Kannada Translation - Hamza Buturಜನರಿಗೆ ಮುನ್ನೆಚ್ಚರಿಕೆಯನ್ನು ನೀಡಿರಿ ಮತ್ತು ಸತ್ಯವಿಶ್ವಾಸಿಗಳಿಗೆ ಅವರ ಪರಿಪಾಲಕನ (ಅಲ್ಲಾಹನ) ಬಳಿ ಅವರ ಸತ್ಕರ್ಮಗಳ ಪೂರ್ಣ ಪ್ರತಿಫಲ ದೊರೆಯುವುದೆಯೆಂಬ ಶುಭವಾರ್ತೆಯನ್ನು ನೀಡಿರಿ ಎಂದು ನಾವು ಅವರಿಂದಲೇ ಇರುವ ಒಬ್ಬ ವ್ಯಕ್ತಿಗೆ ದಿವ್ಯವಾಣಿ ನೀಡಿರುವುದು ಜನರಿಗೆ ಅಚ್ಚರಿಯಾಗಿ ಕಾಣುತ್ತಿದೆಯೇ? ಸತ್ಯನಿಷೇಧಿಗಳು ಹೇಳಿದರು: “ನಿಶ್ಚಯವಾಗಿಯೂ ಇವನೊಬ್ಬ ಸ್ವತಃಸಿದ್ಧ ಮಾಟಗಾರನೇ ಸರಿ.”
Kannada Translation - Hamza Buturನಿಶ್ಚಯವಾಗಿಯೂ ಭೂಮ್ಯಾಕಾಶಗಳನ್ನು ಆರು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನೇ ನಿಮ್ಮ ಪರಿಪಾಲಕ. ನಂತರ (ಅವನ ಮಹಾತ್ಮೆಗೆ ಹೊಂದಿಕೆಯಾಗುವ ರೀತಿಯಲ್ಲಿ) ಅವನು ಸಿಂಹಾಸನದಲ್ಲಿ ಆರೂಢನಾದನು. ಅವನು ಎಲ್ಲಾ ವಿಷಯಗಳನ್ನೂ ನಿಯಂತ್ರಿಸುತ್ತಾನೆ. ಅವನ ಅಪ್ಪಣೆಯ ನಂತರವೇ ಹೊರತು ಯಾರಿಗೂ ಶಿಫಾರಸು ಮಾಡಲು ಸಾಧ್ಯವಿಲ್ಲ. ಅವನೇ ನಿಮ್ಮ ಪರಿಪಾಲಕನಾದ ಅಲ್ಲಾಹು. ಆದ್ದರಿಂದ ಅವನನ್ನು ಮಾತ್ರ ಆರಾಧಿಸಿರಿ. ನೀವು ಉಪದೇಶ ಸ್ವೀಕರಿಸುವುದಿಲ್ಲವೇ?
Kannada Translation - Hamza Buturನಿಮ್ಮೆಲ್ಲರನ್ನು ಅವನ ಬಳಿಗೇ ಮರಳಿಸಲಾಗುವುದು. ಇದು ಅಲ್ಲಾಹನ ಸತ್ಯ ವಾಗ್ದಾನವಾಗಿದೆ. ನಿಶ್ಚಯವಾಗಿಯೂ ಅವನು ಪ್ರಥಮ ಬಾರಿ ಸೃಷ್ಟಿಸುತ್ತಾನೆ. ನಂತರ ಸತ್ಯವಿಶ್ವಾಸಿಗಳಿಗೆ ಮತ್ತು ಸತ್ಕರ್ಮವೆಸಗಿದವರಿಗೆ ನ್ಯಾಯಯುತವಾದ ಪ್ರತಿಫಲವನ್ನು ನೀಡಲು ಆ ಸೃಷ್ಟಿಯನ್ನು ಪುನರಾವರ್ತಿಸುತ್ತಾನೆ. ಸತ್ಯವನ್ನು ನಿಷೇಧಿಸಿದವರು ಯಾರೋ—ಅವರು ಸತ್ಯವನ್ನು ನಿಷೇಧಿಸಿದ್ದಕ್ಕಾಗಿ ಅವರಿಗೆ ಕುದಿಯುವ ಪಾನೀಯ ಮತ್ತು ಯಾತನಾಮಯ ಶಿಕ್ಷೆಯಿದೆ.
Kannada Translation - Hamza Buturಸೂರ್ಯನನ್ನು ಹೊಳೆಯುವ ಪ್ರಕಾಶ ಮತ್ತು ಚಂದ್ರನನ್ನು ಬೆಳಕನ್ನಾಗಿ ಮಾಡಿದವನು ಅವನೇ. ನೀವು ವರ್ಷಗಳ ಸಂಖ್ಯೆ ಮತ್ತು ಲೆಕ್ಕವನ್ನು ತಿಳಿಯಲು ಅವನು ಅದಕ್ಕೆ (ಚಂದ್ರನಿಗೆ) ಕೆಲವು ಹಂತಗಳನ್ನು ನಿರ್ಣಯಿಸಿದನು. ಅಲ್ಲಾಹು ಅವುಗಳನ್ನು ಉದ್ದೇಶರಹಿತವಾಗಿ ಸೃಷ್ಟಿಸಿಲ್ಲ. ತಿಳುವಳಿಕೆಯಿರುವ ಜನರಿಗಾಗಿ ಅವನು ದೃಷ್ಟಾಂತಗಳನ್ನು ವಿವರಿಸಿಕೊಡುತ್ತಾನೆ.
Kannada Translation - Hamza Buturನಿಶ್ಚಯವಾಗಿಯೂ ರಾತ್ರಿ-ಹಗಲುಗಳ ಬದಲಾವಣೆಯಲ್ಲಿ ಮತ್ತು ಭೂಮ್ಯಾಕಾಶಗಳಲ್ಲಿ ಅಲ್ಲಾಹು ಸೃಷ್ಟಿಸಿದ ವಸ್ತುಗಳಲ್ಲಿ ದೇವಭಯವುಳ್ಳ ಜನರಿಗೆ ಅನೇಕ ದೃಷ್ಟಾಂತಗಳಿವೆ.
Kannada Translation - Hamza Buturನಿಶ್ಚಯವಾಗಿಯೂ ನಮ್ಮನ್ನು ಭೇಟಿಯಾಗುವ ವಿಷಯದಲ್ಲಿ ನಂಬಿಕೆಯಿಲ್ಲದವರು, ಇಹಲೋಕ ಜೀವನವನ್ನೇ ನೆಚ್ಚಿ, ಅದರಲ್ಲೇ ನೆಮ್ಮದಿಯನ್ನು ಬಯಸುವವರು ಮತ್ತು ನಮ್ಮ ದೃಷ್ಟಾಂತಗಳ ಬಗ್ಗೆ ಅಜ್ಞರಾಗಿರುವವರು.
Kannada Translation - Hamza Buturನಿಶ್ಚಯವಾಗಿಯೂ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರು ಯಾರೋ—ಅವರ ವಿಶ್ವಾಸದ ಕಾರಣದಿಂದಾಗಿ ಅವರ ಪರಿಪಾಲಕನು (ಅಲ್ಲಾಹು) ಅವರಿಗೆ ಸನ್ಮಾರ್ಗವನ್ನು ತೋರಿಸುವನು. ಅವರು ತಮ್ಮ ತಳಭಾಗದಿಂದ ನದಿಗಳು ಹರಿಯುವ ಸುಖ-ಸಮೃದ್ಧವಾದ ಸ್ವರ್ಗೋದ್ಯಾನಗಳಲ್ಲಿ ವಾಸಿಸುವರು.
Kannada Translation - Hamza Buturಅಲ್ಲಿ ಅವರ ಪ್ರಾರ್ಥನೆಯು, “ಓ ಅಲ್ಲಾಹ್! ನಿನ್ನ ಪರಿಶುದ್ಧತೆಯನ್ನು ನಾವು ಕೊಂಡಾಡುತ್ತೇವೆ” ಎಂದಾಗಿರುವುದು; ಅಲ್ಲಿ ಅವರ ಅಭಿವಂದನೆಯು, “ಅಸ್ಸಲಾಂ ಅಲೈಕುಂ” (ನಿಮ್ಮ ಮೇಲೆ ಶಾಂತಿಯಿರಲಿ) ಎಂದಾಗಿರುವುದು ಮತ್ತು ಅವರ ಕೊನೆಯ ಪ್ರಾರ್ಥನೆಯು, “ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಗೆ ಸರ್ವಸ್ತುತಿ” ಎಂದಾಗಿರುವುದು.
Kannada Translation - Hamza Buturಜನರು ಬೇಡುವ ಪ್ರಯೋಜನಗಳನ್ನು ನೀಡಲು ಅಲ್ಲಾಹು ತ್ವರೆ ಮಾಡುವಂತೆ, ಅವರು ಬೇಡುವ ಶಿಕ್ಷೆಗಳನ್ನು ನೀಡಲು ಕೂಡ ತ್ವರೆ ಮಾಡುತ್ತಿದ್ದರೆ ಅವರ ಜೀವಿತಾವಧಿಯು ಎಂದೋ ಮುಗಿದುಹೋಗುತ್ತಿತ್ತು. ನಮ್ಮನ್ನು ಭೇಟಿಯಾಗುವ ವಿಷಯದಲ್ಲಿ ನಂಬಿಕೆಯಿಲ್ಲದವರನ್ನು ನಾವು ಅವರ ಅತಿರೇಕಗಳೊಂದಿಗೆ ಅಂಧವಾಗಿ ವಿಹರಿಸಲು ಬಿಟ್ಟುಬಿಡುವೆವು.
Kannada Translation - Hamza Buturಮನುಷ್ಯನಿಗೆ ಕಷ್ಟ ಬಂದಾಗ ಅವನು ಪಾರ್ಶ್ವಕ್ಕೆ ಸರಿದು ಮಲಗಿಕೊಂಡು, ಕುಳಿತುಕೊಂಡು ಅಥವಾ ನಿಂತುಕೊಂಡು ನಮ್ಮನ್ನು (ಪದೇ ಪದೇ) ಕರೆದು ಪ್ರಾರ್ಥಿಸುತ್ತಾನೆ. ಆದರೆ ನಾವು ಅವನ ಕಷ್ಟವನ್ನು ನಿವಾರಿಸಿದಾಗ, ತನಗೆ ಬಂದ ಕಷ್ಟವನ್ನು ನಿವಾರಿಸಲು ಅವನು ನಮ್ಮನ್ನು ಕರೆಯಲೇ ಇಲ್ಲ ಎಂಬಂತೆ ಸಾಗಿಬಿಡುತ್ತಾನೆ. ಈ ರೀತಿ ಅತಿರೇಕಿಗಳಿಗೆ ಅವರು ಮಾಡುವ ಕರ್ಮಗಳನ್ನು ಅಲಂಕರಿಸಿಕೊಡಲಾಗಿದೆ.
Kannada Translation - Hamza Buturನಿಶ್ಚಯವಾಗಿಯೂ ನಿಮಗಿಂತ ಮೊದಲಿನ ಅನೇಕ ತಲೆಮಾರುಗಳು ಅಕ್ರಮವೆಸಗಿದಾಗ ನಾವು ಅವರನ್ನು ನಾಶ ಮಾಡಿದೆವು. ನಮ್ಮ ಸಂದೇಶವಾಹಕರು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದಿದ್ದರು. ಆದರೂ ಅವರು ವಿಶ್ವಾಸವಿಡಲಿಲ್ಲ. ಅಪರಾಧಿಗಳಾದ ಜನರಿಗೆ ಈ ರೀತಿ ನಾವು ಪ್ರತಿಫಲವನ್ನು ನೀಡುವೆವು.
Kannada Translation - Hamza Buturಅವರಿಗೆ ನಮ್ಮ ಸ್ಪಷ್ಟ ವಚನಗಳನ್ನು ಓದಿಕೊಡಲಾದರೆ, ನಮ್ಮನ್ನು ಭೇಟಿಯಾಗುವ ವಿಷಯದಲ್ಲಿ ನಂಬಿಕೆಯಿಲ್ಲದವರು ಹೇಳುತ್ತಾರೆ: “ಇದು ಬೇಡ, ನಮಗೆ ಇದಲ್ಲದ ಬೇರೊಂದು ಕುರ್ಆನನ್ನು ತಂದು ಕೊಡಿ, ಅಥವಾ ಇದರಲ್ಲಿ ಕೆಲವು ಬದಲಾವಣೆಗಳನ್ನು ಮಾಡಿರಿ.” ಹೇಳಿರಿ: “ಇದರಲ್ಲಿ ನನ್ನ ಕಡೆಯಿಂದ ಯಾವುದೇ ಬದಲಾವಣೆ ಮಾಡುವ ಹಕ್ಕು ನನಗಿಲ್ಲ. ನನಗೆ ನೀಡಲಾಗುವ ದೇವವಾಣಿಗಳನ್ನು ಮಾತ್ರ ನಾನು ಅನುಸರಿಸುತ್ತೇನೆ. ನಾನೇನಾದರೂ ನನ್ನ ಪರಿಪಾಲಕನ (ಅಲ್ಲಾಹನ) ಆಜ್ಞೆಗಳನ್ನು ಉಲ್ಲಂಘಿಸಿದರೆ, ನಿಶ್ಚಯವಾಗಿಯೂ ಒಂದು ಭಯಾನಕ ದಿನದ ಶಿಕ್ಷೆಯನ್ನು ನಾನು ಭಯಪಡುತ್ತೇನೆ.”
Kannada Translation - Hamza Buturಹೇಳಿರಿ: “ಅಲ್ಲಾಹು ಇಚ್ಛಿಸಿದ್ದರೆ ನಾನು ಇದನ್ನು ನಿಮಗೆ ಓದಿಕೊಡುತ್ತಿರಲಿಲ್ಲ ಮತ್ತು ಇದು ನಿಮಗೆ ತಿಳಿಯುವಂತೆ ಅವನು ಮಾಡುತ್ತಲೂ ಇರಲಿಲ್ಲ. ನಾನು ಇದಕ್ಕೆ ಮೊದಲು ಅನೇಕ ವರ್ಷಗಳ ಕಾಲ ನಿಮ್ಮೊಂದಿಗೆ ಬದುಕಿದ್ದೆ. ನೀವು ಅರ್ಥಮಾಡಿಕೊಳ್ಳುವುದಿಲ್ಲವೇ?”
Kannada Translation - Hamza Buturಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವನಿಗಿಂತ ಅಥವಾ ಅವನ ವಚನಗಳನ್ನು ನಿಷೇಧಿಸುವವನಿಗಿಂತ ದೊಡ್ಡ ಅಕ್ರಮಿ ಯಾರು? ನಿಶ್ಚಯವಾಗಿಯೂ ಅಪರಾಧಿಗಳು ಯಶಸ್ವಿಯಾಗುವುದಿಲ್ಲ.
Kannada Translation - Hamza Buturಅವರು ಅಲ್ಲಾಹನನ್ನು ಬಿಟ್ಟು ಅವರಿಗೆ ಯಾವುದೇ ಉಪಕಾರ ಅಥವಾ ತೊಂದರೆ ಮಾಡದವರನ್ನು ಆರಾಧಿಸುತ್ತಾರೆ. ಅವರು ಹೇಳುತ್ತಾರೆ: “ಇವರು ಅಲ್ಲಾಹನ ಬಳಿ ನಮಗೆ ಶಿಫಾರಸು ಮಾಡುತ್ತಾರೆ.” ಕೇಳಿರಿ: “ಭೂಮ್ಯಾಕಾಶಗಳಲ್ಲಿ ಅಲ್ಲಾಹನಿಗೆ ತಿಳಿಯದೇ ಇರುವ ಒಂದು ವಿಷಯವನ್ನು ನೀವು ಅವನಿಗೆ ತಿಳಿಸುತ್ತಿದ್ದೀರಾ?”[1] ಅವರು ಮಾಡುವ ಸಹಭಾಗಿತ್ವ (ಶಿರ್ಕ್) ದಿಂದ ಅವನು ಎಷ್ಟೋ ಪರಿಶುದ್ಧನು ಮತ್ತು ಉನ್ನತನಾಗಿದ್ದಾನೆ.
Kannada Translation - Hamza Buturಮನುಷ್ಯರೆಲ್ಲರೂ ಒಂದೇ ಸಮುದಾಯವಾಗಿದ್ದರು. ನಂತರ ಅವರಲ್ಲಿ ಭಿನ್ನಮತ ಉಂಟಾಯಿತು. ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಮೊದಲೇ ನಿಶ್ಚಯಿಸಲಾದ ಒಂದು ಮಾತು ಇಲ್ಲದಿರುತ್ತಿದ್ದರೆ, ಯಾವ ವಿಷಯದಲ್ಲಿ ಅವರು ಭಿನ್ನರಾದರೋ ಅದರ ಬಗ್ಗೆ ಈಗಾಗಲೇ ತೀರ್ಪು ನೀಡಲಾಗುತ್ತಿತ್ತು.
Kannada Translation - Hamza Buturಅವರು ಕೇಳುತ್ತಾರೆ: “ಅವರಿಗೆ (ಪ್ರವಾದಿಗೆ) ಅವರ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ದೃಷ್ಟಾಂತವೇಕೆ ಇಳಿಸಿಕೊಡಲಾಗಿಲ್ಲ?” ಹೇಳಿರಿ: “ಅದೃಶ್ಯಗಳ ಬಗ್ಗೆ ತಿಳಿದವನು ಅಲ್ಲಾಹು ಮಾತ್ರ. ನೀವು ಕಾಯಿರಿ. ನಿಶ್ಚಯವಾಗಿಯೂ ನಾನು ಕೂಡ ನಿಮ್ಮೊಂದಿಗೆ ಕಾಯುವೆನು.”
Kannada Translation - Hamza Buturಜನರಿಗೆ ಕಷ್ಟ ಬಂದ ಬಳಿಕ ನಾವು ಅವರಿಗೆ ನಮ್ಮ ದಯೆಯ ರುಚಿಯನ್ನು ತೋರಿಸಿದರೆ, ಅಗೋ ಅವರು ನಮ್ಮ ವಚನಗಳ ವಿರುದ್ಧ ಪಿತೂರಿ ಮಾಡುತ್ತಾರೆ. ಹೇಳಿರಿ: “ಅಲ್ಲಾಹು ನಿಮಗಿಂತಲೂ ವೇಗವಾಗಿ ತಂತ್ರಗಾರಿಕೆ ಮಾಡುತ್ತಾನೆ. ನಿಶ್ಚಯವಾಗಿಯೂ ನೀವು ಮಾಡುವ ಪಿತೂರಿಗಳನ್ನು ನಮ್ಮ ದೇವದೂತರು ದಾಖಲಿಸುತ್ತಿದ್ದಾರೆ.”
Kannada Translation - Hamza Buturನಿಮ್ಮನ್ನು ನೆಲದಲ್ಲಿ ಮತ್ತು ಕಡಲಲ್ಲಿ ಸಂಚರಿಸುವಂತೆ ಮಾಡುವವನು ಅವನೇ. ಎಲ್ಲಿಯವರೆಗೆಂದರೆ, ನೀವೊಂದು ನಾವೆಯಲ್ಲಿದ್ದು, ಉತ್ತಮ ಹವೆಯಿಂದಾಗಿ ಅವು ಯಾತ್ರಿಕರನ್ನು ಹೊತ್ತು ಚಲಿಸುತ್ತಿರುವಾಗ ಮತ್ತು ನೀವು ತುಂಬಾ ಸಂಭ್ರಮದಲ್ಲಿರುವಾಗ, ಇದ್ದಕ್ಕಿದ್ದಂತೆ ಒಂದು ಭೀಕರ ಬಿರುಗಾಳಿಯು ಬೀಸಿ, ಎಲ್ಲಾ ದಿಕ್ಕುಗಳಿಂದಲೂ ಹೆದ್ದೆರೆಗಳು ಎದ್ದು, ಸಾವು ತಮ್ಮನ್ನು ಆವರಿಸಿಕೊಂಡಿದೆಯೆಂದು ಅವರಿಗೆ ಖಾತ್ರಿಯಾದಾಗ, ಅವರು ಸಂಪೂರ್ಣ ನಿಷ್ಕಳಂಕತೆಯಿಂದ ಅಲ್ಲಾಹನನ್ನು ಕರೆದು ಪ್ರಾರ್ಥಿಸುತ್ತಾರೆ: “ನೀನು ನಮ್ಮನ್ನು ಇದರಿಂದ ಪಾರು ಮಾಡಿದರೆ ನಿಶ್ಚಯವಾಗಿಯೂ ನಾವು ನಿನಗೆ ಆಭಾರಿಯಾಗಿರುತ್ತೇವೆ.”
Kannada Translation - Hamza Buturಆದರೆ ಅವನು ಅವರನ್ನು ಪಾರು ಮಾಡಿದಾಗ, ಅಗೋ ಅವರು ಅನ್ಯಾಯವಾಗಿ ಭೂಮಿಯಲ್ಲಿ ಅತಿರೇಕವೆಸಗುತ್ತಾರೆ. ಓ ಮನುಷ್ಯರೇ! ನೀವು ಮಾಡುವ ಅತಿರೇಕಗಳ ದುಷ್ಫಲವನ್ನು ನೀವೇ ಉಣ್ಣುತ್ತೀರಿ. ಅವು ಇಹಲೋಕದ ಕೆಲವು ಆನಂದಗಳು ಮಾತ್ರ. ನಂತರ ನಿಮ್ಮನ್ನು ನಮ್ಮ ಬಳಿಗೆ ಮರಳಿಸಲಾಗುವುದು. ಆಗ ನೀವು ಮಾಡಿದ ಕರ್ಮಗಳನ್ನು ನಾವು ನಿಮಗೆ ತಿಳಿಸಿಕೊಡುವೆವು.
Kannada Translation - Hamza Buturಇಹಲೋಕದ ಉದಾಹರಣೆಯು ಒಂದು ಮಳೆಯಂತೆ. ನಾವು ಅದನ್ನು ಆಕಾಶದಿಂದ ಇಳಿಸಿದೆವು. ಆಗ ಅದರೊಂದಿಗೆ ಭೂಮಿಯಲ್ಲಿ ಮನುಷ್ಯರು ಮತ್ತು ಜಾನುವಾರುಗಳು ತಿನ್ನುವ ಸಸ್ಯಲತಾದಿಗಳು ಬೆರೆತು ಬೆಳೆದವು. ಎಲ್ಲಿಯವರೆಗೆಂದರೆ, ಭೂಮಿ ತನ್ನ ಶೃಂಗಾರವನ್ನು ಧರಿಸಿ ಅಲಂಕಾರದಿಂದ ಕಂಗೊಳಿಸಿದಾಗ ಮತ್ತು ಭೂಮಿಯನ್ನು ನಿಯಂತ್ರಿಸುವ ಸಾಮರ್ಥ್ಯ ನಮಗಿದೆಯೆಂದು ಭೂನಿವಾಸಿಗಳು ಭಾವಿಸಿದಾಗ, ಒಂದು ರಾತ್ರಿಯಲ್ಲಿ ಅಥವಾ ಹಗಲಲ್ಲಿ ನಮ್ಮ ಆಜ್ಞೆಯು ಅದಕ್ಕೆ ಬಂದುಬಿಟ್ಟಿತು. ಆಗ ನಿನ್ನೆ ಅಲ್ಲಿ ಏನೂ ಇರಲಿಲ್ಲವೋ ಎಂಬಂತೆ ನಾವು ಅವುಗಳನ್ನು ಸಂಪೂರ್ಣ ನಾಶ ಮಾಡಿದೆವು. ಆಲೋಚಿಸುವ ಜನರಿಗೆ ನಾವು ಈ ರೀತಿಯಲ್ಲಿ ದೃಷ್ಟಾಂತಗಳನ್ನು ವಿವರಿಸಿಕೊಡುವೆವು.
Kannada Translation - Hamza Buturಒಳಿತು ಮಾಡಿದವರಿಗೆ ಅತ್ಯುತ್ತಮ ಪ್ರತಿಫಲವಿದೆ ಮತ್ತು ಹೆಚ್ಚಳವೂ[1] ಇದೆ. ಅವರ ಮುಖಗಳನ್ನು ಅಂಧಕಾರ ಮತ್ತು ಅಪಮಾನವು ಆವರಿಸುವುದಿಲ್ಲ. ಅವರೇ ಸ್ವರ್ಗವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Kannada Translation - Hamza Buturಕೆಡುಕುಗಳನ್ನು ಮಾಡಿದವರು ಯಾರೋ—ಅವರ ಕೆಡುಕಿಗೆ ಸಮಾನವಾದ ಶಿಕ್ಷೆಯು ಅವರಿಗೆ ದೊರೆಯಲಿದೆ ಮತ್ತು ಅಪಮಾನವು ಅವರನ್ನು ಆವರಿಸಲಿದೆ. ಅಲ್ಲಾಹನ ಶಿಕ್ಷೆಯಿಂದ ಅವರನ್ನು ರಕ್ಷಿಸುವವರು ಯಾರೂ ಇಲ್ಲ. ಕಾರ್ಗತ್ತಲ ರಾತ್ರಿಯ ತುಣುಕುಗಳು ಅವರ ಮುಖಗಳನ್ನು ಆವರಿಸಿಕೊಂಡಿದೆಯೋ ಎಂಬಂತೆ (ಅವರು ಕಪ್ಪಾಗಿರುವರು). ಅವರೇ ನರಕವಾಸಿಗಳು. ಅವರು ಅದರಲ್ಲಿ ಶಾಶ್ವತವಾಗಿ ವಾಸಿಸುವರು.
Kannada Translation - Hamza Buturನಾವು ಅವರೆಲ್ಲರನ್ನೂ ಒಟ್ಟುಗೂಡಿಸುವ ದಿನ. ನಂತರ ನಾವು ಬಹುದೇವಾರಾಧಕರೊಡನೆ ಹೇಳುವೆವು: “ನೀವು ಮತ್ತು ನಿಮ್ಮ ಸಹಭಾಗಿಗಳು (ದೇವರುಗಳು) ಅಲ್ಲೇ ನಿಲ್ಲಿರಿ.” ನಂತರ ನಾವು ಅವರನ್ನು ಬೇರ್ಪಡಿಸುವೆವು. ಆಗ ಅವರ ಸಹಭಾಗಿಗಳು (ದೇವರುಗಳು) ಅವರೊಡನೆ ಹೇಳುವರು: “ನೀವು ನಮ್ಮನ್ನು ಆರಾಧಿಸುತ್ತಿರಲಿಲ್ಲ.
Kannada Translation - Hamza Buturಅಲ್ಲಿ ಪ್ರತಿಯೊಬ್ಬನೂ ತಾನು ಈಗಾಗಲೇ ಮಾಡಿಟ್ಟ ಕರ್ಮಗಳನ್ನು ತನಿಖೆ ಮಾಡುವನು. ಅವರನ್ನು ಅವರ ನೈಜ ರಕ್ಷಕನಾದ ಅಲ್ಲಾಹನ ಬಳಿಗೆ ಮರಳಿಸಲಾಗುವುದು. ಅವರು ಆರೋಪಿಸುತ್ತಿದ್ದ ಸುಳ್ಳುಗಳೆಲ್ಲವೂ ಅವರಿಂದ ಮಾಯವಾಗಿ ಬಿಡುವುವು.
Kannada Translation - Hamza Buturಕೇಳಿರಿ: “ಆಕಾಶದಿಂದ ಮತ್ತು ಭೂಮಿಯಿಂದ ನಿಮಗೆ ಆಹಾರವನ್ನು ಒದಗಿಸುವುದು ಯಾರು? ನಿಮ್ಮ ಶ್ರವಣ ಮತ್ತು ದೃಷ್ಟಿ ಯಾರ ನಿಯಂತ್ರಣದಲ್ಲಿದೆ? ನಿರ್ಜೀವಿಯಿಂದ ಜೀವಿಯನ್ನು ಮತ್ತು ಜೀವಿಯಿಂದ ನಿರ್ಜೀವಿಯನ್ನು ಹೊರತರುವುದು ಯಾರು? ಜಗತ್ತಿನ ಎಲ್ಲಾ ವಿಷಯಗಳನ್ನು ನಿಯಂತ್ರಿಸುವುದು ಯಾರು?” ಆಗ ಅವರು ಹೇಳುವರು: “ಅಲ್ಲಾಹು.” ಕೇಳಿರಿ: “ಆದರೂ ನೀವು ಅಲ್ಲಾಹನನ್ನು ಭಯಪಡುವುದಿಲ್ಲವೇ?”
Kannada Translation - Hamza Buturಅವನೇ ನಿಮ್ಮ ನೈಜ ಪರಿಪಾಲಕನಾದ ಅಲ್ಲಾಹು. ಸತ್ಯದ ನಂತರ ದುರ್ಮಾರ್ಗವಲ್ಲದೆ ಇನ್ನೇನಿದೆ? ಹಾಗಿದ್ದೂ ನೀವು (ಸತ್ಯದಿಂದ) ತಿರುಗಿಸಲ್ಪಡುತ್ತಿರುವುದು ಹೇಗೆ?
Kannada Translation - Hamza Buturಈ ರೀತಿ ಆ ದುಷ್ಕರ್ಮಿಗಳಿಗೆ ಸಂಬಂಧಿಸಿದಂತೆ “ಅವರು ವಿಶ್ವಾಸವಿಡುವುದಿಲ್ಲ” ಎಂಬ ನಿಮ್ಮ ಪರಿಪಾಲಕನ (ಅಲ್ಲಾಹನ) ವಚನವು ಸತ್ಯವಾಗಿ ಪರಿಣಮಿಸಿದೆ.
Kannada Translation - Hamza Buturಕೇಳಿರಿ: “ನೀವು (ಅಲ್ಲಾಹನೊಂದಿಗೆ) ಸಹಭಾಗಿಗಳನ್ನಾಗಿ ಮಾಡಿದವರಲ್ಲಿ (ನಿಮ್ಮ ದೇವರುಗಳಲ್ಲಿ) ಸೃಷ್ಟಿಯನ್ನು ಆರಂಭಿಸುವವರು ಮತ್ತು ನಂತರ ಅದನ್ನು ಪುನರಾವರ್ತಿಸುವವರು ಯಾರಾದರೂ ಇದ್ದಾರೆಯೇ?” ಹೇಳಿರಿ: “ಅಲ್ಲಾಹು ಸೃಷ್ಟಿಯನ್ನು ಆರಂಭಿಸುತ್ತಾನೆ ಮತ್ತು ನಂತರ ಅದನ್ನು ಪುನರಾವರ್ತಿಸುತ್ತಾನೆ. ಹಾಗಿದ್ದೂ ನೀವು (ಸತ್ಯದಿಂದ) ತಪ್ಪಿಸಲ್ಪಡುತ್ತಿರುವುದು ಹೇಗೆ?”
Kannada Translation - Hamza Buturಕೇಳಿರಿ: “ನೀವು (ಅಲ್ಲಾಹನೊಂದಿಗೆ) ಸಹಭಾಗಿಗಳನ್ನಾಗಿ ಮಾಡಿದವರಲ್ಲಿ (ನಿಮ್ಮ ದೇವರುಗಳಲ್ಲಿ) ಸತ್ಯಮಾರ್ಗವನ್ನು ತೋರಿಸುವವರು ಯಾರಾದರೂ ಇದ್ದಾರೆಯೇ?” ಹೇಳಿರಿ: “ಅಲ್ಲಾಹು ಸತ್ಯಮಾರ್ಗವನ್ನು ತೋರಿಸುತ್ತಾನೆ. ಹಾಗಾದರೆ, ಅನುಸರಿಸಲು ಹೆಚ್ಚು ಹಕ್ಕಿರುವವನು ಸತ್ಯಮಾರ್ಗವನ್ನು ತೋರಿಸುವವನೋ ಅಥವಾ ಬೇರೆ ಯಾರಾದರೂ ಸತ್ಯಮಾರ್ಗವನ್ನು ತೋರಿಸಿದ ವಿನಾ ಸ್ವಯಂ ಸತ್ಯಮಾರ್ಗವನ್ನು ಕಾಣಲು ಸಾಧ್ಯವಾಗದವನೋ? ನಿಮಗೇನಾಗಿದೆ? ನೀವು ಹೇಗೆ ತೀರ್ಪು ನೀಡುತ್ತೀರಿ?”
Kannada Translation - Hamza Buturಅವರಲ್ಲಿ ಹೆಚ್ಚಿನವರು ಊಹಾಪೋಹಗಳನ್ನು ಮಾತ್ರ ಹಿಂಬಾಲಿಸುತ್ತಾರೆ. ಸತ್ಯವನ್ನು ತಿಳಿಯುವ ವಿಷಯದಲ್ಲಿ ಊಹಾಪೋಹಗಳು ಖಂಡಿತ ಉಪಕಾರ ಮಾಡುವುದಿಲ್ಲ. ನಿಶ್ಚಯವಾಗಿಯೂ ಅವರು ಮಾಡುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹು ಬಹಳ ಚೆನ್ನಾಗಿ ತಿಳಿದಿದ್ದಾನೆ.
Kannada Translation - Hamza Buturಈ ಕುರ್ಆನ್ ಅಲ್ಲಾಹನಿಂದಲ್ಲದೆ ಇನ್ನಾರಿಂದಲೂ ರಚಿಸಲು ಸಾಧ್ಯವಿಲ್ಲ. ವಾಸ್ತವವಾಗಿ, ಇದು ಇದಕ್ಕಿಂತ ಮೊದಲು ಅವತೀರ್ಣವಾದ ಗ್ರಂಥಗಳ ದೃಢೀಕರಣ ಮತ್ತು ಗ್ರಂಥದ (ನಿಯಮಗಳ) ವಿವರಣೆಯಾಗಿದೆ. ಇದು ಸರ್ವಲೋಕಗಳ ಪರಿಪಾಲಕನಾದ ಅಲ್ಲಾಹನಿಂದ ಅವತೀರ್ಣವಾಗಿದೆ ಎಂಬ ವಿಷಯದಲ್ಲಿ ಸಂದೇಹವೇ ಇಲ್ಲ.
Kannada Translation - Hamza Buturಇದನ್ನು ಪ್ರವಾದಿಯವರು ಸ್ವಯಂ ರಚಿಸಿದರೆಂದು ಅವರು ಹೇಳುತ್ತಿದ್ದಾರೆಯೇ? ಹೇಳಿರಿ: “ಸರಿ, ಹಾಗಾದರೆ ನೀವು ಕೂಡ ಇದರಂತಿರುವ ಒಂದು ಅಧ್ಯಾಯವನ್ನು ರಚಿಸಿ ತನ್ನಿ. ಅಲ್ಲಾಹನ ಹೊರತು ನಿಮಗೆ ಸಾಧ್ಯವಿರುವ ಎಲ್ಲರನ್ನೂ ಕರೆಯಿರಿ. ನೀವು ಸತ್ಯವನ್ನೇ ಹೇಳುತ್ತಿದ್ದರೆ.”
Kannada Translation - Hamza Buturಬದಲಿಗೆ, ಯಾವುದನ್ನು ಅವರು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲಿಲ್ಲವೋ ಮತ್ತು ಯಾವುದರ ಫಲಿತಾಂಶವು ಅವರನ್ನು ತಲುಪಲಿಲ್ಲವೋ ಅದನ್ನು ಅವರು ನಿಷೇಧಿಸಿದರು. ಅವರಿಗಿಂತ ಮೊದಲಿನವರೂ ಹೀಗೆಯೇ ನಿಷೇಧಿಸಿದ್ದರು. ಆದ್ದರಿಂದ, ಅಕ್ರಮಿಗಳ ಅಂತ್ಯವು ಹೇಗಿತ್ತೆಂದು ನೋಡಿರಿ.
Kannada Translation - Hamza Buturಅವರಲ್ಲಿ ಕೆಲವರು ಅದರಲ್ಲಿ (ಕುರ್ಆನಿನಲ್ಲಿ) ವಿಶ್ವಾಸವಿಡುತ್ತಾರೆ ಮತ್ತು ಕೆಲವರು ವಿಶ್ವಾಸವಿಡುವುದಿಲ್ಲ. ಅಲ್ಲಾಹು ಕಿಡಿಗೇಡಿಗಳ ಬಗ್ಗೆ ಬಹಳ ಚೆನ್ನಾಗಿ ತಿಳಿದಿದ್ದಾನೆ.
Kannada Translation - Hamza Buturಅವರು ನಿಮ್ಮನ್ನು ನಿಷೇಧಿಸಿದರೆ ಹೇಳಿರಿ: “ನನಗೆ ನನ್ನ ಕರ್ಮ ಮತ್ತು ನಿಮಗೆ ನಿಮ್ಮ ಕರ್ಮ. ನಾನು ಮಾಡುವ ಕರ್ಮಗಳಿಂದ ನೀವು ಹೊಣೆಮುಕ್ತರಾಗಿದ್ದೀರಿ ಮತ್ತು ನೀವು ಮಾಡುವ ಕರ್ಮಗಳಿಂದ ನಾನು ಹೊಣೆಮುಕ್ತನಾಗಿದ್ದೇನೆ.”
Kannada Translation - Hamza Buturಅವರಲ್ಲಿ ಕೆಲವರು ನೀವು ಹೇಳುವುದನ್ನು ಕಿವಿಗೊಟ್ಟು ಕೇಳುತ್ತಾರೆ. ಆದರೆ ಆ ಕಿವುಡರಿಗೆ (ನಿಮ್ಮ ಸಂದೇಶವು) ಕೇಳುವಂತೆ ಮಾಡಲು ನಿಮಗೆ ಸಾಧ್ಯವೇ? ಅವರು ಅದನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡದಿದ್ದರೂ ಸಹ?
Kannada Translation - Hamza Buturಅವರಲ್ಲಿ ಕೆಲವರು ನಿಮ್ಮನ್ನು ನೋಡುತ್ತಾರೆ. ಆದರೆ ಆ ಕುರುಡರಿಗೆ ದಾರಿ ತೋರಿಸಲು ನಿಮಗೆ ಸಾಧ್ಯವೇ? ಅವರು ನೋಡುವ ಪ್ರಯತ್ನ ಮಾಡದಿದ್ದರೂ ಸಹ?[1]
Kannada Translation - Hamza Buturಅವನು ಅವರನ್ನು ಒಟ್ಟುಗೂಡಿಸುವ ದಿನ ಹಗಲಿನ ಕೆಲವು ತಾಸುಗಳು ಮಾತ್ರ (ಭೂಲೋಕದಲ್ಲಿ) ವಾಸವಾಗಿದ್ದೆವೋ ಎಂಬಂತೆ ಅವರಿಗೆ ಭಾಸವಾಗುವುದು. ಅವರು ಪರಸ್ಪರ ಗುರುತಿಸುವರು. ಅಲ್ಲಾಹನ ಭೇಟಿಯನ್ನು ನಿಷೇಧಿಸಿದವರು ನಷ್ಟಹೊಂದಿದರು. ಅವರು ಸನ್ಮಾರ್ಗ ಪಡೆದವರಾಗಲಿಲ್ಲ.
Kannada Translation - Hamza Buturನಾವು ಅವರಿಗೆ ವಾಗ್ದಾನ ಮಾಡುವ ಶಿಕ್ಷೆಗಳಲ್ಲಿ ಕೆಲವನ್ನು ನಾವು ನಿಮಗೆ ತೋರಿಸಿಕೊಟ್ಟರೂ ಅಥವಾ (ಅದಕ್ಕಿಂತ ಮೊದಲೇ) ನಾವು ನಿಮ್ಮನ್ನು ಮೃತಪಡಿಸಿದರೂ ಅವರು ಮರಳುವುದು ನಮ್ಮ ಬಳಿಗೇ ಆಗಿದೆ. ನಂತರ, ಅವರು ಮಾಡುವ ಎಲ್ಲಾ ಕರ್ಮಗಳಿಗೂ ಅಲ್ಲಾಹು ಸಾಕ್ಷಿಯಾಗಿದ್ದಾನೆ.
Kannada Translation - Hamza Buturಎಲ್ಲಾ ಸಮುದಾಯಗಳಿಗೂ ಒಬ್ಬ ಸಂದೇಶವಾಹಕರಿದ್ದಾರೆ. ಅವರ ಸಂದೇಶವಾಹಕರ ಆಗಮನವಾದರೆ, ಅವರ ಮಧ್ಯೆ ನ್ಯಾಯಯುತವಾಗಿ ತೀರ್ಪು ನೀಡಲಾಗುವುದು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.[1]
Kannada Translation - Hamza Buturಹೇಳಿರಿ: “ನಾನು ಸ್ವಯಂ ನನಗೆ ಯಾವುದೇ ಪ್ರಯೋಜನ ಅಥವಾ ತೊಂದರೆ ಮಾಡುವ ಸಾಮರ್ಥ್ಯವನ್ನು ಹೊಂದಿಲ್ಲ. ಅಲ್ಲಾಹು ಏನು ಇಚ್ಛಿಸುತ್ತಾನೋ ಅದರ ಹೊರತು. ಎಲ್ಲಾ ಸಮುದಾಯಗಳಿಗೂ ಒಂದು ಅವಧಿಯಿದೆ. ಅವರ ಅವಧಿಯು ಬಂದರೆ, ಒಂದು ಕ್ಷಣ ಹಿಂದೂಡಲು ಅಥವಾ ಮುಂದೂಡಲು ಅವರಿಂದ ಸಾಧ್ಯವಿಲ್ಲ.”
Kannada Translation - Hamza Buturಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹನ ಶಿಕ್ಷೆಯು ನಿಮ್ಮ ಬಳಿಗೆ ರಾತ್ರಿಯಲ್ಲಿ ಅಥವಾ ಹಗಲಿನಲ್ಲಿ ಬಂದರೆ, ಅದರಲ್ಲಿ ಯಾವುದಕ್ಕಾಗಿ ಅಪರಾಧಿಗಳು ತ್ವರೆ ಮಾಡುತ್ತಿದ್ದಾರೆ?”
Kannada Translation - Hamza Buturನಂತರ ಅದು ಬಂದ ಬಳಿಕ ನೀವು ಅದನ್ನು ನಂಬುವಿರಾ? (ಆಗ ನಿಮ್ಮೊಡನೆ ಹೇಳಲಾಗುವುದು): “ಈಗ ನೀವು ನಂಬುತ್ತೀರಾ? ನೀವು ಇದಕ್ಕಾಗಿ ತ್ವರೆ ಮಾಡುತ್ತಿದ್ದಿರಲ್ಲವೇ?”
Kannada Translation - Hamza Buturನಂತರ ಅಕ್ರಮಿಗಳೊಡನೆ ಹೇಳಲಾಗುವುದು: “ಶಾಶ್ವತ ಶಿಕ್ಷೆಯ ರುಚಿಯನ್ನು ನೋಡಿರಿ. ನೀವು ಮಾಡಿದ ಕರ್ಮಗಳಿಗಲ್ಲದೆ ಬೇರೇನಾದರೂ ನಿಮಗೆ ಪ್ರತಿಫಲ ನೀಡಲಾಗುವುದೇ?”
Kannada Translation - Hamza Butur“ಅದು ನಿಜವೇ?” ಎಂದು ಅವರು ನಿಮ್ಮೊಡನೆ ವಿಚಾರಿಸುತ್ತಾರೆ. ಹೇಳಿರಿ: “ಹೌದು! ನನ್ನ ಪರಿಪಾಲಕನ (ಅಲ್ಲಾಹನ) ಆಣೆ! ನಿಶ್ಚಯವಾಗಿಯೂ ಅದು ಸತ್ಯವಾಗಿದೆ. ನಿಮಗೆ ಅಲ್ಲಾಹನನ್ನು ಸೋಲಿಸಲು ಸಾಧ್ಯವಿಲ್ಲ.”
Kannada Translation - Hamza Buturಅಕ್ರಮವೆಸಗಿದ ಪ್ರತಿಯೊಬ್ಬ ವ್ಯಕ್ತಿಯ ಬಳಿ ಭೂಮಿಯಲ್ಲಿರುವುದೆಲ್ಲವೂ ಇದ್ದರೂ ಅವನು ಅವೆಲ್ಲವನ್ನೂ ಪರಿಹಾರವಾಗಿ ನೀಡಿಯಾದರೂ ಶಿಕ್ಷೆಯಿಂದ ಪಾರಾಗಲು ಬಯಸುತ್ತಿದ್ದನು. ಶಿಕ್ಷೆಯನ್ನು ಕಾಣುವಾಗ ಅವರು ತಮ್ಮ ವಿಷಾದವನ್ನು ಅಡಗಿಸುವರು. ಅವರ ನಡುವೆ ನ್ಯಾಯಯುತವಾಗಿ ತೀರ್ಪು ನೀಡಲಾಗುವುದು. ಅವರಿಗೆ ಸ್ವಲ್ಪವೂ ಅನ್ಯಾಯವಾಗುವುದಿಲ್ಲ.
Kannada Translation - Hamza Buturತಿಳಿಯಿರಿ! ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅಲ್ಲಾಹನಿಗೆ ಸೇರಿದ್ದು. ತಿಳಿಯಿರಿ! ನಿಶ್ಚಯವಾಗಿಯೂ ಅಲ್ಲಾಹನ ವಾಗ್ದಾನವು ಸತ್ಯವಾಗಿದೆ. ಆದರೆ ಅವರಲ್ಲಿ ಹೆಚ್ಚಿನವರು ತಿಳಿಯುವುದಿಲ್ಲ.
Kannada Translation - Hamza Buturಓ ಮನುಷ್ಯರೇ! ನಿಮಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಒಂದು ಉಪದೇಶವು ಬಂದಿದೆ. ಅದು ಹೃದಯಗಳಲ್ಲಿರುವ ರೋಗಕ್ಕೆ ಉಪಶಮನವಾಗಿದೆ ಮತ್ತು ಸತ್ಯವಿಶ್ವಾಸಿಗಳಿಗೆ ಸನ್ಮಾರ್ಗ ಹಾಗೂ ದಯೆಯಾಗಿದೆ.
Kannada Translation - Hamza Buturಹೇಳಿರಿ: “ಅಲ್ಲಾಹನ ಈ ಔದಾರ್ಯ ಮತ್ತು ದಯೆಯಿಂದ ಅವರು (ಸತ್ಯವಿಶ್ವಾಸಿಗಳು) ಸಂತೋಷಪಡಲಿ. ಅವರು ಶೇಖರಿಸುವ ಎಲ್ಲಾ ವಸ್ತುಗಳಿಗಿಂತಲೂ ಇದು ಶ್ರೇಷ್ಠವಾಗಿದೆ.”
Kannada Translation - Hamza Buturಹೇಳಿರಿ: “ನೀವು ಆಲೋಚಿಸಿ ನೋಡಿದ್ದೀರಾ! ಅಲ್ಲಾಹು ನಿಮಗೆ ಏನೆಲ್ಲಾ ಆಹಾರಗಳನ್ನು ಒದಗಿಸಿದ್ದಾನೋ ಅವುಗಳಲ್ಲಿ ಕೆಲವನ್ನು ನೀವು ನಿಷೇಧಿಸಿದ್ದೀರಿ ಮತ್ತು ಕೆಲವನ್ನು ಅನುಮತಿಸಿದ್ದೀರಿ.” ಕೇಳಿರಿ: “ಹೀಗೆ ಮಾಡಲು ಅಲ್ಲಾಹು ನಿಮಗೆ ಆಜ್ಞಾಪಿಸಿದನೇ? ಅಥವಾ ನೀವು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುತ್ತಿದ್ದೀರಾ?”
Kannada Translation - Hamza Buturಪುನರುತ್ಥಾನದ ದಿನದಂದು ಅಲ್ಲಾಹನ ಮೇಲೆ ಸುಳ್ಳು ಆರೋಪಿಸುವವರ ಭಾವನೆ ಏನಿರಬಹುದು? ನಿಶ್ಚಯವಾಗಿಯೂ ಅಲ್ಲಾಹನಿಗೆ ಜನರ ಮೇಲೆ ಮಹಾ ಔದಾರ್ಯವಿದೆ. ಆದರೆ ಅವರಲ್ಲಿ ಹೆಚ್ಚಿನವರೂ ಕೃತಜ್ಞರಾಗುವುದಿಲ್ಲ.
Kannada Translation - Hamza Buturನೀವು ಯಾವುದೇ ಕೆಲಸದಲ್ಲಿ ನಿರತರಾಗಿದ್ದರೂ, ನೀವು ಕುರ್ಆನಿನ ಯಾವುದೇ ಭಾಗವನ್ನು ಪಠಿಸುತ್ತಿದ್ದರೂ, ಮತ್ತು ನೀವು (ಜನರು) ಯಾವುದೇ ಕೆಲಸವನ್ನು ಮಾಡುತ್ತಿದ್ದರೂ, ನೀವು ಅದರಲ್ಲಿ ಮುಳುಗಿರುವಾಗ ನಾವು ನಿಮ್ಮ ಮೇಲೆ ಸಂಪೂರ್ಣ ಸಾಕ್ಷಿಯಾಗಿರುತ್ತೇವೆ. ಭೂಮಿಯಲ್ಲಿ ಅಥವಾ ಆಕಾಶದಲ್ಲಿರುವ ಒಂದು ಅಣುವಿನ ತೂಕದಷ್ಟಿರುವ—ಅಥವಾ ಅದಕ್ಕಿಂತ ಚಿಕ್ಕ ಅಥವಾ ಅದಕ್ಕಿಂತ ದೊಡ್ಡ—ಯಾವುದೇ ಒಂದು ವಸ್ತುವೂ ನಿಮ್ಮ ಪರಿಪಾಲಕನ (ಅಲ್ಲಾಹನ) ದೃಷ್ಟಿಯಿಂದ ಮರೆಯಾಗಿಲ್ಲ. ಎಲ್ಲವನ್ನೂ ಒಂದು ಸ್ಪಷ್ಟ ದಾಖಲೆಯಲ್ಲಿ ನಮೂದಿಸಿಡಲಾಗಿದೆ.
Kannada Translation - Hamza Buturಅವರ ಮಾತುಗಳು ನಿಮ್ಮನ್ನು ಬೇಸರಗೊಳಿಸದಿರಲಿ. ನಿಶ್ಚಯವಾಗಿಯೂ ಪ್ರಾಬಲ್ಯವು ಸಂಪೂರ್ಣವಾಗಿ ಅಲ್ಲಾಹನಿಗೆ ಮಾತ್ರವಿದೆ. ಅವನು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
Kannada Translation - Hamza Buturತಿಳಿಯಿರಿ! ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವ ಎಲ್ಲರೂ ಅಲ್ಲಾಹನಿಗೆ ಸೇರಿದವರು. ಅಲ್ಲಾಹನ ಬಿಟ್ಟು ಅವನೊಂದಿಗೆ ಸಹಭಾಗಿಗಳನ್ನಾಗಿ ಮಾಡಿದ ದೇವರುಗಳನ್ನು ಕರೆದು ಪ್ರಾರ್ಥಿಸುವವರು ಏನನ್ನು ಹಿಂಬಾಲಿಸುತ್ತಾರೆ? ಅವರು ಕೇವಲ ಊಹಾ-ಪೋಹಗಳನ್ನು ಮಾತ್ರ ಹಿಂಬಾಲಿಸುತ್ತಾರೆ. ಅವರು ಸುಳ್ಳನ್ನು ಮಾತ್ರ ಆರೋಪಿಸುತ್ತಾರೆ.
Kannada Translation - Hamza Buturನಿಮಗೆ ವಿಶ್ರಾಂತಿ ಪಡೆಯಲು ರಾತ್ರಿಯನ್ನು ಮಾಡಿದವನು ಮತ್ತು (ನಿಮ್ಮ ಉಪಜೀವನಕ್ಕಾಗಿ) ಹಗಲನ್ನು ಪ್ರಕಾಶಮಯವಾಗಿ ಮಾಡಿದವನು ಅವನೇ. ನಿಶ್ಚಯವಾಗಿಯೂ ಕಿವಿಗೊಡುವ ಜನರಿಗೆ ಅದರಲ್ಲಿ ಅನೇಕ ದೃಷ್ಟಾಂತಗಳಿವೆ.
Kannada Translation - Hamza Buturಅವರು ಹೇಳಿದರು: “ಅಲ್ಲಾಹನಿಗೆ ಮಕ್ಕಳಿದ್ದಾರೆ.” ಅವನು ಪರಮ ಪರಿಶುದ್ಧನು. ಅವನಿಗೆ ಯಾರ ಅಗತ್ಯವೂ ಇಲ್ಲ. ಭೂಮ್ಯಾಕಾಶಗಳಲ್ಲಿರುವುದೆಲ್ಲವೂ ಅವನಿಗೆ ಸೇರಿದ್ದು. ಹೀಗೆ ಹೇಳಲು ನಿಮ್ಮ ಬಳಿ ಏನಾದರೂ ಸಾಕ್ಷ್ಯಾಧಾರವಿದೆಯೇ? ನಿಮಗೆ ಗೊತ್ತಿಲ್ಲದ ವಿಷಯಗಳನ್ನು ನೀವು ಅಲ್ಲಾಹನ ಮೇಲೆ ಆರೋಪಿಸುತ್ತೀರಾ?
Kannada Translation - Hamza Buturಅವರಿಗಿರುವುದು ಇಹಲೋಕದ ಆನಂದ ಮಾತ್ರ. ನಂತರ ಅವರನ್ನು ನಮ್ಮ ಬಳಿಗೆ ಮರಳಿಸಲಾಗುತ್ತದೆ. ನಂತರ, ಅವರು ಸತ್ಯವನ್ನು ನಿಷೇಧಿಸಿದ್ದಕ್ಕಾಗಿ ನಾವು ಅವರಿಗೆ ಕಠೋರ ಶಿಕ್ಷೆಯ ರುಚಿಯನ್ನು ತೋರಿಸುವೆವು.
Kannada Translation - Hamza Buturಅವರಿಗೆ ನೂಹರ ಸಮಾಚಾರವನ್ನು ಓದಿಕೊಡಿ. ಅವರು ತಮ್ಮ ಜನರೊಡನೆ ಹೇಳಿದ ಸಂದರ್ಭ: “ಓ ನನ್ನ ಜನರೇ! ನಾನು ನಿಮ್ಮ ನಡುವೆಯಿರುವುದು ಮತ್ತು ನಾನು ಅಲ್ಲಾಹನ ವಚನಗಳನ್ನು ಪಠಿಸಿ ಉಪದೇಶ ನೀಡುವುದು ನಿಮಗೆ ದೊಡ್ಡ ಹೊರೆಯಂತೆ ಕಾಣುತ್ತಿದ್ದರೆ, ನಾನಂತೂ ಅಲ್ಲಾಹನಲ್ಲಿ ಭರವಸೆಯಿದ್ದೇನೆ; ನೀವು ನಿಮ್ಮೆಲ್ಲಾ ಷಡ್ಯಂತ್ರಗಳನ್ನು ಒಟ್ಟುಗೂಡಿಸಿ ನಿಮ್ಮ ಸಹಭಾಗಿಗಳನ್ನು (ದೇವರುಗಳನ್ನು) ಕರೆಯಿರಿ. ನಂತರ ನಿಮ್ಮ ಷಡ್ಯಂತ್ರವು (ಫಲಿಸುತ್ತದೋ ಇಲ್ಲವೋ ಎಂಬ) ವಿಷಯದಲ್ಲಿ ನಿಮಗೆ ಯಾವುದೇ ಅಸ್ಪಷ್ಟತೆ ಇರದಂತೆ ನೋಡಿಕೊಳ್ಳಿ. ನಂತರ ನೀವು ಅದನ್ನು ನನ್ನ ಮೇಲೆ ಪ್ರಯೋಗಿಸಿರಿ. ನನಗೆ ಸ್ವಲ್ಪವೂ ಕಾಲಾವಕಾಶ ನೀಡಬೇಡಿ.
Kannada Translation - Hamza Buturಇದರ ನಂತರವೂ ನೀವು (ನನ್ನ ಸಂದೇಶಕ್ಕೆ ಕಿವಿಗೊಡದೆ) ವಿಮುಖರಾಗಿ ಹೋಗುವುದಾದರೆ, ನಾನು ನಿಮ್ಮಲ್ಲಿ ಯಾವುದೇ ಪ್ರತಿಫಲವನ್ನು ಬೇಡಿಲ್ಲ. ನನಗೆ ಪ್ರತಿಫಲ ನೀಡಬೇಕಾದವನು ಅಲ್ಲಾಹು ಮಾತ್ರ. ನಾನು ಮುಸಲ್ಮಾನರಲ್ಲಿ (ಅಲ್ಲಾಹನಿಗೆ ಶರಣಾದವರಲ್ಲಿ) ಸೇರಬೇಕೆಂದು ನನಗೆ ಆಜ್ಞಾಪಿಸಲಾಗಿದೆ.”
Kannada Translation - Hamza Buturಆದರೆ ಅವರು ನೂಹರನ್ನು ನಿಷೇಧಿಸಿದರು. ಆಗ ನಾವು ನೂಹರನ್ನು ಮತ್ತು ನಾವೆಯಲ್ಲಿ ಅವರ ಜೊತೆಗಿದ್ದವರನ್ನು ರಕ್ಷಿಸಿ, ಅವರನ್ನು (ಭೂಮಿಯಲ್ಲಿ) ಉತ್ತರಾಧಿಕಾರಿಗಳನ್ನಾಗಿ ಮಾಡಿದೆವು. ನಮ್ಮ ವಚನಗಳನ್ನು ನಿಷೇಧಿಸಿದ ಜನರನ್ನು ನಾವು ಮುಳುಗಿಸಿ ಕೊಂದೆವು. ಎಚ್ಚರಿಕೆ ನೀಡಲಾದ ಆ ಜನರ ಅಂತ್ಯವು ಹೇಗಿತ್ತು ಎಂದು ನೋಡಿ.
Kannada Translation - Hamza Buturನಂತರ, ಅವರ ಬಳಿಕ ನಾವು ಆಯಾ ಸಮುದಾಯಗಳಿಗೆ ಅನೇಕ ಸಂದೇಶವಾಹಕರುಗಳನ್ನು ಕಳುಹಿಸಿದೆವು. ಆ ಸಂದೇಶವಾಹಕರುಗಳು ಸ್ಪಷ್ಟ ಸಾಕ್ಷ್ಯಾಧಾರಗಳೊಂದಿಗೆ ಅವರ ಬಳಿಗೆ ಬಂದರು. ಆದರೂ, ಇದಕ್ಕೆ ಮೊದಲು ಅವರು ನಿಷೇಧಿಸಿದ ಆ ಸಂಗತಿಯಲ್ಲಿ ವಿಶ್ವಾಸವಿಡಲು ಅವರು ಸಿದ್ಧರಾಗಲಿಲ್ಲ. ಈ ರೀತಿ ನಾವು ಅತಿರೇಕಿಗಳ ಹೃದಯಗಳಿಗೆ ಮೊಹರು ಹಾಕುತ್ತೇವೆ.
Kannada Translation - Hamza Buturನಂತರ, ಅವರ ಬಳಿಕ ನಾವು ಮೂಸಾ ಮತ್ತು ಹಾರೂನರನ್ನು ನಮ್ಮ ದೃಷ್ಟಾಂತಗಳೊಂದಿಗೆ ಫರೋಹ ಹಾಗೂ ಅವನ ಜನರ ಮುಖಂಡರ ಬಳಿಗೆ ಕಳುಹಿಸಿದೆವು. ಆದರೆ ಅವರು ಅಹಂಕಾರದಿಂದ ವರ್ತಿಸಿದರು. ಅವರು ಅಪರಾಧಿಗಳಾದ ಜನರಾಗಿದ್ದರು.
Kannada Translation - Hamza Buturಮೂಸಾ ಹೇಳಿದರು: “ನೀವು ಈ ಸತ್ಯದ ಬಗ್ಗೆ ಅದು ನಿಮ್ಮ ಬಳಿಗೆ ಬಂದಾಗ ಹೀಗೆ ಹೇಳುವುದೇ? ಇದು ಮಾಟಗಾರಿಕೆಯೇ? ವಾಸ್ತವವಾಗಿ ಮಾಟಗಾರರು ಯಶಸ್ವಿಯಾಗುವುದಿಲ್ಲ.”
Kannada Translation - Hamza Buturಅವರು ಹೇಳಿದರು: “ನಮ್ಮ ಪೂರ್ವಜರು ಯಾವ ಮಾರ್ಗದಲ್ಲಿರುವುದನ್ನು ನಾವು ಕಂಡಿದ್ದೇವೆಯೋ ಆ ಮಾರ್ಗದಿಂದ ನಮ್ಮನ್ನು ತಿರುಗಿಸಲು ಮತ್ತು ಭೂಮಿಯಲ್ಲಿ ನಿಮಗಿಬ್ಬರಿಗೆ ಶ್ರೇಷ್ಠತೆ ದೊರೆಯುವಂತಾಗಲು ನೀವು ನಮ್ಮ ಬಳಿಗೆ ಬಂದಿದ್ದೀರಾ? ನಾವು ನಿಮ್ಮಿಬ್ಬರಲ್ಲಿ ಎಂದಿಗೂ ವಿಶ್ವಾಸವಿಡುವುದಿಲ್ಲ.”
Kannada Translation - Hamza Buturಮೂಸಾರ ಜನರಲ್ಲಿ ಸೇರಿದ ಕೆಲವು ಯುವಕರ ಹೊರತು ಬೇರೆ ಯಾರೂ ಅವರಲ್ಲಿ ವಿಶ್ವಾಸವಿಡಲಿಲ್ಲ. ಅದೂ ಸಹ ಫರೋಹ ಮತ್ತು ಅವರ ಮುಖಂಡರು ಅವರನ್ನು ಹಿಂಸೆಗೆ ಗುರಿಯಾಗಿಸುವರೋ ಎಂಬ ಭಯದಿಂದ. ನಿಶ್ಚಯವಾಗಿಯೂ ಫರೋಹ ಭೂಮಿಯಲ್ಲಿ ದರ್ಪ ತೋರುತ್ತಿದ್ದನು. ನಿಶ್ಚಯವಾಗಿಯೂ ಅವನು ಹದ್ದು ಮೀರಿದವನಾಗಿದ್ದನು.
Kannada Translation - Hamza Buturಆಗ ಅವರು ಹೇಳಿದರು: “ನಾವು ಅಲ್ಲಾಹನಲ್ಲಿ ಭರವಸೆಯಿಟ್ಟಿದ್ದೇವೆ. ಓ ನಮ್ಮ ಪರಿಪಾಲಕನೇ! ಈ ಅಕ್ರಮಿಗಳಾದ ಜನರಿಗೆ ನಮ್ಮನ್ನು ಪರೀಕ್ಷೆಯ ವಸ್ತುವಾಗಿ ಮಾಡಬೇಡ.
Kannada Translation - Hamza Buturಮೂಸಾ ಮತ್ತು ಅವರ ಸಹೋದರನಿಗೆ ನಾವು ದೇವವಾಣಿಯನ್ನು ನೀಡಿದೆವು: “ನೀವು ನಿಮ್ಮ ಜನರಿಗೆ ಈಜಿಪ್ಟಿನಲ್ಲಿ ವಾಸ್ತವ್ಯಗಳನ್ನು ಮಾಡಿಕೊಡಿ, ಮತ್ತು ನಿಮ್ಮ ಮನೆಗಳನ್ನು ಆರಾಧನಾಲಯಗಳಾಗಿ ಮಾಡಿ ನಮಾಝನ್ನು ಸಂಸ್ಥಾಪಿಸಿರಿ. ಸತ್ಯವಿಶ್ವಾಸಿಗಳಿಗೆ ಶುಭವಾರ್ತೆಯನ್ನು ತಿಳಿಸಿ.”[1]
Kannada Translation - Hamza Buturಮೂಸಾ ಹೇಳಿದರು: “ಓ ನಮ್ಮ ಪರಿಪಾಲಕನೇ! ನಿಶ್ಚಯವಾಗಿಯೂ ನೀನು ಫರೋಹ ಮತ್ತು ಅವನ ಜನರ ಮುಖಂಡರಿಗೆ ಇಹಲೋಕದಲ್ಲಿ ವೈಭವ ಮತ್ತು ಐಶ್ವರ್ಯವನ್ನು ನೀಡಿರುವೆ. ಓ ನಮ್ಮ ಪರಿಪಾಲಕನೇ! ಜನರನ್ನು ನಿನ್ನ ಮಾರ್ಗದಿಂದ ತಪ್ಪಿಸುವುದಕ್ಕಾಗಿ (ಅವರು ಅದನ್ನು ಬಳಸುತ್ತಾರೆ). ಓ ನಮ್ಮ ಪರಿಪಾಲಕನೇ! ಅವರ ಐಶ್ವರ್ಯವನ್ನು ನಾಶ ಮಾಡು ಮತ್ತು ಅವರ ಹೃದಯಗಳನ್ನು ಕಠೋರಗೊಳಿಸು. ಯಾತನಾಮಯ ಶಿಕ್ಷೆಯನ್ನು ನೋಡುವ ತನಕ ಅವರು ವಿಶ್ವಾಸವಿಡದಿರಲಿ.”
Kannada Translation - Hamza Buturಅಲ್ಲಾಹು ಹೇಳಿದನು: “ನಿಮ್ಮಿಬ್ಬರ ಪ್ರಾರ್ಥನೆಗೆ ಉತ್ತರ ನೀಡಲಾಗಿದೆ. ಆದ್ದರಿಂದ ನೀವಿಬ್ಬರೂ ದೃಢವಾಗಿ ನಿಲ್ಲಿರಿ ಮತ್ತು ತಿಳುವಳಿಕೆಯಿಲ್ಲದ ಜನರ ಮಾರ್ಗವನ್ನು ಹಿಂಬಾಲಿಸಬೇಡಿ.”
Kannada Translation - Hamza Buturನಾವು ಇಸ್ರಾಯೇಲ್ ಮಕ್ಕಳನ್ನು ಸಮುದ್ರ ದಾಟಿಸಿದೆವು. ಆಗ ಫರೋಹ ಮತ್ತು ಅವನ ಸೈನ್ಯವು ದಬ್ಬಾಳಿಕೆ ಮತ್ತು ದ್ವೇಷದೊಂದಿಗೆ ಅವರನ್ನು ಹಿಂಬಾಲಿಸಿದರು. ಎಲ್ಲಿಯವರೆಗೆಂದರೆ, ಅವನು ಮುಳುಗಿ ಸಾಯುವಂತಾದಾಗ ಹೇಳಿದನು: “ಇಸ್ರಾಯೇಲ್ ಮಕ್ಕಳು ನಂಬಿದ ದೇವನ (ಅಲ್ಲಾಹನ) ಹೊರತು ಆರಾಧಿಸಲು ಅರ್ಹರಾದ ಬೇರೆ ದೇವರಿಲ್ಲ ಎಂದು ನಾನು ವಿಶ್ವಾಸವಿಟ್ಟಿದ್ದೇನೆ. ನಾನು ಮುಸಲ್ಮಾನರಲ್ಲಿ ಸೇರಿದ್ದೇನೆ.”
Kannada Translation - Hamza Butur(ಅವನೊಡನೆ ಹೇಳಲಾಯಿತು): “ಈಗ ನೀನು ವಿಶ್ವಾಸವಿಡುವುದೇ? ಇದಕ್ಕೆ ಮೊದಲು ನೀನು ಆಜ್ಞೋಲ್ಲಂಘನೆ ಮಾಡಿದ್ದೆ ಮತ್ತು ಕಿಡಿಗೇಡಿಗಳಲ್ಲಿ ಸೇರಿದ್ದೆ.[1]
Kannada Translation - Hamza Buturಇಂದು ನಾವು ನಿನ್ನ ದೇಹವನ್ನು ಉಳಿಸುವೆವು.[1] ನಿನ್ನ ನಂತರ ಬರುವವರಿಗೆ ನೀನೊಂದು ನಿದರ್ಶನವಾಗುವುದಕ್ಕಾಗಿ. ನಿಶ್ಚಯವಾಗಿಯೂ ಜನರಲ್ಲಿ ಹೆಚ್ಚಿನವರು ನಮ್ಮ ನಿದರ್ಶನಗಳ ಬಗ್ಗೆ ನಿರ್ಲಕ್ಷ್ಯರಾಗಿದ್ದಾರೆ.”
Kannada Translation - Hamza Buturನಿಶ್ಚಯವಾಗಿಯೂ ನಾವು ಇಸ್ರಾಯೇಲ್ ಮಕ್ಕಳಿಗೆ ಅತ್ಯುತ್ತಮವಾದ ವಾಸ್ತವ್ಯವನ್ನು ಮಾಡಿಕೊಟ್ಟೆವು ಮತ್ತು ಅವರಿಗೆ ಶುದ್ಧ ವಸ್ತುಗಳನ್ನು ಆಹಾರವಾಗಿ ನೀಡಿದೆವು. ಜ್ಞಾನವು ಅವರ ಬಳಿಗೆ ಬರುವ ತನಕ ಅವರು ಭಿನ್ನರಾಗಲಿಲ್ಲ. ನಿಶ್ಚಯವಾಗಿಯೂ ತಮ್ಮ ಪರಿಪಾಲಕನು (ಅಲ್ಲಾಹು) ಅವರು ಭಿನ್ನರಾದ ವಿಷಯದ ಬಗ್ಗೆ ಪುನರುತ್ಥಾನ ದಿನದಂದು ತೀರ್ಪು ನೀಡುವನು.
Kannada Translation - Hamza Buturನಾವು ನಿಮಗೆ ಅವತೀರ್ಣಗೊಳಿಸಿದ ಸಂದೇಶದಲ್ಲಿ ನಿಮಗೇನಾದರೂ ಸಂಶಯವಿದ್ದರೆ, ನಿಮಗಿಂತ ಮೊದಲು ಗ್ರಂಥವನ್ನು ಪಠಿಸುತ್ತಿದ್ದವರೊಡನೆ ಕೇಳಿ ನೋಡಿ. ನಿಮ್ಮ ಬಳಿಗೆ ನಿಮ್ಮ ಪರಿಪಾಲಕನಿಂದ (ಅಲ್ಲಾಹನಿಂದ) ಸತ್ಯವು ಬಂದಿದೆ. ಆದ್ದರಿಂದ ನೀವೆಂದೂ ಸಂಶಯಗ್ರಸ್ತರಲ್ಲಿ ಸೇರಬೇಡಿ.
Kannada Translation - Hamza Buturಎಲ್ಲಾ ರೀತಿಯ ದೃಷ್ಟಾಂತಗಳು ಅವರ ಬಳಿಗೆ ಬಂದರೂ ಸಹ (ಅವರು ವಿಶ್ವಾಸವಿಡುವುದಿಲ್ಲ). ಎಲ್ಲಿಯವರೆಗೆಂದರೆ, ಯಾತನಾಮಯ ಶಿಕ್ಷೆಯನ್ನು ಅವರು ನೇರವಾಗಿ ನೋಡುವ ತನಕ.
Kannada Translation - Hamza Buturಯಾವುದೇ ಒಂದು ಊರು ಕೂಡ—ಅದರ ಜನರು ವಿಶ್ವಾಸವಿಟ್ಟು ಆ ವಿಶ್ವಾಸವು ಅವರಿಗೆ ಪ್ರಯೋಜನ ನೀಡಿದ ಇತಿಹಾಸವಿಲ್ಲ; ಯೂನುಸರ ಊರಿನ ಜನರ ಹೊರತು. ಅವರು ವಿಶ್ವಾಸವಿಟ್ಟಾಗ, ಇಹಲೋಕದ ನಾವು ಅವರಿಂದ ಅಪಮಾನಕರ ಶಿಕ್ಷೆಯನ್ನು ನಿವಾರಿಸಿದೆವು ಮತ್ತು ಒಂದು ಅವಧಿಯ ತನಕ ಅವರಿಗೆ (ಇಹಲೋಕದಲ್ಲಿ) ಸವಲತ್ತುಗಳನ್ನು ನೀಡಿದೆವು.[1]
Kannada Translation - Hamza Buturನಿಮ್ಮ ಪರಿಪಾಲಕನು (ಅಲ್ಲಾಹು) ಇಚ್ಛಿಸಿದ್ದರೆ ಭೂಮಿಯಲ್ಲಿರುವವರೆಲ್ಲರೂ ಸಂಪೂರ್ಣವಾಗಿ ವಿಶ್ವಾಸವಿಡುತ್ತಿದ್ದರು. ಹಾಗಿರುವಾಗ, ಜನರು ಸತ್ಯವಿಶ್ವಾಸಿಗಳಾಗಲು ನೀವು ಅವರನ್ನು ಬಲವಂತಪಡಿಸುವಿರಾ?
Kannada Translation - Hamza Buturಹೇಳಿರಿ: “ಭೂಮ್ಯಾಕಾಶಗಳಲ್ಲಿ ಏನೆಲ್ಲಾ ಇವೆಯೆಂದು ನೋಡಿರಿ.” ವಿಶ್ವಾಸವಿಡದ ಜನರಿಗೆ ದೃಷ್ಟಾಂತಗಳು ಮತ್ತು ಎಚ್ಚರಿಕೆಗಳು ಯಾವುದೇ ಪ್ರಯೋಜನ ನೀಡುವುದಿಲ್ಲ.
Kannada Translation - Hamza Buturಅವರಿಗಿಂತ ಮೊದಲು ಜೀವಿಸಿದ್ದ ಜನರಿಗೆ ಎದುರಾದಂತಹ ದಿನಗಳನ್ನೇ ಹೊರತು ಬೇರೇನಾದರೂ ಇವರು ಕಾಯುತ್ತಿದ್ದಾರೆಯೇ? ಹೇಳಿರಿ: “ನೀವು ಕಾಯಿರಿ. ನಿಶ್ಚಯವಾಗಿಯೂ ನಿಮ್ಮ ಜೊತೆಗೆ ಕಾಯುವವರಲ್ಲಿ ನಾನು ಕೂಡ ಇದ್ದೇನೆ.”
Kannada Translation - Hamza Buturನಂತರ ನಾವು ನಮ್ಮ ಸಂದೇಶವಾಹಕರುಗಳನ್ನು ಮತ್ತು ಸತ್ಯವಿಶ್ವಾಸಿಗಳನ್ನು ರಕ್ಷಿಸುವೆವು. ಈ ರೀತಿ ಸತ್ಯವಿಶ್ವಾಸಿಗಳನ್ನು ರಕ್ಷಿಸುವುದು ನಮ್ಮ ಕರ್ತವ್ಯವಾಗಿದೆ.
Kannada Translation - Hamza Buturಹೇಳಿರಿ: “ಓ ಜನರೇ! ನನ್ನ ಧರ್ಮದ ಬಗ್ಗೆ ನೀವೇನಾದರೂ ಸಂಶಯದಲ್ಲಿದ್ದರೆ, ನೀವು ಅಲ್ಲಾಹನನ್ನು ಬಿಟ್ಟು ಆರಾಧಿಸುವ ನಿಮ್ಮ ದೇವರುಗಳನ್ನು ನಾನಂತೂ ಆರಾಧಿಸುವುದಿಲ್ಲ. ಆದರೆ ನಿಮ್ಮ ಆತ್ಮವನ್ನು ವಶಪಡಿಸುವ ಅಲ್ಲಾಹನನ್ನು ಮಾತ್ರ ನಾನು ಆರಾಧಿಸುತ್ತೇನೆ. ಸತ್ಯವಿಶ್ವಾಸಿಗಳೊಡನೆ ಸೇರಲು ನನಗೆ ಆಜ್ಞಾಪಿಸಲಾಗಿದೆ.
Kannada Translation - Hamza Buturನೀವು ಅಲ್ಲಾಹನನ್ನು ಬಿಟ್ಟು ನಿಮಗೆ ಉಪಕಾರ ಅಥವಾ ತೊಂದರೆ ಮಾಡದ ಯಾರನ್ನೂ ಕರೆದು ಪ್ರಾರ್ಥಿಸಬೇಡಿ. ನೀವೇನಾದರೂ ಹಾಗೆ ಮಾಡಿದರೆ ನಿಶ್ಚಯವಾಗಿಯೂ ನೀವು ಅಕ್ರಮಿಗಳಲ್ಲಿ ಸೇರುವಿರಿ.
Kannada Translation - Hamza Buturಅಲ್ಲಾಹು ನಿಮಗೇನಾದರೂ ತೊಂದರೆ ನೀಡಿದರೆ, ಅದನ್ನು ಅವನ ಹೊರತು ನಿವಾರಿಸಲು ಯಾರಿಗೂ ಸಾಧ್ಯವಿಲ್ಲ. ಅವನು ನಿಮಗೇನಾದರೂ ಒಳಿತನ್ನು ಉದ್ದೇಶಿಸಿದರೆ, ಅವನ ಔದಾರ್ಯವನ್ನು ತಡೆಯಲು ಯಾರಿಗೂ ಸಾಧ್ಯವಿಲ್ಲ. ತನ್ನ ದಾಸರಲ್ಲಿ ಅವನು ಇಚ್ಛಿಸಿದವರಿಗೆ ಅದನ್ನು (ಔದಾರ್ಯವನ್ನು) ತಲುಪಿಸುತ್ತಾನೆ. ಅವನು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Kannada Translation - Hamza Buturಹೇಳಿರಿ: “ಓ ಜನರೇ! ನಿಮ್ಮ ಪರಿಪಾಲಕನ (ಅಲ್ಲಾಹನ) ಕಡೆಯಿಂದ ನಿಮ್ಮ ಬಳಿಗೆ ಸತ್ಯವು ಬಂದಿದೆ. ಆದ್ದರಿಂದ ಯಾರಾದರೂ ಸನ್ಮಾರ್ಗವನ್ನು ಸ್ವೀಕರಿಸಿದರೆ ಅವನು ಅವನ ಒಳಿತಿಗಾಗಿಯೇ ಅದನ್ನು ಸ್ವೀಕರಿಸುತ್ತಾನೆ. ಯಾರಾದರೂ ದುರ್ಮಾರ್ಗವನ್ನು ಆರಿಸಿದರೆ ಅವನು ಅವನ ಕೆಡುಕಿಗಾಗಿಯೇ ಅದನ್ನು ಆರಿಸುತ್ತಾನೆ. ನನಗೆ ನಿಮ್ಮ ಮೇಲೆ ಯಾವುದೇ ಅಧಿಕಾರವಿಲ್ಲ.”
Kannada Translation - Hamza Buturನಿಮಗೆ ದೇವವಾಣಿಯಾಗಿ ನೀಡಲಾಗುವುದನ್ನು ಅನುಸರಿಸಿರಿ ಮತ್ತು ಅಲ್ಲಾಹು ತೀರ್ಪು ನೀಡುವ ತನಕ ತಾಳ್ಮೆಯಿಂದಿರಿ. ತೀರ್ಪು ನೀಡುವವರಲ್ಲಿ ಅವನು ಅತಿಶ್ರೇಷ್ಠನಾಗಿದ್ದಾನೆ.