೊಳಿಸುತ್ತಿದ್ದಾನೆ. ಅಲ್ಲಾಹು ಎಲ್ಲಾ ವಿಷಯಗಳನ್ನೂ ತಿಳಿದವನಾಗಿದ್ದಾನೆ.